ಹುಬ್ಬಳ್ಳಿ:ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಿದ್ಧ. ಕುಡಿಯುವ ನೀರು ಪ್ರತಿ ಜೀವಿಗೂ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಮಾತುಕತೆಗೆ ಸಿದ್ಧ ಎಂದು ಗೋವಾ ಸಿಎಂ ಮನೋಹರ್ ಪರ್ರೀಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರಿಗೆ ಬರೆದಿರುವ ಪತ್ರವನ್ನು ಓದಿ ವಿವರ ನೀಡಿದರು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಭಾಷಣದಲ್ಲಿ ಪರ್ರೀಕರ್ ಬರೆದ ಪತ್ರದ ಸಾರಾಂಶವನ್ನು ಹೇಳಿದರು.
ಟ್ರಿಬ್ಯೂನಲ್ ಗೆ ಅರ್ಜಿ ಹಾಕಿಸಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಬಿಎಸ್ ವೈ ಭರವಸೆ ನೀಡಿದರು. ಕುಡಿಯುವ ನೀರು ಕೊಡಿಸುವ ಜವಾಬ್ದಾರಿ ನಮ್ಮದು ಎಂದರು. ಮಾನವೀಯತೆ ದೃಷ್ಟಿಯಿಂದ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಗೋವಾ ಸಿಎಂ ಈ ಸಂದರ್ಭದಲ್ಲಿ ಹೇಳಿರುವುದಾಗಿ ಬಿಎಸ್ ವೈ ವಿವರಿಸಿದರು.
ಮಹದಾಯಿ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ಕಾರಣ. ಮಹದಾಯಿ ವಿವಾದ ಬಗೆಹರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸಿಎಂ ಮಾತುಕತೆಗೆ ಒಪ್ಪಿದ್ದಾರೆ ಎಂದು ಹೇಳಿದರು.
ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.