Advertisement

ನಮ್ಮ ತಪ್ಪುಗಳಿಗೆ ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತದೆ

11:30 PM Mar 25, 2023 | Team Udayavani |

ಗ್ಯಾಸ್‌ ಸಿಲಿಂಡರ್‌ ತಂದುಕೊಡುವ ವ್ಯಕ್ತಿಗೆ ಎಕ್ಸ್ಟ್ರಾ ಭಕ್ಷೀಸು ಕೊಡ ಲೇಬೇಕು. ಇಲ್ಲದಿದ್ದರೆ ಅವರು ನೀವೇ ಬಂದು ಹೊತ್ಕೊಂಡು ಹೋಗಿ ಅನ್ನುತ್ತಾರೆ ಅನ್ನುವ ಮಾತುಗಳು “ಸಾಮಾನ್ಯ’ವಾಗಿರುವ ದಿನಗಳಿವು. ಹೀಗಿರುವಾಗ ಮೊನ್ನೆ ಸಿಲಿಂಡರ್‌ ತಂದುಕೊಟ್ಟ ವ್ಯಕ್ತಿ, ಭಕ್ಷೀಸಿನ ಹಣವನ್ನು ವಾಪಸ್‌ ಕೊಟ್ಟದ್ದು ಮಾತ್ರವಲ್ಲ, ನಮ್ಮ ಏಜೆನ್ಸಿಯಲ್ಲಿ ಎಕ್ಸ್ಟ್ರಾ ದುಡ್ಡು ತಗೋಳಲ್ಲ ಅಂದುಬಿಟ್ಟರು. ಕುತೂಹಲದಿಂದ ವಿಚಾರಿಸಿದರೆ, ಅದು ನಮ್ಮ ಮಾಲಕರ ಆದೇಶ ಎಂದರು! ಜನ ಹೀಗೂ ಇರ್ತಾರಾ ಎಂಬ ಅಚ್ಚರಿಯೊಂದಿಗೇ ಆ ಏಜೆನ್ಸಿಯ ಮಾಲಕರ ಪರಿಚಯ ಮಾಡಿಕೊಂಡು, ಗೆಳೆತನ ಬೆಳೆಸಿಕೊಂಡು, ಸಲುಗೆ ಹೆಚ್ಚಿದಾಗ-ಸರ್‌ ನಿಮ್ಮ ಹಿನ್ನೆಲೆ ಹೇಳ್ತೀರಾ ಅಂದರೆ- “ಹೀಗೂ ಉಂಟೇ?’ ಎಂದು ಉದ್ಗರಿಸುವಂಥ ಕಥೆಯನ್ನೇ ಅವರು ಹೇಳಿಬಿಟ್ಟರು. ಅದು ಹೀಗೆ:

