Advertisement

ಕಲಾಪ ಗಲಾಟೆ; ದಿನವಿಡೀ ವ್ಯರ್ಥ; ಸದಸ್ಯರ ಅಮಾನತು ಖಂಡಿಸಿ ವಿಪಕ್ಷ ಸಭಾತ್ಯಾಗ

01:17 AM Dec 01, 2021 | Team Udayavani |

ಹೊಸದಿಲ್ಲಿ: ಸಂಸತ್‌ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳ ಕಲಾಪಗಳು ವಿಪಕ್ಷಗಳ ಗದ್ದಲಕ್ಕೆ ಬಲಿಯಾಗಿವೆ. ಲೋಕಸಭೆಯಲ್ಲಿ ರೈತರ ಬೇಡಿಕೆಗಳ ಕುರಿತು ಚರ್ಚೆಗೆ ಅವಕಾಶ ನೀಡದ್ದಕ್ಕೆ ಹಾಗೂ ರಾಜ್ಯಸಭೆಯಲ್ಲಿ 12 ಸದಸ್ಯರ ಅಮಾನತು ವಾಪಸ್‌ ಪಡೆಯದ್ದಕ್ಕೆ ಆಕ್ರೋಶಗೊಂಡು, ವಿಪಕ್ಷಗಳು ಸಭಾತ್ಯಾಗ ಮಾಡಿದವು. ಹೀಗಾಗಿ ಎರಡೂ ಸದನಗಳ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

Advertisement

ಆಗಸ್ಟ್‌ನ ಮುಂಗಾರು ಅಧಿವೇಶನದಲ್ಲಿ ದುರ್ವರ್ತನೆ ತೋರಿದ್ದ ವಿಪಕ್ಷಗಳ 12 ಸದಸ್ಯರನ್ನು ಸೋಮವಾರ ಅಮಾನತು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದ ವಿಪಕ್ಷಗಳ ನಿಯೋಗ, ಅಮಾನತು ವಾಪಸ್‌ ಪಡೆಯುವಂತೆ ಮನವಿ ಮಾಡಿದ್ದವು. ಆದರೆ ಅದಕ್ಕೆ ಒಪ್ಪದ ನಾಯ್ಡು ಅವರು, “ದುರ್ವರ್ತನೆ ತೋರಿದ್ದ ಸದಸ್ಯರು ತಮ್ಮ ತಪ್ಪಿನ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪ ಪಟ್ಟಿಲ್ಲ. ಹಾಗಾಗಿ ಅವರನ್ನು ಅಮಾನತು ಮಾಡಿದ್ದು ಸರಿಯಾಗಿಯೇ ಇದೆ’ ಎಂದಿದ್ದರು. ಇದರಿಂದ ಕ್ರುದ್ಧರಾದ ವಿಪಕ್ಷ‌Ò ನಾಯಕರು, ರಾಜ್ಯಸಭೆ ಕಲಾಪವನ್ನು ಬಹಿಷ್ಕರಿಸಿ ಹೊರನಡೆದವು.

ಕ್ಷಮೆಗೆ ಪಟ್ಟು: ಇದೇ ವೇಳೆ, 12 ರಾಜ್ಯಸಭಾ ಸದಸ್ಯರು ಕ್ಷಮೆ ಯಾಚಿಸಿದರಷ್ಟೇ ಅವರ ತಪ್ಪನ್ನು ಮನ್ನಿಸಬಹುದು ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

ಲೋಕಸಭೆಯಲ್ಲೂ ಗದ್ದಲ: ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ, ಟಿಆರ್‌ಎಸ್‌ ಸದಸ್ಯರು ಸದನದ ಬಾವಿಗಿಳಿದು, “ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಮಾನ್ಯತೆ ನೀಡಬೇಕು ಮತ್ತು ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಘೋಷಣೆ ಕೂಗತೊಡಗಿದರು. ಇದೇ ವೇಳೆ, ಕಾಂಗ್ರೆಸ್‌, ಎಡಪಕ್ಷಗಳು ಕೂಡ ತಮ್ಮ ಆಸನದಲ್ಲೇ ಕುಳಿತು ರೈತರ ವಿಚಾರ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕೋರಿಕೊಂಡರು. ಅವಕಾಶ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿಪಕ್ಷಗಳು, “ಸರಕಾರವು ವಿಪಕ್ಷಗಳ ಧ್ವನಿ ಅಡಗಿಸುತ್ತಿದೆ’ ಎಂದು ಆರೋಪಿಸಿ ಸಭಾತ್ಯಾಗ ಮಾಡಿದವು. ಕೊನೆಗೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Advertisement

