Advertisement

ಹಿಂದಿ ದಿವಸ್‌ ಆಚರಣೆ ವಿರುದ್ಧ ಆಕ್ರೋಶ

02:46 PM Sep 15, 2022 | Team Udayavani |

ಹಾವೇರಿ: ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆ ಒಡೆಯುತ್ತಿರುವ ಹಿಂದಿ ದಿವಸ್‌ ಆಚರಣೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಸಂಗೂರ ಕರಿಯಪ್ಪ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಈ ವೇಳೆ ಸಂಘಟನೆಯ ಪ್ರಮುಖರು ಮಾತನಾಡಿ, ಭಾರತದ ಒಕ್ಕೂಟ ಸರ್ಕಾರ ಪ್ರತಿ ವರ್ಷ ಸೆ.14ರಂದು ನಮ್ಮ ತೆರಿಗೆ ಹಣದಿಂದ ಹಿಂದಿ ದಿವಸ್‌ ಆಚರಿಸುತ್ತಾ ಬಂದಿದೆ. ಕೇವಲ ಹಿಂದಿ ದಿವಸ್‌ ಒಂದನ್ನೇ ಅಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಹಿಂದಿಯೊಂದನ್ನೇ ಪ್ರತಿ ವರ್ಷ ಮೆರೆಸುತ್ತಿದೆ. ಇದನ್ನು ಕರವೇ ಸಂಘಟನೆ ಎರಡು ದಶಕಗಳಿಂದ ಖಂಡಿಸುತ್ತಾ ಬಂದಿದೆ ಎಂದರು.

ಭಾರತ ಸರ್ಕಾರ ಕೇವಲ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳನ್ನು ಮಾತ್ರವೇ ತನ್ನ ಆಡಳಿತ ಭಾಷೆಗಳನ್ನಾಗಿ ಮಾಡಿಕೊಂಡಿದೆ. ಇದರಿಂದಾಗಿ ದೇಶದ ಇತರ ಭಾಷೆಗಳ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆಗಳು, ಉದ್ಯೋಗ ನೇಮಕಾತಿ, ಸಾರ್ವಜನಿಕ ಸೇವೆಗಳಲ್ಲಿ ಬಹಳ ಅನಾನುಕೂಲವಾಗುತ್ತಿದೆ. ಬ್ಯಾಂಕ್‌ ಹಾಗೂ ಇತರ ಒಕ್ಕೂಟ ಸರ್ಕಾರದ ಇಲಾಖೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಇಂತಹ ತಾರತಮ್ಯ ನೀತಿಗಳಿಂದ ಅನ್ಯಾಯವಾಗುತ್ತಿದೆ ಎಂದು ದೂರಿದರು.

ಹಿಂದಿ ಭಾಷೆಯೊಂದಕ್ಕೆ ಉಳಿದ ಭಾಷೆಗಳಿಗಿಂತ ಮೇಲಿನ ಸ್ಥಾನ ನೀಡಿ, ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಎಲ್ಲಾ ಹಿಂದಿಯೇತರ ಜನರ ಮೇಲೆ ಹೇರಿಕೆ ಮಾಡುತ್ತಿರುವುದು ತಕ್ಷಣದಿಂದಲೇ ನಿಲ್ಲಬೇಕು. ಭಾರತಕ್ಕೆ ಯಾವುದೇ ಒಂದು ರಾಷ್ಟ್ರ ಭಾಷೆಯಿಲ್ಲ. ಎಲ್ಲ 22 ಭಾಷೆಗಳೂ ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೆ ಅದು ಸಂವಿಧಾನ ಹೇಳುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿರುತ್ತದೆ. ಆದರೆ, ಅಧಿಕೃತ ಭಾಷಾ ಕಾಯ್ದೆ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಸಂವಿಧಾನ ಜಾರಿಯಾದಾಗಿನಿಂದಲೂ ನಡೆದುಕೊಂಡು ಬಂದಿರುವುದು ದುರ್ದೈವದ ಸಂಗತಿ ಎಂದರು.

