Advertisement

ವಿಶ್ವಾಸ ಘಾತುಕ ಮಿತ್ರನಿಂದ ಪಾಕ್‌ ಪೋಸ್ಟ್‌

07:35 AM Mar 05, 2019 | |

ಬೆಳಗಾವಿ: ಹಣ ಕೊಡದಿದ್ದಕ್ಕೆ ಸ್ನೇಹಿತನ ವಿರುದ್ಧವೇ ಸೇಡು ತೀರಿಸಿಕೊಳ್ಳಬೇಕೆಂಬ ಜಿದ್ದಿಗೆ ಬಿದ್ದು ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌ ಮಾಡಿ ಪಾಕಿಸ್ತಾನ ಪರ ಘೋಷಣೆಯನ್ನು ಅಪ್‌ಲೋಡ್‌ ಮಾಡಿದ್ದ ವಿಶ್ವಾಸಘಾತುಕ ಗೆಳೆಯನನ್ನು ಬಂಧಿಸಿದ್ದು ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಂತಾಗಿದೆ.

Advertisement

ರಾಮದುರ್ಗನ ಕಾಂಗ್ರೆಸ್‌ ಮುಖಂಡ ಮಹ್ಮದ ಶಫಿ ಬೆಣ್ಣಿ ಫೇಸ್‌ಬುಕ್‌ ಅಕೌಂಟಿನಿಂದ ಪಾಕಿಸ್ತಾನ ಜೈ ಎಂಬ ಪೋಸ್ಟ್‌ ಹಾಕಿದ್ದ ಈತನ ಗೆಳೆಯ ರಾಯಬಾಗ ತಾಲೂಕಿನ ಕಂಕಣವಾಡಿಯ ನಾಗರಾಜ ಮಾಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕೌಂಟ್‌ ಕ್ರಿಯೇಟ್‌ ಮಾಡಿ ಕೊಟ್ಟಿದ್ದ: ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಶಿಕ್ಷಣ ಮುಗಿಸಿದ್ದ ನಾಗರಾಜ ಸುಮಾರು 15 ವರ್ಷಗಳಿಂದ ರಾಮದುರ್ಗ ಪಟ್ಟಣದಲ್ಲಿ ಕಂಪ್ಯೂಟರ್‌ ಸೆಂಟರ್‌ ಇಟ್ಟುಕೊಂಡಿದ್ದನು. ನಾಗರಾಜ ಹಾಗೂ ಮಹ್ಮದ ಶಫಿ ಬೆಣ್ಣಿ ಇಬ್ಬರ ಮಧ್ಯೆ ಗಾಢ ಸ್ನೇಹವಿತ್ತು. ಮಹ್ಮದ ಶಫಿಯ ಫೇಸ್‌ ಬುಕ್‌ ಅಕೌಂಟ್‌ ಮಾಡಿ ಕೊಟ್ಟಿದ್ದೇ ನಾಗರಾಜ. ಹೀಗಾಗಿ ಇದರ ಐಡಿ, ಪಾಸ್‌ವರ್ಡ್‌ ಸೇರಿದಂತೆ ಇನ್ನಿತರ ವಿವರ ನಾಗರಾಜನಿಗೆ ಗೊತ್ತಿತ್ತು.

ಜಿದ್ದಿಗೆ ಬಿದ್ದ ಗೆಳೆಯ: ಕಂಪ್ಯೂಟರ್ ಸೆಂಟರ್‌ ನಿಂದ ನಷ್ಟ ಅನುಭವಿಸಿದ್ದ ನಾಗರಾಜ ಅನೇಕ ಸಲ ಶಫಿ ಬಳಿ ಆರ್ಥಿಕ ಸಹಾಯ ಕೇಳಿದ್ದನು. ಒಮ್ಮೆ ಸಹಾಯ ಮಾಡಿದ್ದ ಶಫಿ ಮತ್ತೂಮ್ಮೆ ನಾಗರಾಜನಿಗೆ ಸಹಾಯ ಮಾಡಿರಲಿಲ್ಲ. ಪದೇ ಪದೇ ಹಣ ಕೇಳಿದಾಗ ಕೊಡಲು ನಿರಾಕರಿಸಿದಾಗ ಶಫಿ ಮೇಲೆ ನಾಗರಾಜನಿಗೆ ದ್ವೇಷ ಸಾಧಿಸುತ್ತಿದ್ದನು. ಶಫಿ ರಾಜಕೀಯವಾಗಿ ಎಲ್ಲರೊಂದಿಗೂ ಗುರುತಿಸಿಕೊಂಡಿದ್ದನು. ಈತನ ಹೆಸರಿಗೆ ಕಪ್ಪು ಮಸಿ ಬಳಿಯಲು ನಾಗರಾಜ ಸಂಚು ಹಾಕಿ ಕುಳಿತಿದ್ದನು. ಮಾರ್ಚ್‌ 1ರಂದು ಶಫಿ ಅಕೌಂಟ್‌ನಿಂದ ಪಾಕಿಸ್ತಾನ ಜೈ, ಅಶೋಕ ಅಣ್ಣ ಜೈ ಎಂಬ ವಿವಾದಾತ್ಮಕ ಪೋಸ್ಟ್‌ ಹಾಕಿ ಎರಡೇ ದಿನದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಈ ಪೋಸ್ಟ್‌ಗೆ ಕಮೆಂಟ್‌ ಹಾಗೂ ಶೇರ್‌ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗುವ ಭಯ ಕಾಡುತ್ತಿದ್ದು, ಪೊಲೀಸರು ಶಫಿಯಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣದ ಆರೋಪಿ ನಾಗರಾಜನ ವಿರುದ್ಧ ಕಲಂ 124ಎ, 153ಎ, 153ಬಿ ಹಾಗೂ ಐಟಿ ಆಕ್ಟ್ 66ಸಿ, 66 ಬಿ ಐಪಿಸಿ ಸೆಕ್ಸನ್‌ ಅಡಿ ಪ್ರಕರಣ ದಾಖಲಾಗಿದೆ. ಕೋಲಾಹಲಕ್ಕೆ ಕಾರಣವಾಗಿದ್ದ ಪೋಸ್ಟ್‌: ಕಾಂಗ್ರೆಸ್‌ ಮುಖಂಡ ಮಹಮ್ಮದ್‌ ಶಫಿ ಬೆಣ್ಣಿ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಆಪ್ತ. ಕಾಂಗ್ರೆಸ್‌ ಪಕ್ಷದಲ್ಲಿ ಅನೇಕ ವರ್ಷಗಳಿಂದ ಗುರುತಿಸಿಕೊಂಡಿದ್ದರು. 