Advertisement

80ರ ದಶಕದಲ್ಲಿದ್ದ ರೌಡಿಸಂ ಅಂತ ಓದಿರ್ತೀರಲ್ಲ, ಆ ಜಮಾನಾ ನಮು. ಒಂದೇ ವ್ಯತ್ಯಾಸ ಅಂದ್ರೆ, ಆ ಕಾಲದ ರೌಡಿ ಗಳು ದೊಡ್ಡ ಹೆಸರು ಮಾಡಿದ್ರು. ಕೆಲವ್ರು ಚೆನ್ನಾಗಿ ಆಸ್ತಿ ಮಾಡಿ ದ್ರು. ಐದತ್ತು ವರ್ಷ ಡಾನ್‌ಗಳಾಗಿ ಮೆರೆದ್ರು. ನಾನು, ನನ್ನಂಥ ಅದೆಷ್ಟೋ ಜನ, ಅಂಥಾ ಡಾನ್‌ಗಳ ಸಪೋರ್ಟರ್‌ಗಳಾಗಿ ಉಳಿದ್ವಿ. ಒಂದು ರೀತಿಯಲ್ಲಿ ಅದರಿಂದ ಒಳ್ಳೆಯದೇ ಆಯ್ತು. ಯಾಕಂದ್ರೆ, ಬರೀ ಬೆಂಗಳೂರಲ್ಲ, ಇಡೀ ಕರ್ನಾಟಕವನ್ನೇ ನಡುಗಿಸಿದ್ದ ಡಾನ್‌ಗಳು ಹಲವು ಸಂದರ್ಭಗಳಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿದ್ದರು. ಅಲ್ಲೂ ಜಗಳ- ಕುಸ್ತಿ ಮಾಡಿ ಸುದ್ದಿಯಾದರು. ವರ್ಷಗಳು ಕಳೆದಂತೆ ಕೆಲವರಿಗೆ ಕಾಯಿಲೆ ಅಮರಿ ಕೊಂಡಿತು. ಹಲವರು ಕೆಟ್ಟ ಸಾವು ಕಂಡರು. ಆ ಮೂಲಕ- ಮನುಷ್ಯನ ಕುಕೃತ್ಯಕ್ಕೆ ಸತ್ತ ಮೇಲಲ್ಲ, ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತೆ ಅನ್ನುವುದಕ್ಕೆ ಸಾಕ್ಷಿಯಾದರು. ಅಂಥ ಪ್ರಸಂಗಗಳನ್ನು ಮತ್ತೆ ಮತ್ತೆ ನೋಡಿದ ಮೇಲೆ-ಲೈಫ‌ು ಇಷ್ಟೇನೇ ಎಂಬ ಸತ್ಯ ನನಗೆ ಅರ್ಥ ಆಯ್ತು.

ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ‌ಲ್ಲಿ ನನಗೆ ಫ‌ುಲ್‌ ಟೈಮ್‌ ಕೆಲಸವಿತ್ತು. ಸೆಂಟ್ರಲ್‌ ಗವರ್ನಮೆಂಟ್‌ ಜಾಬ್‌. ಬೆಳಗ್ಗೆ 5ರಿಂದ ಮಧ್ಯಾಹ್ನ 3ಗಂಟೆ ತನಕ ಕೆಲಸ. ಇಂಥ ಹಿನ್ನೆಲೆ ಇದ್ರೂ ರೌಡಿಸಂಗೆ ಯಾಕೆ ಎಂಟ್ರಿ ಕೊಟ್ರಿ ಎಂದು ನೀವು ಕೇಳಬಹುದು. ಹೇಳ್ತೀನಿ ಕೇಳಿ; ರೈತಾಪಿ ಕುಟುಂಬ ನಮುª. ಚಿಕ್ಕಂದಿನಿಂದ ನನಗೆ ಕುಸ್ತಿ ಮಾಡುವುದಂದ್ರೆ ಇಷ್ಟ ಇತ್ತು. ಫ್ಯಾಕ್ಟರಿ ಕೆಲಸ ಮುಗಿದ ಬಳಿಕ ಗೆಳೆಯರ ಜತೆ ಸಿಟಿ ಸುತ್ತೋದು, ಹರಟೆ ಹೊಡೆಯೋದೇ ಹವ್ಯಾಸ ಆಗಿದ್ದ ದಿನಗಳು ಅವು. ಹೀಗಿದ್ದಾಗಲೇ ಅದೊಂದು ಸಂಜೆ ನಮ್ಮ ಬೈಕ್‌ಗೆ ಬೇರೊಬ್ಬರು ಢಿಕ್ಕಿ ಹೊಡೆಸಿ ಬಿಟ್ರಾ. ತಪ್ಪು ಅವರದಿತ್ತು. ಕನಿಷ್ಠ, ಸಾರಿ ಅನ್ನಬೇಕು ತಾನೇ? ಅವರು ಹಾಗೆ ಮಾಡಲಿಲ್ಲ. “ಅಯ್ಯೋ ನಿನ್ನಜ್ಜಿ, ಕಣ್ಣು ಕಾಣಲ್ವೇನ್ರೊ..’ ಎಂದು ಜಗಳಕ್ಕೆ ಬಂದರು. ನನಗೂ ರೇಗಿತು. ತಪ್ಪು ಮಾಡಿದ್ದೂ ಅಲೆª ನಮಗೇ ಆವಾಜ್‌ ಹಾಕ್ತೀರಾ? ಅಂತ ಜೋರು ಮಾಡಿದೆ. ಮಾತಿಗೆ ಮಾತು ಬೆಳೀತು. ಅವತ್ತು ಯಾಕೆ ಹಾಗೆ ಮಾಡಿದೊ°à ಗೊತ್ತಿಲ್ಲ. ಬೈಕ್‌ನಲ್ಲಿದ್ದ ಇಬ್ಬರಿಗೂ ಚೆನ್ನಾಗಿ ಹೊಡೆದುಬಿಟ್ಟೆ. ಜನ ಕಕ್ಕಾಬಿಕ್ಕಿಯಾಗಿ ನೋಡ್ತಾ ಇದ್ರು. ಅಲ್ಲಿಂದ ಮನೆಗೆ ಬಂದೆ. ನಮ್ಮ ಏರಿಯಾದಲ್ಲಿ ಡಾನ್‌ ಅನ್ನಿಸಿಕೊಂಡಿದ್ದ ವ್ಯಕ್ತಿಯಿಂದ ಕರೆ ಬಂತು. “ನಿನ್ನಂಥ ಹುಡುಗರು ಬೇಕು ನನಗೆ. ಗೂಳಿ ಥರಾ ನುಗ್ಗಿ ಹೊಡೆದ್ಯಂತೆ ನಿನ್ನೆ? ಆಗಾಗ ಈ ಕಡೆ ಬರ್ತಾ ಇರು…’ ಅಂದ ಆ ವ್ಯಕ್ತಿ. ಸುತ್ತಲಿನ ಜನರ ಮಧ್ಯೆ ಹೀರೋ ಥರಾ ಕಾಣಿಸಿಕೊಳ್ಳಬೇಕು ಎಂಬ ಹುಚ್ಚಿದ್ದುದರಿಂದ, ನಾನು ತತ್‌ಕ್ಷಣವೇ ಒಪ್ಪಿಕೊಂಡೆ.
ಅನಂತರ ನನ್ನ ಬದುಕು ವೇಗ ಪಡೆದುಕೊಂಡಿತು. ನಮ್ಮ ಡಾನ್‌ 15 ದಿನಕ್ಕೋ, ತಿಂಗಳಿಗೋ ಏನಾದರೂ ಕೆಲಸ ಹೇಳು ತ್ತಿದ್ದ. ಅವನು ಹೇಳಿದವರ ಮೇಲೆ ಅಟ್ಯಾಕ್‌ ಮಾಡಬೇಕಿತ್ತು. ಅನಂತರ ದುಷ್ಮನ್‌ಗಳು ಮತ್ತು ಪೊಲೀಸರಿಗೆ ಸಿಗದಂತೆ ತಪ್ಪಿಸಿ ಕೊಳ್ಳಬೇಕಿತ್ತು. ರಟ್ಟೆ ಗಟ್ಟಿಯಿದ್ದವ ಜಟ್ಟಿ ಅನ್ನುತ್ತಿದ್ದ ದಿನಗಳು ಅವು. ಅಂದುಕೊಂಡ ಕೆಲಸ ಆಯ್ತು ಅಂತ ಗೊತ್ತಾದ ತತ್‌ಕ್ಷಣ, ಡಾನ್‌ ಎಲ್ಲರಿಗೂ ಒಂದಷ್ಟು ಕಾಸು ಕೊಟ್ಟು-“ತಿರುಪತಿ, ಧರ್ಮಸ್ಥಳ, ಮೈಸೂರು, ನಂಜನ ಗೂಡು… ಹೀಗೆ ಎಲ್ಲಿಗಾದ್ರೂ ಹೋಗಿ ಬನ್ನಿ’ ಅನ್ನುತ್ತಿದ್ದ. “ಈ ಕೇಸ್‌ ನಲ್ಲಿ ಪೊಲೀಸರಿಗೆ ನಮ್ಮ ಗುರುತು ಸಿಗದಂತೆ ಮಾಡಪ್ಪಾ ಅಂತ ದೇವರಲ್ಲಿ ಬೇಡಿಕೊಂಡು ವಾಪಸ್‌ ಬರ್ತಿದ್ವಿ. ಅಷ್ಟರಲ್ಲಿ ನಮ್ಮ ಡಾನ್‌ ಪರಿಸ್ಥಿತಿಯನ್ನು ಬ್ಯಾಲೆನ್ಸ್  ಮಾಡಿರುತ್ತಿದ್ದ. ಕೇಸ್‌ ಆಗುತ್ತಿರಲಿಲ್ಲ!

