Advertisement

ಭಾರತದೊಂದಿಗೆ ವ್ಯಾಪಾರ ನಿಷೇಧ: ಉಲ್ಟಾ ಹೊಡೆದ ಪಾಕಿಸ್ಥಾನ!

09:51 AM Sep 05, 2019 | Team Udayavani |

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಎಗರಾಡುತ್ತಿದ್ದ ಪಾಕಿಸ್ಥಾನ ಈಗ ಒಂದೊಂದೇ ವಿಚಾರದಲ್ಲಿ ಉಲ್ಟಾ ಹೊಡೆಯುತ್ತಿದೆ.

Advertisement

ಯುದ್ಧದ ವಿಚಾರ, ಪರಮಾಣು ಬಾಂಬ್ ದಾಳಿ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಆ ದೇಶ ಕಳೆದೆರಡು ದಿನಗಳಿಂದ ಇಲ್ಲ ಇಲ್ಲ.. ಎನ್ನುತ್ತ ಯೂ ಟರ್ನ್ ತೆಗೆದುಕೊಂಡಿದೆ. ಈಗ ವ್ಯಾಪಾರ ನಿಷೇಧ ವಿಚಾರದಲ್ಲೂ ಉಲ್ಟಾ ಹೊಡೆದಿದೆ.

ಭಾರತದೊಂದಿಗೆ ಆಮದು-ತುರ್ತುಗಳನ್ನು ನಿಷೇಧಿಸಿದ್ದ ಪಾಕಿಸ್ಥಾನಕ್ಕೆ ಅಗತ್ಯ ವಸ್ತುಗಳ ವಿಚಾರದಲ್ಲಿ ಸಂಕಷ್ಟಕ್ಕೀಡಾಗಿದ್ದು, ಇದರಿಂದ ಔಷಧಿ ತಯಾರಿಕೆಯ ಕಚ್ಚಾ ವಸ್ತುಗಳಿಗೆ ಹೇರಲಾಗಿದ್ದ ನಿಷೇಧವನ್ನು ಅದು ರದ್ದುಗೊಳಿಸಿದೆ. ಕ್ಯಾನ್ಸರ್, ಕ್ಷಯ, ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಪ್ರಮುಖ ಔಷಧಿಗಳ ಕಚ್ಚಾ ವಸ್ತುಗಳನ್ನು ಭಾರತದಿಂದ ತರಿಸಿಕೊಳ್ಳಲು ಅದು ಉದ್ಯಮಕ್ಕೆ ಸಮ್ಮತಿ ನೀಡಿದೆ.

ಇದಕ್ಕೆ ಕಾರಣ ಪಾಕ್‌ ನಲ್ಲಿ ಈ ಔಷಧಿಗಳ ಕೊರತೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಇನ್ನು ಕೆಲವು ದಿನಗಳು ಕಳೆದರೆ ಔಷಧ ಅಲಭ್ಯತೆ ಕಾಡುವುದಾಗಿ ಅಲ್ಲಿನ ಉದ್ಯಮ ವಲಯ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೇ ಭಾರತ ಹೊರತು ಬೇರೆಯಾವುದೇ ದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸುವುದು ಅತಿ ದುಬಾರಿಯಾದ್ದರಿಂದ ಪಾಕಿಸ್ಥಾನಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಲಾಗಿದೆ.

ಅಲ್ಲದೇ ಪಾಕ್ ಶೇ.50ರಷ್ಟು ಔಷಧಿಗಳ ಕಚ್ಚಾವಸ್ತುಗಳನ್ನು ಭಾರತದಿಂದ ಆಮದು ಮಾಡುತ್ತಿದೆ. ಔಷಧಿಗಳಿಗೆ ಬಳಸುವ 820 ರಾಸಾಯನಿಕಗಳನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ 62 ಕಚ್ಚಾ ವಸ್ತುಗಳಿಗೆ ಪಾಕ್ ಭಾರತವನ್ನೇ ಶೇ.100ರಷ್ಟು ಆಶ್ರಯಿಸಿದೆ. ಇವುಗಳಲ್ಲಿ 23 ವಸ್ತುಗಳು ಯಾವತ್ತೂ ಬೇಕಾಗುವ, ಅತಿ ಬೇಡಿಕೆಯಿರುವ ಜೀವ ರಕ್ಷಕ ಔಷಧಿಯ ಮೂಲವಸ್ತುಗಳಾಗಿವೆ.


ಈ ಸಂಬಂಧ ಪಾಕ್‌ ನ ಉದ್ದಿಮೆ ಸಚಿವಾಲಯ ಸೆ.2ರಂದು ಘೋಷಣೆ ಹೊರಡಿಸಿದ್ದು, ಆಮದಿಗೆ ಇದ್ದ ತಡೆಯನ್ನು ತೆಗೆದುಹಾಕಿರುವುದಾಗಿ ಹೇಳಿದೆ. ಇನ್ನು ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ನಿಷೇಧ ತೆಗೆದು ಹಾಕಬೇಕೆಂದು ಪಾಕ್‌ ನಲ್ಲಿ ವಿಪರೀತ ಒತ್ತಡವಿದ್ದು, ಮುಂದಿನ ದಿನಗಳಲ್ಲಿ ಅದು ನಿಷೇಧವನ್ನು ಸಂಪೂರ್ಣ ತೆಗೆದು ಹಾಕುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next