Advertisement

ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ: ಕೋಟಿ ಸಹಿ ಸಂಗ್ರಹ

05:46 PM May 02, 2022 | Team Udayavani |

ಬಾಗಲಕೋಟೆ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಎಐಡಿಎಸ್‌ಒ ಸಂಘಟನೆಯಿಂದ ಜಿಲ್ಲೆಯಾದ್ಯಂತ ಸಹಿ ಸಂಗ್ರಹ ಅಭಿಯಾನದ ಹೋರಾಟ ಆರಂಭಿಸಲಾಗಿದೆ.

Advertisement

ನಗರದಲ್ಲೂ ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಸಹಿ ಸಂಗ್ರಹಕ್ಕೆ ಚಾಲನೆ ನೀಡಿ, ಎಐಡಿಎಸ್‌ಒನ ಜಿಲ್ಲಾ ಸಹ ಸಂಚಾಲಕಿ ಸುರೇಖಾ ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ವಿರುದ್ಧ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ, ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ವಿರೋಧದ ನಡುವೆಯೂ ಈ ನೀತಿಯನ್ನು ಇದೀಗ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಸಾರ್ವಜನಿಕ ಶಿಕ್ಷಣ ನಾಶಗೊಳಿಸಿ, ಶಿಕ್ಷಣ ಕ್ಷೇತ್ರದ ಸಂಪೂರ್ಣ ವ್ಯಾಪಾರೀಕರಣಗೊಳಿಸುವ ಉದ್ದೇಶದಿಂದಲೇ ಎನ್‌ಇಪಿ ಅನ್ನು ಅಪ್ರಜಾತಾಂತ್ರಿಕವಾಗಿ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆರಂಭದಿಂದಲೂ ಈ ಕರಾಳ ನೀತಿಯನ್ನು ನಮ್ಮ ಸಂಘಟನೆ ವಿರೋಧಿ ಸುತ್ತಿದೆ. ಈ ಹೋರಾಟದ ಮುಂದುವರಿದ ಭಾಗವಾಗಿ ದೇಶಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ.

ಎನ್‌ಇಪಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕರ್ನಾಟಕ ಸರ್ಕಾರ ನಾಲ್ಕು ವರ್ಷದ ಪದವಿ ಕೋರ್ಸ್‌ ಅನ್ನು ಪ್ರಸ್ತುತ ಶೈಕ್ಷಣಿಕ ವರ್ಷ ಜಾರಿ ಮಾಡಿದೆ. ಆದರೆ, ಪರೀಕ್ಷೆಗಳಿಗೆ ಇನ್ನು ಒಂದು ತಿಂಗಳು ಮಾತ್ರ ಉಳಿದಿದ್ದು, ಸರ್ಕಾರ ಮತ್ತು ವಿವಿಗಳು ನೂತನ ಕೋರ್ಸ್‌ಗೆ ಪೂರಕವಾದ ಪಠ್ಯಕ್ರಮ, ಎಲ್ಲ ವಿಷಯಗಳಿಗೂ ಸಂಬಂಧಪಟ್ಟಂತೆ ಪಠ್ಯಪಸ್ತಕಗಳು ತಯಾರಿ ಮಾಡಿರಲಿಲ್ಲ. ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ನಡೆದಿರಲಿಲ್ಲ. ಈ ಹಠಾತ್‌ ಹೇರಿಕೆಯು ರಾಜ್ಯದ ಪದವಿ ಶಿಕ್ಷಣದಲ್ಲಿ ಅತ್ಯಂತ ಗೊಂದಲ ಹಾಗೂ ಸಮಸ್ಯೆ ಸೃಷ್ಟಿಸಿದೆ. ದೊಡ್ಡ ಸಂಖ್ಯೆ ವಿದ್ಯಾರ್ಥಿಗಳ ಭವಿಷ್ಯ ಈಗ ಅಂಧಕಾರದಲ್ಲಿ ಇದೆ ಎಂದು ಹೇಳಿದರು.

ಎನ್‌ಇಪಿಯು ಶಿಕ್ಷಣದ ಖಾಸಗೀಕರಣಕ್ಕೆ ಹಾಗೂ ವ್ಯಾಪಾರೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತ, ಅದಕ್ಕೆ ಪೂರಕವಾದ ಪ್ರಸ್ತಾವನೆ ನೀಡಿದೆ. ಉದಾಹರಣೆಗೆ ಶಾಲೆಗಳ ವಿಲೀನ’ದ ಹೆಸರಿನಲ್ಲಿ  ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾವನೆ ಎನ್‌ಇಪಿ ನೀತಿಯಲ್ಲಿದೆ. ಹಲವು ಪ್ರಸ್ತಾವನೆಗಳ ಮೂಲಕ ಈ ನೀತಿಯು ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣದ ನೀಲಿನಕ್ಷೆಯಾಗಿದೆ. ಮಹಾನ್‌ ವ್ಯಕ್ತಿಗಳ, ಹೋರಾಟಗಾರರ ತ್ಯಾಗ ಬಲಿದಾನಗಳಿಂದ ದೊರಕಿರುವ ಶಿಕ್ಷಣವು ಕೆಲವೇ ಜನರ ಸ್ವತ್ತಾಗಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಇಂತಹ ಕರಾಳ ನೀತಿಗಳನ್ನು ವಿರೋಧಿಸಿ ಸಾರ್ವಜನಿಕ ಶಿಕ್ಷಣ ಉಳಿಸಲು ಪ್ರಬಲ ಆಂದೋಲನ ಬೆಳೆಸಬೇಕು. ಪ್ರತಿಯೊಬ್ಬರೂ ಈ ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಎಐಡಿಎಸ್‌ಒ ಸಂಘಟನೆಯ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸರ್ಕಾರ ಹೇರಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಶಿಕ್ಷಣದ ಖಾಸಗೀಕರಣಕ್ಕೆ ಹಾಗೂ ವ್ಯಾಪಾರೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿದೆ. ಅದಕ್ಕೆ ಪೂರಕವಾದ ಪ್ರಸ್ತಾವನೆ ನೀಡಿದೆ. ಉದಾಹರಣೆಗೆ ಶಾಲೆಗಳ ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾವನೆ ಎನ್‌ಇಪಿ ನೀತಿಯಲ್ಲಿದೆ. ಹಲವು ಪ್ರಸ್ತಾವನೆಗಳ ಮೂಲಕ ಈ ನೀತಿಯು ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣದ ನೀಲಿನಕ್ಷೆಯಾಗಿದೆ.
ಸುರೇಖಾ, ಜಿಲ್ಲಾ ಸಹ ಸಂಚಾಲಕಿ, ಎಐಡಿಎಸ್‌ಒ

Advertisement

Udayavani is now on Telegram. Click here to join our channel and stay updated with the latest news.

Next