ಫ್ಯಾಕ್ಟರಿ ಕಡೆಯಿಂದ ಪ್ರತೀ ತಿಂಗಳೂ ಸಂಬಳ, ಹೊರಗಡೆ ರಾಜ ಮರ್ಯಾದೆ-ಲೈಫ್ ಈಸ್‌ ಬ್ಯೂಟಿಫ‌ುಲ್‌ ಎಂದು ನಾನು ಸಂಭ್ರಮಿಸುವ ಕಾಲಕ್ಕೇ ಆ ಘಟನೆ ನಡೆಯಿತು. ಅದೊಂದು ದಿನ ಮೆಜೆಸ್ಟಿಕ್‌ನಲ್ಲಿ ಬಸ್‌ ಇಳಿಯುತ್ತಿದ್ದಾಗಲೇ ಪೊಲೀಸರು ಎದುರಿಗೆ ನಿಂತರು. ಎಲ್ಲಿ, ಏನು ತಪ್ಪಾಯಿತು ಎಂದುಕೊಂಡೇ ಸ್ಟೇಶನ್‌ಗೆ ಹೋದರೆ, ಅಲ್ಲಿ ನಮ್ಮ ಡಾನ್‌ ಇದ್ದ! ಅವನಿಗೆ ನಿಲ್ಲಲೂ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ವರ್ಕ್‌ ಆಗಿತ್ತು. “ನನ್ನ ಏರಿಯಾದಲ್ಲಿ ಬಾಲ ಬಿಚಿ¤àಯಾ ಬದ್ಮಾಶ್‌ ಅನ್ನುತ್ತಾ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಬಾರಿಸಿದರು. ಅಷ್ಟೆ: ತಲೆ ಗಿರ್ರೆಂದಿತು. ಏನೋ ಹೇಳಲು ಹೋದೆ, ಅಷ್ಟರಲ್ಲಿಯೇ-“ಸ್ವಾಮೀ, ನಿಮ್ಮ ಕಾಲು ಹಿಡಿತೀನಿ, ಅವನಿಗೆ ಹೊಡೆಯಬೇಡಿ’ ಎಂಬ ಧ್ವನಿ ಕೇಳಿಸಿತು. ಅದು ನನ್ನ ತಂದೆಯ ಸ್ವರ. ಮಗನನ್ನು ಠಾಣೆಗೆ ಒಯ್ದಿದ್ದಾರೆ ಎಂದು ಗೊತ್ತಾದ ತತ್‌ಕ್ಷಣ ಅಪ್ಪ ಧಾವಿಸಿ ಬಂದಿದ್ದರು. ಅವರ ಕಣ್ಣೀರು, ಪ್ರಾರ್ಥನೆಗೆ ಇನ್ಸ್ ಪೆಕ್ಟರ್‌ ಕರಗಿದರು. “ಸೆಂಟ್ರಲ್‌ ಗವರ್ನಮೆಂಟ್‌ ಕೆಲಸ ಇದೆ. ಹಾಗಿದ್ರೂ ಯಾಕಿಂಥ ಹೀನ ಬುದ್ಧಿ? ನಿನಗಿಂತ ಬಲಶಾಲಿ ಒಬ್ಬ ಇದ್ದೇ ಇರ್ತಾನೆ. ನಾಳೆ ನಿನ್ನನ್ನೂ ಅಟ್ಟಾಡಿ ಸಿಕೊಂಡು ಹೊಡೀತಾರೆ. ಅರ್ಥ ಮಾಡ್ಕೊ’- ಎಂದು ಬುದ್ದಿ ಹೇಳಿದರು. ಇಷ್ಟು ದಿನ ಕೇಸ್‌ ಆಗದಿರಲಿ ಅಂತ ಪ್ರಾರ್ಥಿ ಸಲು ದೇವಸ್ಥಾನಕ್ಕೆ ಹೋಗ್ತಿದ್ದೆ ತಾನೇ? ಈಗ ಕ್ರೈಂ ಬಿಟ್ಟುಬಿಡ್ತೇನೆ ಅಂತ ಕೇಳಿಕೊಳ್ಳೋಕೆ ಹೋಗು, ಅಂದರು. ಅವರೇ ಸ್ವಲ್ಪ ದುಡ್ಡನ್ನೂ ಕೊಟ್ಟರು. ಹಾಗೇ ಮಾಡಿದೆ.