ಮಸೂದೆ ಮಂಡನೆ: ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ (ವೇತನ ಮತ್ತು ಸೇವಾ ನಿಬಂಧನೆಗಳು) ತಿದ್ದುಪಡಿ ಮಸೂದೆ, 2021 ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ಜಡ್ಜ್ಗಳು ಯಾವಾಗ ಹೆಚ್ಚುವರಿ ಪಿಂಚಣಿ ಅಥವಾ ಕೌಟುಂಬಿಕ ಪಿಂಚಣಿಗೆ ಅರ್ಹರಾಗುತ್ತಾರೆ ಎಂಬುದರ ಬಗ್ಗೆ  ಸ್ಪಷ್ಟ ಮಾಹಿತಿಯಿರುವ ಮಸೂದೆ ಇದಾಗಿದೆ.

6 ಲಕ್ಷ ಮಂದಿಯಿಂದ ಪೌರತ್ವ ತ್ಯಾಗ
ಕಳೆದ 5 ವರ್ಷಗಳಲ್ಲಿ ಸುಮಾರು 6 ಲಕ್ಷ ಭಾರತೀಯರು ತಮ್ಮ ಪೌರತ್ವವನ್ನು ತೊರೆದಿದ್ದಾರೆ ಎಂದು ಲೋಕಸಭೆಗೆ ಸಚಿವ ನಿತ್ಯಾನಂದ ರಾಯ್‌ ಮಾಹಿತಿ ನೀಡಿದ್ದಾರೆ. ಸರಕಾರಕ್ಕಿರುವ ಮಾಹಿತಿ ಪ್ರಕಾರ, 1.33 ಕೋಟಿಗೂ ಅಧಿಕ ಭಾರತೀಯರು ವಿದೇಶಗಳಲ್ಲಿದ್ದಾರೆ ಎಂದೂ ತಿಳಿಸಿದ್ದಾರೆ. ಈ ಮಧ್ಯೆ, ರಾಷ್ಟ್ರವ್ಯಾಪಿ ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕರ ನೋಂದಣಿ) ಜಾರಿ ಮಾಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಸ್ವಾತಂತ್ರಾéನಂತರ ಎಸ್‌ಸಿ, ಎಸ್‌ಟಿಗಳ ಗಣತಿ ನಡೆಸಿದ್ದು ಬಿಟ್ಟರೆ, ಬೇರೆ ಯಾವುದೇ ಜಾತಿಗಣತಿ ಮಾಡಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿದೆ. ಜಾತಿಗಣತಿಗಾಗಿ ಸರಕಾರ ಯಾವುದಾದರೂ ಯೋಜನೆಯನ್ನು ರೂಪಿಸಿದೆಯೇ ಎಂಬ ಪ್ರಶ್ನೆಗೆ ಈ ಮಾಹಿತಿ ನೀಡಲಾಗಿದೆ.

