Advertisement

ಹಿಂಗಾರು ಹಂಗಾಮಿನಲ್ಲಿ 1,400 ಹೆ. ಭತ್ತದ ಕೃಷಿ ಗುರಿ

02:35 AM Dec 02, 2021 | Team Udayavani |

ಕುಂದಾಪುರ: ಒಂದೆಡೆ ನಿರಂತರ ಮಳೆಯಿಂದಾಗಿ ಇನ್ನೂ ಕೂಡ ಕೆಲವೆಡೆ ಮುಂಗಾರು ಹಂಗಾಮಿನ ಕಟಾವು ಬಾಕಿ ಇದ್ದರೆ, ಕೆಲವೆಡೆಗಳಲ್ಲಿ ಕಟಾವು ಆಗಿದ್ದು, ಬೈಹುಲ್ಲು ಹಾನಿಯಾಗಿದೆ. ಮತ್ತೊಂದೆಡೆ ಕುಂದಾಪುರ, ಬೈಂದೂರು ಭಾಗಗಳಲ್ಲಿ ಹಿಂಗಾರು ಹಂಗಾಮಿನ ಕೃಷಿ ಕಾರ್ಯ ಚುರುಕು ಪಡೆದುಕೊಂಡಿದೆ. ಈ ಬಾರಿಯ ಹಿಂಗಾರು ಹಂಗಾಮಿನಲ್ಲಿ ಕುಂದಾಪುರ, ವಂಡ್ಸೆ ಹಾಗೂ ಬೈಂದೂರು ಈ ಮೂರು ಹೋಬಳಿಗಳಲ್ಲಿ ಒಟ್ಟಾರೆ 1,400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಕೃಷಿ ಬೆಳೆಯುವ ಗುರಿ ಹೊಂದಲಾಗಿದೆ.

Advertisement

ಮುಂಗಾರು ಹಂಗಾಮಿನಲ್ಲಿ ಮೂರು ಹೋಬಳಿಗಳಲ್ಲಿ ಒಟ್ಟಾರೆ 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು, ಈ ಪೈಕಿ 13,555 ಹೆಕ್ಟೇರ್‌ ಪ್ರದೇಶದಲ್ಲಿ ಗುರಿ ಸಾಧಿಸಿ, ಶೇ. 96.82 ರಷ್ಟು ಸಾಧನೆಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಗುರಿ
ಈ ಬಾರಿ ಕುಂದಾಪುರ ಹಾಗೂ ಬೈಂದೂರು ಎರಡು ತಾಲೂಕಿನಲ್ಲಿ ಒಟ್ಟು 1,400 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಕಳೆದ ಬಾರಿಯ ಹಿಂಗಾರು ಹಂಗಾಮಿನಲ್ಲೂ ಇಷ್ಟೇ ಗುರಿ ಹಾಕಿಕೊಂಡಿದ್ದು, ಈ ಪೈಕಿ 1,179 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಶೇ.84 ರಷ್ಟು ಗುರಿ ಸಾಧಿಸಲಾಗಿತ್ತು. ಕುಂದಾಪುರ ಹೋಬಳಿಯಲ್ಲಿ 620 ಹೆಕ್ಟೇರ್‌, ವಂಡ್ಸೆ ಹೋಬಳಿಯಲ್ಲಿ 405 ಹೆಕ್ಟೇರ್‌ ಹಾಗೂ ಬೈಂದೂರು ವಲಯದಲ್ಲಿ 375 ಹೆಕ್ಟೇರ್‌ ಗುರಿ ಹೊಂದಲಾಗಿದೆ.

ನೆಲಗಡಲೆಗೆ ಮಳೆ ಅಡ್ಡಿ
ಕುಂದಾಪುರ ಭಾಗದಲ್ಲಿ ಹಿಂಗಾರು ಹಂಗಾಮಿನಲ್ಲಿ ನೆಲಗಡಲೆ ಬೆಳೆಯನ್ನು ಬಹುತೇಕ ರೈತರು ನೆಚ್ಚಿಕೊಂಡಿದ್ದು, ಆದರೆ ಈ ಬಾರಿ ಇನ್ನು ಸಹ ಮಳೆ ಬರುತ್ತಿರುವುದರಿಂದ ಬಿತ್ತನೆ ಕಾರ್ಯ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ನೆಲಗಡಲೆ ಬಿತ್ತನೆ ಮಾಡಬೇಕಾದರೆ ಗದ್ದೆ ಒಣಗಬೇಕು. ಆದರೆ ಆಗಾಗ ಬರುತ್ತಿರುವ ಮಳೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಈ ಕುಂದಾಪುರ ಹೋಬಳಿಯಲ್ಲಿ 200 ಹೆಕ್ಟೇರ್‌, ಬೈಂದೂರಿನಲ್ಲಿ 1,150 ಹೆಕ್ಟೇರ್‌ ಹಾಗೂ ವಂಡ್ಸೆ ಹೋಬಳಿಯಲ್ಲಿ 25 ಹೆಕ್ಟೇರ್‌ ಸೇರಿದಂತೆ ಒಟ್ಟು 1,375 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ ಕೃಷಿಯ ಗುರಿಯಿದೆ. ಇನ್ನು ಕುಂದಾಪುರ ಭಾಗದಲ್ಲಿ 1,050 ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬೆಳೆಯುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ:ಶಬರಿಮಲೆಯಲ್ಲಿ ಇ-ಹುಂಡಿ : ಭಕ್ತಾದಿಗಳು ಗೂಗಲ್‌ ಪೇ ಮೂಲಕವೂ ಕಾಣಿಕೆ ಸಲ್ಲಿಸಬಹುದು

