Advertisement

ಜಿಲ್ಲೆಯಲ್ಲಿ 250ಕ್ಕೇರಿದ ಸೋಂಕಿತರು

01:33 PM Jul 13, 2020 | Suhan S |

ಕೊಪ್ಪಳ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್‌-19 ಆರ್ಭಟ ಮುಂದುವರಿಸಿದ್ದು, ರವಿವಾರ ಒಂದೇ ದಿನ ಬರೊಬ್ಬರಿ 40 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದ್ದು, ಇದೇ ದಿನವೇ ಇಬ್ಬರು ಸೋಂಕಿನಿಂದ ಬಳಲಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಸೋಂಕಿನ ಸಂಖ್ಯೆ, ಸಾವಿನ ಸಂಖ್ಯೆ ಏರುತ್ತಿರುವುದು ಜನ ಸಮೂಹವನ್ನೇ ತಲ್ಲಣಗೊಳಿಸಿದೆ.

Advertisement

ಲಾಕ್‌ಡೌನ್‌ ತೆರವಾದ ಬಳಿಕವಂತೂ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಜನ ಸಂಚರಿಸುತ್ತಿದ್ದಾರೆ. ಸರಿಯಾದ ಸಾಮಾಜಿಕ ಅಂತರ ಇಲ್ಲ. ಮಾಸ್ಕ್ ಸಹಿತ ಧರಿಸಲ್ಲ. ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದರೂ ಸಹಿತ ಅದನ್ನೂ ಸರಿಯಾಗಿ ಪಾಲನೆ ಮಾಡಲ್ಲ. ಹೀಗಾಗಿ ಕೋವಿಡ್‌ ವೈರಸ್‌ ಎಲ್ಲೆಡೆ ಉಲ್ಬಣಿಸಿ, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿದೆ. ಇನ್ನೂ ಅನ್ಯ ರಾಜ್ಯಗಳಿಂದ, ಅನ್ಯ ಜಿಲ್ಲೆಗಳಿಂದ ಆಗಮಿಸಿದ ಜನರ ತಪಾಸಣೆಯೂ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

ಕೆಲವರು ನೇರ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡರೆ ಇನ್ನು ಕೆಲವರು ನಮಗೆ ಅದರ ಸಹವಾಸವೇ ಬೇಡ ಎಂದು ಮನೆಯಲ್ಲೇ ಇರುತ್ತಿದ್ದಾರೆ. ಅಂತಹ ವ್ಯಕ್ತಿಗಳಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡು ಕ್ರಮೇಣ ಊರು, ನಗರದಲ್ಲಿದ್ದ ಜನರಿಗೂ ವೈರಸ್‌ ಆವರಿಸುತ್ತಿದೆ.

ಜಿಲ್ಲಾಡಳಿತ ಮೊದಲೆಲ್ಲ ತುಂಬ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಅಷ್ಟೊಂದು ಸೋಂಕಿನ ಪ್ರಮಾಣವೂ ಕಾಣಿಸಿರಲಿಲ್ಲ. ಈಗ ದಿನದಿಂದ ದಿನಕ್ಕೆ 40ರ ಗಡಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಶನಿವಾರದ ಅಂತ್ಯಕ್ಕೆ ಜಿಲ್ಲೆಯಲ್ಲಿ 210 ಜನರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದ್ದರೆ, ರವಿವಾರ ಮತ್ತೆ 40 ಜನರಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 250ಕ್ಕೆ ಏರಿಕೆಯಾಗಿದೆ. ಇದೇ ದಿನ 20 ಜನರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2113 ವರದಿ ಬಾಕಿ: ಜಿಲ್ಲಾಡಳಿತವು ಅನ್ಯ ರಾಜ್ಯ, ಜಿಲ್ಲೆ, ಹೈರಿಸ್ಕ್ ಏರಿಯಾದಿಂದ ಆಗಮಿಸುವ ಜನರ ಸ್ವಾಬ್‌ ಪಡೆಯುತ್ತಿದೆ. ಈ ವರೆಗೂ 14566 ಜನರ ಸ್ವಾಬ್‌ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದರೆ, ಇವರಲ್ಲಿ 12453 ಜನರ ವರದಿ ನೆಗೆಟಿವ್‌ ಬಂದಿದೆ. ಇನ್ನೂ 2113 ಜನರ ವರದಿ ಬರುವುದು ಬಾಕಿಯಿದೆ. 120 ಜನರಿಗೆ ಐಎಲ್‌ಐ: ಜಿಲ್ಲೆಯಲ್ಲಿ ದೃಢಪಟ್ಟ 250 ಕೊರೊನಾ ಸೋಂಕಿನ ಪೈಕಿ 120 ಜನರಿಗೆ ಐಎಲ್‌ಐ(ತೀವ್ರತರದ ಶೀತ ಜ್ವರ) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್‌ ಸೋಂಕು ದೃಢಪಟ್ಟಿವೆ. ಇನ್ನೂ ಸಾರಿ ಕೇಸ್‌ ನಡಿ 12 ಜನರಿಗೆ, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಪೈಕಿ 55 ಜನರಿಗೆ, ದ್ವಿತೀಯ ಸಂಪರ್ಕಿತರ ಪೈಕಿ ಓರ್ವ ವ್ಯಕ್ತಿಗೆ, ಹೈ ರಿಸ್ಕ್ ಏರಿಯಾದಲ್ಲಿ ಪ್ರಯಾಣ ಮಾಡಿದ 61 ಜನರಿಗೆ ಇತರೆ-01 ಸೇರಿದಂತೆ ಒಟ್ಟು 250 ಜನರಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ ಐಎಲ್‌ಐ ಕೇಸ್‌ನಡಿಯೇ ಹೆಚ್ಚು ಜನರಿಗೆ ಕೋವಿಡ್‌ ಒಕ್ಕರಿಸಿದೆ.

Advertisement

ಸಾವಿನಲ್ಲೂ ಕೋವಿಡ್‌ ಆರ್ಭಟ: ಇನ್ನೂ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರಲ್ಲಿ ರವಿವಾರ ಇಬ್ಬರು ಸೇರಿದಂತೆ ಈ ವರೆಗೂ 8 ಜನರು ಸೋಂಕಿಗೆ ಬಲಿಯಾಗಿದ್ದು, ಇದು ನಿಜಕ್ಕೂ ಜನರಲ್ಲಿ ಕಳವಳ ಮೂಡಿಸಿದೆ. ಕೋವಿಡ್‌ ಸಾವಿನಲ್ಲೂ ರಣಕೇಕೆ ಹಾಕುತ್ತಿರುವುದಕ್ಕೆ ಇಡೀ ಜನ ಸಮೂಹ ಮುಂದೆ ಹೇಗಪ್ಪಾ ಎಂದು ಚಿಂತೆ ಮಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next