ಪೂಜೆ ಮುಗಿಸಿ, ಇವತ್ತಿನಿಂದ ನಾನು ಹೊಸ ಮನುಷ್ಯ ಅಂದುಕೊಳ್ಳುತ್ತಾ ಬೈಕ್‌ನಲ್ಲಿ ವಾಪಸಾಗುತ್ತಿದ್ದೆ ಆಗಲೇ ಆ ದೃಶ್ಯ ಕಾಣಿಸಿತು. ಹೆದ್ದಾರಿಯಲ್ಲಿ ಒಂದು ಕಾರ್‌ ಆ್ಯಕ್ಸಿಡೆಂಟ್‌ ಆಗಿತ್ತು. ಹೆಂಗಸು ಮತ್ತು ಮಕ್ಕಳು ಸ್ಥಳದಲ್ಲೇ ತೀರಿಕೊಂಡಿದ್ದರು. ಕುಟುಂಬದ ಯಜಮಾನ ತೀವ್ರ ಗಾಯಗೊಂಡಿದ್ದ. ನಾಲ್ಕೈದು ಜನರ ಸಹಾಯ ಪಡೆದು ತತ್‌ಕ್ಷಣ ಅವನನ್ನು ಆಸ್ಪತ್ರೆಗೆ ದಾಖಲಿ ಸಿದೆ. ಆತ ರಮೇಶ್‌ ರೆಡ್ಡಿ. ಆಂಧ್ರದ ಉದ್ಯಮಿ, ಬೆಂಗಳೂರಿನಲ್ಲೇ ವಾಸವಿದ್ದನೆಂದೂ ಗೊತ್ತಾಯಿತು. ಚಿಕಿತ್ಸೆಯೆಲ್ಲ ಮುಗಿದ ಮೇಲೆ, ಆ ಉದ್ಯಮಿ ನನಗೆ, ನನ್ನ ಕುಟುಂಬಕ್ಕೆ ಹತ್ತಿರವಾದ. ಕುಟುಂಬವನ್ನೇ ಕಳೆದು ಕೊಂಡವನು ಎಂಬ ಅನುಕಂಪವಿತ್ತಲ್ಲ… ಹಾಗಾಗಿ ನಾವೂ ಅವನನ್ನು ಹಚ್ಚಿಕೊಂಡೆವು. ಎಷ್ಟರಮಟ್ಟಿಗೆ ಅಂದರೆ-ನನ್ನ ಮಗನನ್ನು ಆ ಉದ್ಯಮಿಯ ಕಚೇರಿಯಲ್ಲೇ ಕೆಲಸಕ್ಕೆ ಸೇರಿಸಿದೆ!

