Advertisement

ಕಣಿವೆ ರಾಜ್ಯದಲ್ಲಿ ಉಗ್ರ ದಾಳಿ ನಡೆಸಲು ನೇಪಾಳದಲ್ಲಿ ಹೊಸ ನೆಲೆ ಕಂಡುಕೊಂಡ ಐಎಸ್ಐ!

11:42 AM Jun 19, 2019 | Team Udayavani |

ನವದೆಹಲಿ:ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಭಾರತೀಯ ಸೇನಾ ಪಡೆ ಭದ್ರತೆಯನ್ನು ಹೆಚ್ಚಿಸಿದ ಪರಿಣಾಮ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಪಾಕಿಸ್ತಾನಕ್ಕೆ ತಲೆನೋವಾಗಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐಎಸ್ ಐ ಇದೀಗ ನೇಪಾಳದಲ್ಲಿ ನೆಲೆಕಂಡುಕೊಳ್ಳುವ ಮೂಲಕ ಉಗ್ರ ಚಟುವಟಿಕೆ ನಡೆಸಲು ಮುಂದಾಗಿದೆ ಎಂದು ಆಂಗ್ಲ ವೆಬ್ ಸೈಟ್ ವರದಿ ಮಾಡಿದೆ.

Advertisement

ಗುಪ್ತಚರ ವರದಿ ಪ್ರಕಾರ, ಕಳೆದ ಕೆಲವು ತಿಂಗಳಿನಿಂದ ನೇಪಾಳದಲ್ಲಿ ಉಗ್ರಗಾಮಿ ಸಂಘಟನೆಯ ಕಮಾಂಡರ್ಸ್ ಗಳು ಮತ್ತು ಐಎಸ್ ಐ ಏಜೆಂಟರುಗಳು ಮಾತುಕತೆ ನಡೆಸಿರುವುದಾಗಿ ತಿಳಿಸಿದೆ. ಜೀ ನ್ಯೂಸ್ ಗೆ ಮೂಲಗಳು ತಿಳಿಸಿರುವ ಪ್ರಕಾರ, ಜಮ್ಮು-ಕಾಶ್ಮೀರದಿಂದ ಇಬ್ಬರು ಉಗ್ರರು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನೇಪಾಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಐಎಸ್ ಐ ಆಯೋಜಿಸಿದ್ದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಉನ್ನತ ಕಮಾಂಡರ್ ಗಳ ಜೊತೆ ಚರ್ಚಿಸಿರುವುದಾಗಿ ವಿವರಿಸಿದೆ.

ಮಾತುಕತೆ ವೇಳೆ ಜಮ್ಮು-ಕಾಶ್ಮೀರದ ಉಗ್ರರು ಮೂವರು ಹೊಸ ಉಗ್ರರನ್ನು ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಪರಿಚಯಿಸಿದ್ದಾರೆನ್ನಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಐದು ಮಂದಿ ಉಗ್ರರನ್ನು ಜಮ್ಮು-ಕಾಶ್ಮೀರದಿಂದ ಕಳುಹಿಸಿದ್ದು, ಇವರಿಗೆ ಭಾರತ ವಿರುದ್ಧ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗುವಂತೆ ಸೂಚನೆ ನೀಡಿದ್ದಾರೆಂದು ವರದಿ ವಿವರಿಸಿದೆ.

ಭಾರತೀಯ ಭದ್ರತಾ ಪಡೆ ಮೇಲೆ ದಾಳಿ ನಡೆಸುವಂತೆ ಐಎಸ್ ಐ ಉಗ್ರರಿಗೆ ಸೂಚನೆ ನೀಡಿದ್ದು, ಏತನ್ಮಧ್ಯೆ ಭಾರತೀಯ ಸೇನಾಪಡೆ ಮತ್ತು ಗುಪ್ತಚರ ಇಲಾಖೆ ಸೂಕ್ಷ್ಮವಾಗಿ ಈ ಬೆಳವಣಿಗೆಯನ್ನು ಗಮನಿಸುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ.

ನೇಪಾಳದ ಮೂಲಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸುವುದು ಐಎಸ್ ಐ ಹೊಸ ತಂತ್ರಗಾರಿಕೆಯಾಗಿದೆ ಎಂದು ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿಯಲ್ಲಿ ಬಿಗಿ ಭದ್ರತೆ ಹೆಚ್ಚಳ ಹಾಗೂ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisement

ಕಳೆದ ಕೆಲವು ತಿಂಗಳಿನಿಂದ ಜಮ್ಮು-ಕಾಶ್ಮೀರದಿಂದ ಎಷ್ಟು ಮಂದಿ ಉಗ್ರರು ನೇಪಾಳಕ್ಕೆ ತೆರಳಿದ್ದಾರೆಂಬ ಮಾಹಿತಿ ಕಲೆ ಹಾಕಲು ಗುಪ್ತಚರ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next