ಈ ಹಿನ್ನೆಲೆಯಲ್ಲಿ ಅಸಮಾನತೆ ತೊಡೆದು ಹಾಕಿ, ಸಮಾನತೆ ಎತ್ತಿ ಹಿಡಿಯಲು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಬೇಕು. ಹಿಂದಿ ಮತ್ತು ಇಂಗ್ಲಿಷ್‌ಗೆ ನೀಡಿರುವ ಮಾನ್ಯತೆಯನ್ನು ಎಲ್ಲ ಭಾಷೆಗಳಿಗೂ ನೀಡಬೇಕು. ಭಾರತ ಬಹು ಭಾಷೆ, ಸಂಸ್ಕೃತಿ, ಧರ್ಮಗಳ ನಾಡು. ಈ ಬಹುತ್ವ ಸಂಸ್ಕೃತಿ ಉಳಿದರಷ್ಟೇ ಒಕ್ಕೂಟ ಉಳಿಯಲು ಸಾಧ್ಯ. ಒಕ್ಕೂಟ ವ್ಯವಸ್ಥೆಯ ಈ ಮೂಲಮಂತ್ರವನ್ನೇ ನಮ್ಮ ಸಂವಿಧಾನ ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ತಕ್ಷಣವೇ ಈ ಎಲ್ಲ 22 ಭಾಷೆಗಳನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕು. ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗೆ ಸಿಗುವ ಶಿಕ್ಷಣ, ಉದ್ಯೋಗ ವ್ಯವಸ್ಥೆಗಳನ್ನು ಎಲ್ಲ ಭಾಷೆಗಳಿಗೆ ವಿಸ್ತರಿಸಬೇಕು. ಹಿಂದಿ ದಿವಸ್‌, ಹಿಂದಿ ಸಪ್ತಾಹ, ಹಿಂದಿ ಪಕ್ವಾಡ್‌ನ‌ಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ರಾಜ್ಯ ಕಾರ್ಯದರ್ಶಿ ಕರಿಬಸಯ್ಯ ಎಸ್‌.ಬಿ., ಸತೀಶಗೌಡ್ರ ಮುದಿಗೌಡ್ರ, ಬಿ.ಎಚ್‌.ಬಣಕಾರ, ಪರಮೇಶಪ್ಪ ಕಾಟೇಕರ್‌, ಫಕ್ಕೀರೇಶ ಯಾದವ್‌, ವಿಜಯಲಕ್ಷ್ಮೀ ಗುಡಿಮಿ, ಸತ್ಯವತಿ, ಹಾಲೇಶ ಹಾಲಣ್ಣನವರ, ಮಾರುತಿ ಪೂಜಾರ, ಸಂತೋಷ ಪಾಟೀಲ, ಪರಶುರಾಮ ಈಳಗೇರ, ಎ.ಎಸ್‌.ಖಾದ್ರಿ ಇತರರಿದ್ದರು.

ಭಾಷಾ ತಾರತಮ್ಯದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಕೇಂದ್ರ ಸರ್ಕಾರದ ಹಿಂದಿ ಪರವಾದ ನೀತಿಗಳಿಂದ ಹಿಂದಿ ಭಾಷಿಕರು ದೇಶದ ಯಾವ ರಾಜ್ಯಕ್ಕೆ ಹೋಗಿ ನೆಲೆಸಿದರೂ, ಕೇಂದ್ರ ಸರ್ಕಾರದ ಎಲ್ಲ ಸೇವೆಗಳು ಹಿಂದಿ ಭಾಷೆಯಲ್ಲೇ ಸಿಗುತ್ತವೆ. ಆದರೆ, ಒಬ್ಬ ಕನ್ನಡಿಗ, ಒಬ್ಬ ಮಲೆಯಾಳಿ ಅಥವಾ ಇನ್ನಾವುದೇ ಭಾಷೆಗಳ ಜನರಿಗೆ ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಯ ಸೇವೆ ಲಭಿಸುವುದಿಲ್ಲ. ಇಂತಹ ತಾರತಮ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತಿವೆ. ಕೇಂದ್ರ ಸರ್ಕಾರದ ಅಸಮಾನತೆಯ ಭಾಷಾ ನೀತಿಯಿಂದಾಗಿ ಈ ರೀತಿ ತಾರತಮ್ಯ ನಡೆದುಕೊಂಡು ಬಂದಿದೆ ಎಂದು ಪ್ರತಿಭಟನಾಕಾರರು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next