Advertisement

ಉರುಂಬಿ ಪ್ರದೇಶಕ್ಕೆ ಇನ್ನು ಜೈವಿಕ ಸೂಕ್ಷ್ಮಪ್ರದೇಶ ಪಟ್ಟ ?

09:34 PM Nov 09, 2020 | mahesh |

ಕಡಬ: ಕಡಬ ತಾಲೂಕಿನ ಕುಂತೂರು ಪೆರಾಬೆ ಗ್ರಾಮದ ಕುಮಾರ ಧಾರಾ ನದಿ ತೀರದ ಉರುಂಬಿ ಎಂಬ ಪೌರಾಣಿಕ ಹಿನ್ನೆಲೆಯುಳ್ಳ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶಕ್ಕೆ ಜೈವಿಕ ಸೂಕ್ಷ್ಮಪ್ರದೇಶ ಎನ್ನುವ ಪಟ್ಟ ನೀಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ನಿರ್ಧರಿಸಿದೆ. ತನ್ಮೂಲಕ ಕಳೆದ 10 ವರ್ಷಗಳಿಂದ ಕುಮಾರಧಾರಾ ಉಳಿಸಿ ಎನ್ನುವ ಹೆಸರಿನಲ್ಲಿ ಪರಿಸರ ಪರ ಹೋರಾಟ ನಡೆಸುತ್ತಿರುವ ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ಹೋರಾಟಕ್ಕೆ ತಾತ್ವಿಕ ಜಯ ಸಿಕ್ಕಂತಾಗಿದೆ.

Advertisement

ಜೈವಿಕ ಸೂಕ್ಷ್ಮ ಪ್ರದೇಶವೆಂದರೆ ಭೂಮಿ ಯಲ್ಲಿ ಜೈವಿಕವಾಗಿ ಶ್ರೀಮಂತ ಮತ್ತು ಹೆಚ್ಚು ಅಳಿವಿನಂಚಿನಲ್ಲಿರುವ ಪರಿಸರ ಪ್ರದೇಶಗಳು ಎಂದು ಪರಿಸರ ತಜ್ಞರು ವಿಶ್ಲೇಷಿಸುತ್ತಾರೆ. ಅಂತಹ ಪ್ರದೇಶಗಳಲ್ಲಿ ನಡೆಯುವ ಪರಿಸರ ವಿರೋಧಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ.

ಸುದೀರ್ಘ‌ ಹೋರಾಟ
ಉರುಂಬಿ ಪ್ರದೇಶದಲ್ಲಿ ಕುಮಾರಧಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಜಲವಿದ್ಯುತ್‌ ಸ್ಥಾವರ ಪ್ರಾರಂಭಿಸಲಾಗುವುದು ಎನ್ನುವ ಸುದ್ದಿಯ ಹಿನ್ನೆಲೆಯಲ್ಲಿ ಅದನ್ನು ವಿರೋಧಿಸಿ ಕುಮಾರಧಾರಾ ಪರಿಸರ ಸಂರಕ್ಷಣ ಸಮಿತಿಯ ನೇತೃತ್ವದಲ್ಲಿ ಕುಮಾರಧಾರಾ ಉಳಿಸಿ ಎನ್ನುವ ಹೆಸರಿನಲ್ಲಿ ಕಳೆದ ಸುಮಾರು 10 ವರ್ಷಗಳ ಹಿಂದೆ ಹುಟ್ಟಿಕೊಂಡ ಹೋರಾಟವು ಉರುಂಬಿ ಪ್ರದೇಶವನ್ನು ಜೈವಿಕ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡುತ್ತಲೇ ಬಂದಿತ್ತು. ಹಲವಾರು ಮಂದಿ ಪರಿಸರ ಅಧ್ಯಯನಕಾರರು ಆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜೀವ ವೈವಿಧ್ಯದ ಕುರಿತು ಅಧ್ಯಯನ ನಡೆಸಿ ಉರುಂಬಿ ಜೈವಿಕ ಸೂಕ್ಷ್ಮಪ್ರದೇಶವೆನ್ನುವ ವಿಚಾರಕ್ಕೆ ಪೂರಕವಾಗಿ ವರದಿಗಳನ್ನು ಮಂಡಿಸಿದ್ದರು. ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾಗಿರುವ ಅನಂತ ಹೆಗಡೆ ಅಶೀಸರ ಅವರು ಕಳೆದ ತಿಂಗಳು ಉರುಂಬಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಅವರು ಪಶ್ಚಿಮಘಟ್ಟ ಕಾರ್ಯ ಪಡೆಯ ಅಧ್ಯಕ್ಷರಾಗಿದ್ದ ಸಂದರ್ಭ ದಲ್ಲಿಯೂ ಉರುಂಬಿಗೆ ಭೇಟಿ ನೀಡಿ ಅಲ್ಲಿನ ಜೈವಿಕ ಸಂಪತ್ತು ನಶಿಸುತ್ತಿರುವ ಬಗ್ಗೆ ತಯಾರಿಸಲಾಗಿದ್ದ ವರದಿಗಳ ಅಧ್ಯಯನ ನಡೆಸಿದ್ದರು.

ಅತಿಸೂಕ್ಷ್ಮ ಪ್ರದೇಶ
ಅಳಿವಿನಂಚಿನಲ್ಲಿರುವ ಜಲಚರಗಳು, ಪಕ್ಷಿ ಸಂಕುಲ ,ವನ್ಯ ಸಂಪತ್ತು ಇಲ್ಲಿವೆ. ಈ ಪ್ರದೇಶ ಅತಿಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್‌ ವರದಿಯಲ್ಲಿ ಉಲ್ಲೇಖವಿದೆ. ಸರಕಾರವು ಈ ನಿಟ್ಟಿನಲ್ಲಿ ಸೂಕ್ತ ಆದೇಶ ಹೊರಡಿಸಿ ಉರುಂಬಿ ಪ್ರದೇಶವನ್ನು ಸಂರಕ್ಷಣೆ ಮಾಡಬೇಕಿದೆ.
-ಎನ್‌.ಕರುಣಾಕರ ಗೋಗಟೆ,  ಅಧ್ಯಕ್ಷರು, ಕುಮಾರಧಾರಾ  ಪರಿಸರ ಸಂರಕ್ಷಣ ಸಮಿತಿ

ಪರಿಸರ ಸಂರಕ್ಷಣೆ
ಕಡಬ ತಾ|ನ ಉರುಂಬಿಯನ್ನು ಜೈವಿಕ ಸೂಕ್ಷ್ಮಪ್ರದೇಶ ಎಂದು ಗುರುತಿಸಲಾಗಿದೆ. ¤ ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಣೆ ಮಾಡುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
-ಅನಂತ ಹೆಗಡೆ ಅಶೀಸರ, ಅಧ್ಯಕ್ಷರು, ಕರ್ನಾಟಕ ಜೀವ  ವೈವಿಧ್ಯ ಮಂಡಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next