ಜಿಎಸ್ಟಿ ನಷ್ಟ ಪರಿಹಾರಕ್ಕೆ ಬದ್ಧ: ವಿತ್ತ ಸಚಿವೆ
ದೇಶಾದ್ಯಂತ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಿಂದ ರಾಜ್ಯಗಳಿಗೆ ಉಂಟಾಗಲಿರುವ ನಷ್ಟ ಪರಿಹಾರವನ್ನು ಐದು ವರ್ಷಗಳವರೆಗೆ ತುಂಬಿಕೊಡುವಲ್ಲಿ ನಾವು ಬದ್ಧರಾಗಿದ್ದೇವೆ ಎಂದಿದೆ ಕೇಂದ್ರ ಸರಕಾರ. ಈ ಬಗ್ಗೆ ರಾಜ್ಯಸಭೆಗೆ ಲಿಖೀತ ಉತ್ತರ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಜಿಎಸ್‌ಟಿ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯಲ್ಲಿ ಪರಿಹಾರ ನೀಡುವುದರ ಬಗ್ಗೆ ಉಲ್ಲೇಖೀಸಲಾಗಿದೆ. ವಾರ್ಷಿಕ ಜಿಎಸ್ಟಿ ಆದಾಯದ ಶೇ.14 ಅನ್ನು ರಾಜ್ಯಗಳಿಗೆ ನೀಡಲಾಗುತ್ತದೆ ಎಂದಿ

ದ್ದಾರೆ. 2022ರ ಬಳಿಕವೂ ರಾಜ್ಯಗಳ ಆದಾಯ ಶೇ.14ರ ದರದಲ್ಲಿ ವೃದ್ಧಿಯಾಗದಿದ್ದರೂ, ರಾಜ್ಯಗಳಿಗೆ ನೀಡಲಾಗುವ ನಷ್ಟ ಪರಿಹಾರವನ್ನು ಕೇಂದ್ರ ಮುಂದುವರಿಸುತ್ತದೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಸಂಸತ್‌ ಮುಖ್ಯಾಂಶಗಳು
ಕರ್ನಾಟಕದ ಪರಿವಾರ ಮತ್ತು ತಳವಾರ ಸಮುದಾಯವನ್ನು ಒಬಿಸಿ ಪಟ್ಟಿಯಿಂದ ತೆಗೆದುಹಾಕುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಕೋರಿಕೆ ಬಂದಿದೆ. ಸಂಸತ್‌ನಲ್ಲಿ ಆ ಬಗ್ಗೆ ನಿರ್ಧಾರವಾಗಲಿದೆ- ಲೋಕಸಭೆಯಲ್ಲಿ ಸಚಿವೆ ಪ್ರತಿಮಾ ಭೌಮಿಕ್‌.

2020ರಲ್ಲಿ ದೇಶಾದ್ಯಂತ 5,579 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಈ ಸಂಖ್ಯೆ 5,957 ಆಗಿತ್ತು ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾಹಿತಿ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾರದ ಸಾಲದ ಪ್ರಮಾಣವು ದೇಶದ ಜಿಡಿಪಿಯ ಶೇ.62ರಷ್ಟಿದ್ದು, ಮರುಪಾವತಿಸುವ ಸಾಮರ್ಥ್ಯವಿದೆ ಎಂದ ಸಚಿವ ಪಂಕಜ್‌ ಚೌಧರಿ.

ಕಳೆದ 2 ವರ್ಷಗಳಲ್ಲಿ 8.3 ಲಕ್ಷ ಕೊರೊನಾ ಸೋಂಕಿತರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ.

ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ 1,678 ಕಾಶ್ಮೀರಿ ವಲಸಿಗರು ಕಣಿವೆಗೆ ವಾಪಸಾಗಿದ್ದಾರೆ- ಸಚಿವ ನಿತ್ಯಾನಂದ ರಾಯ್‌ ಮಾಹಿತಿ.

ಪೊಲೀಸ್‌ ಸಿಬಂದಿ ಸೇರಿದಂತೆ ಯಾವುದೇ ಒಂದು ವರ್ಗಕ್ಕೆ ಸಾಲ ನೀಡಬಾರದು ಎಂದು ಬ್ಯಾಂಕ್‌ಗಳಿಗೆ ಸರಕಾರ ನಿರ್ದೇಶನ ನೀಡಿಲ್ಲ – ವಿತ್ತ ಸಚಿವೆ ನಿರ್ಮಲಾ ಸ್ಪಷ್ಟನೆ.

Advertisement

Udayavani is now on Telegram. Click here to join our channel and stay updated with the latest news.

Next