Advertisement

ಬಿತ್ತನೆ ಬೀಜಕ್ಕೆ ಬೇಡಿಕೆ
ಕುಂದಾಪುರ, ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಜ್ಯೋತಿ ತಳಿಯ 55 ಕ್ವಿಂಟಾಲ್‌ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ಈ ಬಾರಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಬೇಡಿಕೆ ಇರುವುದರಿಂದ ಇನ್ನು ಹೆಚ್ಚುವರಿಯಾಗಿ ಕುಂದಾಪುರ, ವಂಡ್ಸೆ ಹಾಗೂ ಬೈಂದೂರು ಹೋಬಳಿಗಳಿಗೆ 50 ಕ್ವಿಂಟಾಲ್‌ ಬಿತ್ತನೆ ಬೀಜ ತರಿಸಲಾಗುತ್ತಿದೆ. ಜ್ಯೋತಿ ತಳಿಯು 3 ತಿಂಗಳುಗಳಲ್ಲಿ ಅಂದರೆ ಇತರ ತಳಿಗಿಂತ ಬೇಗ ಬೆಳೆಯುವುದರಿಂದ ಈ ಭಾಗದಲ್ಲಿ ಬೇಡಿಕೆ ಹೆಚ್ಚಿರುತ್ತದೆ.

ಮಳೆಯಿಂದ 86
ಹೆಕ್ಟೇರ್‌ ಹಾನಿ
ಭಾರೀ ಗಾಳಿ- ಮಳೆಯಿಂದಾಗಿ ಈವರೆಗೆ ಸಿಕ್ಕ ಮಾಹಿತಿಯಂತೆ ನವೆಂಬರ್‌ ಒಂದೇ ತಿಂಗಳಿನಲ್ಲಿಯೇ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ 169 ರೈತರ ಒಟ್ಟಾರೆ 86 ಹೆಕ್ಟೇರ್‌ (215 ಎಕರೆ) ಪ್ರದೇಶಕ್ಕೆ ಹಾನಿಯಾಗಿದೆ. ಕುಂದಾಪುರ ಹೋಬಳಿ ಹಾಗೂ ಹೆಬ್ರಿಯ ಎರಡು ಗ್ರಾಮ ಸೇರಿ 73 ರೈತರ 96 ಎಕರೆ, ಬೈಂದೂರು ಹೋಬಳಿಯಲ್ಲಿ 18 ರೈತರ 38 ಎಕರೆ ಹಾಗೂ ವಂಡ್ಸೆ ಹೋಬಳಿಯಲ್ಲಿ 78 ರೈತರ 81 ಎಕರೆ ಕೃಷಿ ಪ್ರದೇಶಕ್ಕೆ ತೊಂದರೆಯಾಗಿದೆ.

ಕೃಷಿ ಕಾರ್ಯ ಆರಂಭ
ಕುಂದಾಪುರ ಭಾಗದಲ್ಲಿ ಹಿಂಗಾರು ಹಂಗಾಮಿನ ಭತ್ತ, ಉದ್ದು ಬೆಳೆಗೆ ಸಿದ್ಧತೆ ಆರಂಭವಾಗಿದೆ. ಕೆಲವೆಡೆ ಬಿತ್ತನೆ ಸಹ ಆಗಿದೆ. ಇನ್ನು ಕೆಲವೆಡೆಗಳಲ್ಲಿ ಗದ್ದೆ ಹದ ಮಾಡಲಾಗುತ್ತಿದೆ. ನೆಲಗಡಲೆಗೆ ಮಳೆ ಇರುವುದರಿಂದ ವಿಳಂಬ ವಾಗಬಹುದು. ಬಿತ್ತನೆ ಬೀಜ ಈಗಾಗಲೇ ಪೂರೈಸಲಾಗಿದೆ. ಇನ್ನು ಹೆಚ್ಚುವರಿ ತರಿಸಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ನಷ್ಟ ಹೊಂದಿದ ವರದಿಯನ್ನು ಸರ್ವೇ ನಡೆಸಿ, ಪರಿಹಾರಕ್ಕಾಗಿ ಸಲ್ಲಿಸಲಾಗಿದೆ.
– ವಿಶ್ವನಾಥ ಶೆಟ್ಟಿ, ಕೃಷಿ ತಾಂತ್ರಿಕ ಅಧಿಕಾರಿ, ಕುಂದಾಪುರ ಕೃಷಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next