Advertisement

ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು. ಮೂರು ವರ್ಷ ಕಳೆದ ಅನಂತರ ನನ್ನ ಮಗನ ಹೆಸರಲ್ಲಿ ಭರ್ತಿ 25 ಲಕ್ಷ ರೂ. ಸಾಲ ಪಡೆದಿರುವ ಸಂಗತಿ ಗೊತ್ತಾಯಿತು. ರಮೇಶ್‌, ಯಾಕೆ ಹೀಗೆ ಮಾಡಿದ್ರಿ ಎಂದು ಕೇಳಿದ್ದಕ್ಕೆ-“ಅಣ್ಣಾ, ನನಗಾದ್ರೂ ಬೇರೆ ಯಾರಿದ್ದಾರೆ? ಸಾಲ ತೀರಿಸುವ ಜವಾಬ್ದಾರಿ ನನ್ನದು. ಬ್ಯಾಂಕ್‌ನಲ್ಲಿ ಸ್ವಲ್ಪ ಸಮಸ್ಯೆ ಆಗಿದ್ದರಿಂದ ನಿಮ್ಮ ಮಗನ ಹೆಸರಲ್ಲಿ ಸಾಲ ತಗೊಂಡೆ’ ಅಂದ. ಮುಂದೆ ನಾವು ಎಚ್ಚರದಿಂದ ಇರಬೇ ಕು ಅಂದುಕೊಳ್ಳುವ ವೇಳೆಗೆ, ಇದ್ದಕ್ಕಿದ್ದಂತೆ ಆಂಧ್ರಕ್ಕೆ ಹೋದ ರೆಡ್ಡಿ ಅನಂತರ ವಾಪಸ್‌ ಬರಲಿಲ್ಲ! ಬ್ಯಾಂಕ್‌ನಿಂದ ನಮ್ಮ ಮನೆಗೆ ನೋಟಿಸ್‌ಗಳು ಬರತೊಡಗಿದವು. ನಾಲ್ಕಾರು ಜನರಿಂದ ಮಾಹಿತಿ ಸಂಗ್ರಹಿಸಿ ಆಂಧ್ರಕ್ಕೆ ಹೋದರೆ-“ನೀವು ಯಾರೆಂದೇ ಗೊತ್ತಿಲ್ಲ. ನನಗೆ ಮರೆವಿನ ಕಾಯಿಲೆ ಇದೆ’ ಅಂದ ರಮೇಶ್‌ ರೆಡ್ಡಿ! ಸಿಟ್ಟಿಗೆದ್ದು ಎರಡೇಟು ಹಾಕಿದೆ ನೋಡಿ; ಬೆಂಗಳೂರಿನ ರೌಡಿಯೊಬ್ಬ ನನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದೆಲ್ಲ ಆರೋಪಿಸಿ ನನ್ನ ಮೇಲೆ ದೂರು ದಾಖಲಿಸಿಬಿಟ್ಟ!

ಅಷ್ಟೆ: ಇನ್ನೆಂದೂ ರೌಡಿಸಂ ಮಾಡಬಾರದು ಅಂದು ಕೊಂಡಿದ್ದ ನಾನು, ಮತ್ತೆ ಫೀಲ್ಡ್‌ಗೆ ಇಳಿಯಲು ನಿರ್ಧರಿಸಿಬಿಟ್ಟೆ. ಪ್ಲಾನ್‌ ಮಾಡಿಕೊಂಡು ಹೋಗಿ ರೆಡ್ಡಿಯನ್ನು ಮುಗಿಸಬೇಕು ಅಂದುಕೊಂಡೆ. ಸೀದಾ ಬೆಂಗಳೂರಿಗೆ ಬಂದು, ನನಗೆ ಬುದ್ಧಿ ಹೇಳಿದ್ದ ಇನ್‌ಸ್ಪೆಕ್ಟರ್‌ ಅನ್ನು ಕಂಡು, ನಡೆದುದನ್ನೆಲ್ಲ ತಿಳಿಸಿದೆ. ಮುಂದಿನ ವಾರ ಅವನನ್ನು ಎತ್ತಿಬಿಡ್ತೇನೆ ಸರ್‌, ಅಂದೂ ಬಿಟ್ಟೆ. “ನೋಡೂ, ಒಂದು ಹಾವಿಗೆ ಒಂದು ಹದ್ದು ಇದ್ದೇ ಇರ್ತದೆ. ಆ ಖದೀಮನಿಗೆ ದೇವರೇ ಶಿಕ್ಷೆ ಕೊಡ್ತಾನೆ. ನೀನು ತೆಪ್ಪಗಿರು. ಸಾಧ್ಯವಾದಷ್ಟು ಸಾಲ ತೀರಿಸು. ಕೋರ್ಟ್‌ನಲ್ಲಿ ಮನವಿ ಮಾಡ್ಕೊ. ಯಾವ ಕಾರಣಕ್ಕೂ ರೌಡಿಸಂಗೆ ಹೋಗಬೇಡ. ಯಾರಿಗೆ ಗೊತ್ತು? ಗ್ರಹಚಾರ ಕೆಟ್ಟು ರೆಡ್ಡಿ ಬದಲು ನೀನೇ ಹೋಗಿಬಿಟ್ರೆ. ನೀನು ಹೊಡೆಯುವಾಗ ಅವನು ತೂಕಡಿಸ್ತಾ ಇರ್ತಾನಾ? ನಿನ್ನ ಕಣ್ಣೆದುರೇ ಮೆರೆದಾಡಿದ ಡಾನ್‌ಗಳು ಹೇಗೆ ಖಲಾಸ್‌ ಆದರು ಅನ್ನುವುದನ್ನು ನೋಡಿದ್ದೀಯಲ್ಲ…’ ಅಂದರು!

