ಇಸ್ಲಾಮಾಬಾದ್/ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪಾಕಿಸ್ತಾನ ದಿನಾಚರಣೆಗೆ ಶುಭಾಶಯ ಕೋರಿದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ದೇವೇಗೌಡರಿಗೆ ಕೋವಿಡ್ ಸೋಂಕು ; ಗುಣಮುಖರಾಗಲಿ ಎಂದು ಹಾರೈಸಿದ ರಾಜಕೀಯ ಗಣ್ಯರು
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ದಿನಾಚರಣೆ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಪತ್ರ ಬರೆದು ಶುಭಾಶಯ ಕೋರಿದ್ದರು, ಈ ನಿಟ್ಟಿನಲ್ಲಿ ಖಾನ್ ಮೋದಿ ಅವರ ಪತ್ರಕ್ಕೆ ಪ್ರತ್ಯುತ್ತರ ನೀಡಿರುವುದಾಗಿ ವರದಿ ಹೇಳಿದೆ.
ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ಶಾಂತಿ ಸ್ಥಿರವಾಗಿ ನಿಲ್ಲಬೇಕಾದರೆ ಭಾರತ ಮತ್ತು ಪಾಕಿಸ್ತಾನ ದೇಶಗಳು ತಮ್ಮ ನಡುವಿನ ಗಡಿ ಸಮಸ್ಯೆಯನ್ನು ಅದರಲ್ಲೂ ವಿಶೇಷವಾಗಿ ಜಮ್ಮು ಕಾಶ್ಮೀರದ ಸಮಸ್ಯೆಯನ್ನು ಆದಷ್ಟು ಬೇಗನೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಇಮ್ರಾನ್ ಖಾನ್, ಭಾರತದ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
“ಪಾಕಿಸ್ತಾನದ ಜನರು ಈ ದಿನವನ್ನು ಸ್ವಾತಂತ್ರ್ಯ ಪಿತಾಮಹರ ದೂರದೃಷ್ಟಿ ಮತ್ತು ಕೊಡುಗೆಗೆ ಗೌರವ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ ದೇಶದಲ್ಲಿನ ಸಾರ್ವಭೌಮತ್ವದಿಂದ ಮುಕ್ತ ವಾತಾವರಣದಲ್ಲಿ ಬದುಕಲು ಅವಕಾಶವಾಗಿದೆ” ಎಂದು ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿ ತಿಳಿಸಿದೆ.
ಅಲ್ಲದೇ ಪಾಕಿಸ್ತಾನದ ಜನರು ಕೂಡಾ ಭಾರತ ಸೇರಿದಂತೆ ಎಲ್ಲಾ ನೆರೆಯ ದೇಶಗಳ ಜತೆ ಶಾಂತಿಯುತ ಹಾಗೂ ಸಹಕಾರ ಸಂಬಂಧ ಮುಂದುವರಿಸಲು ಅಪೇಕ್ಷೆ ಹೊಂದಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಪತ್ರದಲ್ಲಿ ಖಾನ್ ತಿಳಿಸಿದ್ದಾರೆ.