Advertisement

ಎರಡು ದಿನಗಳ ಹಿಂದೆ ರಾಮದುರ್ಗದಲ್ಲಿ ಶಫಿ ಬೆಣ್ಣಿ ಅವರ ಫೇಸ್‌ ಬುಕ್‌ ಅಕೌಂಟ್‌ನಿಂದ ಜೈ ಪಾಕಿಸ್ತಾನ್‌, ಜೈ ಅಶೋಕ ಅಣ್ಣಾ ಎಂಬ ಪೋಸ್ಟ್‌ ಹಾಕಲಾಗಿತ್ತು. ಇದು ರಾಮದುರ್ಗ ಸೇರಿದಂತೆ ಜಿಲ್ಲಾದ್ಯಂತ ಕೋಲಾಹಲಕ್ಕೆ ಕಾರಣವಾಗಿತ್ತು. ರಾಮದುರ್ಗ ಠಾಣೆಗೆ ಮುತ್ತಿಗೆ, ಕಲ್ಲು ತೂರಾಟ, ಶಾಸಕ ಮಹಾದೇವಪ್ಪ ಯಾದವಾಡ ನೇತೃತ್ವಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಜತೆಗೆ ಸಂಸದ ಸುರೇಶ ಅಂಗಡಿ ಆರೋಪಿಯನ್ನು ಬಂಧಿಸುವಂತೆ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಕೇಳಿದ್ದು ಎರಡು ದಿನ; ಪತ್ತೆ ಹಚ್ಚಿದ್ದು 12 ಗಂಟೆಯಲ್ಲಿ!
ವಿವಾದಾತ್ಮಕ ಪೋಸ್ಟ್‌ ಹಾಕಿದ್ದ ಆರೋಪಿಯನ್ನು ಬಂಧಿಸುವಂತೆ ಪಟ್ಟು ಹಿಡಿದು ಎಸ್‌ಪಿ ಕಚೇರಿ ಎದುರು ಸಂಸದ ಸುರೇಶ ಅಂಗಡಿ ಧರಣಿ ನಡೆಸಿದ್ದರು. ಒಂದೇ ತಾಸಿನಲ್ಲಿ ಬಂಧಿಸಬೇಕು, ಇಲ್ಲದಿದ್ದರೆ ವರ್ಗಾವಣೆ ಆಗಿ ಎಂದು ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. 

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಎಸ್‌ಪಿ ಸುಧೀರ ಕುಮಾರ ರೆಡ್ಡಿ ಅವರು, ಎರಡು ದಿನ ಕಾಲಾವಕಾಶ ಕೇಳಿದ್ದರು. ಆದರೆ 12 ಗಂಟೆಯಲ್ಲಿಯೇ ಮೂಲ ಆರೋಪಿಯನ್ನು ಬಂಧಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದೂರು ಬಂದ ಕೂಡಲೇ ಮಹ್ಮದ ಶಫಿಯನ್ನು ಬಂಧಿಸದೇ ವಿಚಾರಣೆಗೆ ಒಳಪಡಿಸಿ ವಿವರ ಪಡೆದು ಸೈಬರ್‌ ಕ್ರೈಂ ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚುವ ಮೂಲಕ ಎಸ್‌ಪಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ರಾಮದುರ್ಗ ಪ್ರಕರಣದಲ್ಲಿ ಮಹ್ಮದ ಶಫಿ ತಪ್ಪು ಮಾಡಿಲ್ಲ ಎಂಬ ಸಂಶಯ ಬಂದಿದ್ದರಿಂದ ಸೈಬರ್‌ ಕ್ರೈಂ ಮೊರೆ ಹೋಗಿ ನಿಷ್ಪಕ್ಷಪಾತ ತನಿಖೆ ನಡೆಸಲಾಯಿತು. ಫೇಸ್‌ಬುಕ್‌ ಅಕೌಂಟ್‌ ನಾಲ್ಕು ಡಿವೈಸ್‌ನಲ್ಲಿ ಬಳಸಿರುವುದು ಗೊತ್ತಾಯಿತು. ಮೊದಲು ಮೂರು ಡಿವೈಸ್‌ಗಳ ಮಾಹಿತಿ ಪಡೆದ ಬಳಿಕ ನಾಲ್ಕನೇಯ ಡಿವೈಸ್‌ ಮೂಲಕ ಪೋಸ್ಟ್‌ ಆಗಿರುವುದು ಸಾಬೀತಾಗಿರುವುದು ಸಾಕ್ಷ್ಯಾ ಸಿಕ್ಕಿದೆ. ಆರೋಪಿಯನ್ನು ಬಂಧಿಸಿ, ಮೊಬೈಲ್‌ ವಶಪಡಿಸಿಕೊಂಡಿದ್ದೇವೆ. 
 ಸುಧೀರ ಕುಮಾರ ರೆಡ್ಡಿ, ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next