ಇನ್‌ಸ್ಪೆಕ್ಟರ್‌ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ಕ್ರೈಂ ಮಾಡಿ ಬದುಕಿಡೀ ಜೈಲಿನಲ್ಲಿ ಕೊಳೆಯುವ ಬದಲು ಶ್ರದ್ಧೆಯಿಂದ ಕೆಲಸ ಮಾಡಿ ಏನಾದರೂ ಸಾಧಿಸಬೇಕು ಅನ್ನಿಸಿತು. ಹೆಂಡತಿ, ಮಕ್ಕ ಳಿಗೂ ಇದನ್ನೇ ಹೇಳಿದೆ. ಜಾಮೀನು ಪಡೆದೆ. ಆ ಇನ್‌ಸ್ಪೆಕ್ಟರ್‌ಸಹಾಯದಿಂದಲೇ ಗ್ಯಾಸ್‌ ಏಜನ್ಸಿ ತಗೊಂಡೆ. ಜಟ್ಟಿಯಂತೆ ಇದ್ದವನಿಗೆ ಗ್ಯಾಸ್‌ ಸಿಲಿಂಡರ್‌ ತೂಕ ಅನ್ನಿಸಲಿಲ್ಲ. ಎಕ್ಸ್ಟ್ರಾ ಭಕ್ಷೀಸು ಪಡೆಯದೇ ಗ್ರಾಹಕರಿಗೆ ಸಿಲಿಂಡರ್‌ ಪೂರೈಸಿದೆ. ಬಾಯಿಮಾತಿನ ಮೂಲಕವೇ ನಮ್ಮ ಏಜೆನ್ಸಿಗೆ ಪ್ರಚಾರ ದೊರಕಿತು. ಈ ಮಧ್ಯೆ ಕೆಟ್ಟ ಕುತೂಹಲದಿಂದ ರಮೇಶ್‌ ರೆಡ್ಡಿಯ ಕುರಿತೂ ವಿಚಾರಿಸಿದೆ. ಆತ ಆಂಧ್ರದಲ್ಲೂ ಹಣಕಾಸಿನ ವ್ಯವಹಾರದಲ್ಲಿ ಅಪರಾತಪರ ಮಾಡಿಕೊಂಡು ಜೈಲುಪಾಲಾಗಿರುವ ಸುದ್ದಿ ಸಿಕ್ಕಿತು.

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಇನ್‌ಸ್ಪೆಕ್ಟರ್‌ ಮಾತು ಕೇಳಿ ನಾನೂ ಮನುಷ್ಯನಾದೆ. ನಾಲ್ಕು ಜನಕ್ಕೆ ನೌಕರಿ ಕೊಟ್ಟೆ. ಎಲ್ಲ ಸಾಲ ತೀರಿಸಿ ನೆಮ್ಮದಿಯಿಂದ ಬದುಕ್ತಾ ಇದ್ದೀನಿ, ಗೊತ್ತಾಯ್ತಲ್ಲ, ಕಥೆ ಹೀಗೂ ಇರುತ್ತೆ ಅನ್ನುತ್ತಾ ಆ ಹಿರಿಯರು ನಕ್ಕರು.

-ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next