Advertisement

ಹಳೆ ತಂತ್ರ ಬದಲಿಸಿದ ಪಾಕ್‌  : ಐಎಸ್‌ಎಸ್‌ ತಂತ್ರಗಾರಿಕೆ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ

08:21 PM Oct 19, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಪಾಕಿಸ್ತಾನ, ಅದಕ್ಕಾಗಿ ತಾನು ಈವರೆಗೆ ಪಾಲಿಸುತ್ತಿದ್ದ ಎಲ್ಲಾ ರೀತಿಯ ತಂತ್ರಗಳನ್ನು ಬದಲಾಯಿಸಿದೆ ಎಂದು ಭಾರತೀಯ ಗುಪ್ತಚರ ಇಲಾಖೆ, ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿದೆ.

Advertisement

ಹೀಗೆ ತಂತ್ರಗಾರಿಕೆಯನ್ನು ಬದಲಾಯಿಸುವುದರ ಹಿಂದೆ ಪಾಕಿಸ್ತಾನಕ್ಕೆ ಎರಡು ಉದ್ದೇಶಗಳಿವೆ ಎಂದು ಇಲಾಖೆ ಹೇಳಿದ್ದು, ಅವುಗಳಲ್ಲಿ ಒಂದು – ಕಣಿವೆಯಲ್ಲಿ ಇತ್ತೀಚಿಗೆ ತೀವ್ರವಾಗಿ ಇಳಿಕೆಯಾಗಿದ್ದ ಕಾಶ್ಮೀರ ಭಯೋತ್ಪಾದನೆ ಇನ್ನೂ ಜೀವಂತವಾಗಿದೆ ಎಂಬುದರ ಬಗ್ಗೆ ಕಾಶ್ಮೀರಿ ಯುವಕರಿಗೆ ಸ್ಪಷ್ಟ ಸಂದೇಶ ರವಾನಿಸುವುದು ಹಾಗೂ ಅವರನ್ನು ಅದರತ್ತ ಆಕರ್ಷಿಸುವುದು ಎಂದು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೊಂದು ಉದ್ದೇಶವೆಂದರೆ – ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸಲು ಬರುವ ಇತರ ರಾಜ್ಯಗಳ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಅನ್ಯ ರಾಜ್ಯಗಳ ನಾಗರಿಕರಲ್ಲಿ ಭಯ ಬಿತ್ತುವುದು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ, ಆ ರಾಜ್ಯ ಇತರ ರಾಜ್ಯಗಳಂತೆ ದೇಶದ ಎಲ್ಲಾ ಜನರ ವಾಸಸ್ಥಳವಾಗಿ ಮುಕ್ತವಾಗಿ ತೆರೆಯಲ್ಪಟ್ಟಿದೆ. ಇದನ್ನು ಸಹಿಸದ ಪಾಕಿಸ್ತಾನ, ಅನ್ಯ ರಾಜ್ಯಗಳಿಂದ ಕಣಿವೆಯಲ್ಲಿ ಬಂದು ನೆಲೆಯೂರವವರಲ್ಲಿ ಭೀತಿ ಹುಟ್ಟಿಸಲು ನಿರ್ಧರಿಸಿದೆ. ಹಾಗಾಗಿಯೇ, ಅಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಗಳ ವೇಳೆ, ಅನ್ಯ ರಾಜ್ಯಗಳಿಂದ ಬಂದಿರುವ ಕೂಲಿಕಾರ್ಮಿಕರು, ಬೀದಿ ವ್ಯಾಪಾರಿಗಳನ್ನು ಕೊಲ್ಲಲಾಗಿದೆ. ಅ. 2ರಂದು ಶ್ರೀನಗರದ ಮುಖ್ಯ ಮಾರುಕಟ್ಟೆಯಲ್ಲಿ ಔಷಧ ಅಂಗಡಿ ಮಾಲೀಕ ಎಂ.ಎಲ್‌. ಬಿಂದ್ರೂ ಹಾಗೂ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಕೊಂದಿದ್ದು, ರಾಷ್ಟ್ರಾದ್ಯಂತ ಇರುವ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಇದು ಸಹಜವಾಗಿಯೇ ದೇಶದ ಇತರ ಭಾಗಗಳಲ್ಲಿ ಭಯ ಬಿತ್ತಿದೆ. ಇದೇ ರೀತಿಯ ಭೀತಿ ಹೆಚ್ಚಾಗಬೇಕು ಎಂಬುದು ಪಾಕಿಸ್ತಾನದ ಉದ್ದೇಶ. ಇದು ಸಾಲದೆಂಬಂತೆ ಮತ್ತಷ್ಟು ದಾಳಿಗಳನ್ನು ನಡೆಸಿರುವ ಅವರು ಇತ್ತೀಚೆಗೆ ಬಿಹಾರದಿಂದ ಬಂದಿದ್ದ ಕೂಲಿಕಾರ್ಮಿಕರನ್ನು ಕೊಂದಿದ್ದಾರೆ. ಇದೆಲ್ಲವೂ ಅನ್ಯ ರಾಜ್ಯಗಳ ಜನರು ಶಾಶ್ವತವಾಗಿ ನೆಲೆಯೂರಲು ಕಾಶ್ಮೀರಕ್ಕೆ ಬರದಂತೆ ತಡೆಯಲು ಮಾಡುತ್ತಿರುವ ಪ್ರಯತ್ನಗಳು” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ :ರೈತರಿಗೆ ಗೌರವ ಕೊಡುವ ಕಾರ್ಯವಾಗಲಿ  : ಸಚಿವ ಶಿವರಾಮ ಹೆಬ್ಬಾರ

Advertisement

ಇದಲ್ಲದೆ, ಇತ್ತೀಚೆಗೆ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿ ಪ್ರಕರಣಗಳಲ್ಲಿ ಹುತಾತ್ಮರಾದ ಭಾರತೀಯ ಯೋಧರ ಸಾವಿನ ಹಿಂದೆ ಪಾಕಿಸ್ತಾನದಿಂದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಮೂಲಕ ಭಾರತದೊಳಕ್ಕೆ ನುಸುಳಿದ ಉಗ್ರರೇ ಕಾರಣ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯುವಕರೇ ಅಪಾಯವಾಗುವ ಸಾಧ್ಯತೆ
ಇದೇ ವೇಳೆ, ಜಮ್ಮು ಕಾಶ್ಮೀರದ ಸ್ಥಳೀಯ ಯುವಕರನ್ನು ಕಾಶ್ಮೀರ ಭಯೋತ್ಪಾದನೆಯತ್ತ ಆಕರ್ಷಿಸಲು ಪಾಕಿಸ್ತಾನ ಇನ್ನಿಲ್ಲದ ಹೊಸ ಪ್ರಯತ್ನಗಳನ್ನು ಮಾಡುತ್ತದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಹೊಸ ಯುವಕರ ಸಂಘಟನೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಪಾಕಿಸ್ತಾನ, ಮುಂದೆ ಅವರನ್ನು ಭಾರತದ ಶಕ್ತಿಶಾಲಿ ಉಗ್ರರನ್ನಾಗಿಸಲು ಯೋಜಿಸಿದೆ. ಹೀಗಾದರೆ, ಮುಂದೆ ಈ ಯುವಕರೇ ಭಾರತದ ಪಾಲಿಗೆ ಅಪಾಯಕಾರಿಯಾಗಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next