Advertisement

ಮಾಹಿತಿಗೆ ಓಪನ್‌ ಡೇಟಾ ವೇದಿಕೆ

12:51 AM Dec 26, 2019 | Lakshmi GovindaRaj |

ಬೆಂಗಳೂರು: ನಗರದ ಸರ್ಕಾರಿ ಸಂಸ್ಥೆಗಳ ಕಾರ್ಯವೈಖರಿ ಕುರಿತು ಒಂದೇ ಕಡೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ “ಓಪನ್‌ ಡೇಟಾ ಪ್ಲಾಟ್‌ಫಾರ್ಮ್’ ಸೌಲಭ್ಯ ತರಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ ಅಂಗವಾಗಿ ನೃಪತುಂಗ ರಸ್ತೆಯ ಯವನಿಕ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ “ಸುಶಾಸನ ದಿನ’ದಲ್ಲಿ ಅವರು ಮಾತನಾಡಿದರು.

Advertisement

ಸರ್ಕಾರಿ ಕೆಲಸಗಳಲ್ಲಿ ಸಾರ್ವಜನಿಕರು ಭಾಗವಹಿಸಲು ಜನರಿಗೆ ಮುಕ್ತ ಮಾಹಿತಿ ಒದಗಿಸ ಅವಶ್ಯಕತೆ ಇದೆ. ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಬಿಎಂಆರ್‌ಸಿಎಲ್‌ನಂತಹ ಬೆಂಗಳೂರಿನ ಪ್ರಮುಖ ಸರ್ಕಾರಿ ಸಂಸ್ಥೆಗಳ ಮಾಹಿತಿಯು, ಅಂಕಿ ಅಂಶಗಳು ಸಾರ್ವಜನಿಕರಿಗೆ ಮುಕ್ತವಾಗಿ ಲಭಿಸಬೇಕಿದೆ. ಹೀಗಾಗಿ, ಈ ಸಂಸ್ಥೆಗಳು ಕೈಗೊಂಡಿರುವ ಯೋಜನೆಗಳ, ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಒಂದೇ ಕಡೆ ಸಿಗುವಂತೆ “ಓಪನ್‌ ಡೇಟಾ ಪ್ಲಾಟ್‌ಫಾರ್ಮ್’ ಮಾಡಲಾಗುತ್ತದೆ.

ಇಲ್ಲಿ ಬೆಂಗಳೂರಿನ ಪ್ರತಿ ನಾಗರಿಕರಿಗೂ ಎಲ್ಲ ಬಗೆಯ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಈ ವ್ಯವಸ್ಥೆಯು ಬೆಂಗಳೂರನ್ನು ವಿಶ್ವಮಟ್ಟದಲ್ಲಿ ಹೆಸರು ಮಾಡಲು ಸಹಾಯಕವಾಗುತ್ತದೆ. ಜತೆಗೆ ಬಹುದಿನಗಳ ಬೇಡಿಯಾಗಿದ್ದ ನಗರದ ರಸ್ತೆ ಇತಿಹಾಸ ಕುರಿತ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಮಾಡಲಾಗುತ್ತಿದ್ದು, ಜನವರಿಯ ಅಂತ್ಯಕ್ಕೆ ಗಡುವು ನೀಡಲಾಗಿದೆ ಎಂದರು.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. ಹೀಗಾಗಿ, ನಗರದ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನು ಜನರಿಗೆ ಹತ್ತಿರವಾಗಿ, ಇರುವ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ವಿವಿಧ ಅಧಿಕಾರಿಗಳ, ತಜ್ಞರ ಸಭೆ, ಸಮನ್ವಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರಿಗೆ ಬರುವವರಿಗೆ ಅಥವಾ ಇಲ್ಲಿಯವರಿಗೆ ಉಂಟಾಗುವ ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ ನೀಡಲು ಪರಿಣಾಮಕಾರಿ ವ್ಯವಸ್ಥೆ ತರಲಾಗುತ್ತದೆ. ಇಲ್ಲಿ ತಮ್ಮ ಸಮಸ್ಯೆಗಳಿಗೆ ಯಾರನ್ನು ಹೇಗೆ ಸಂಪರ್ಕಿಸಬೇಕು ಎಂಬುದು ಸುಲಭವಾಗಲಿದೆ ಎಂದು ತಿಳಿಸಿದರು.

ಸಕಾಲ ಪರಿಹಾರ: ಇಂದು ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಇದಕ್ಕೆ ಸಕಾಲವು ಪರಿಹಾರವಾಗಿದೆ. ಸಕಾಲವು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಸರ್ಕಾರದ ಸುಮಾರು 250 ಸೇವೆಗಳನ್ನು ಸಕಾಲದಡಿ ಲಭ್ಯವಿದ್ದು, ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

Advertisement

ಅಭಿವೃದ್ಧಿಗೆ ನಿರ್ಣಯ: ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ನಗರ ಸರ್ಕಾರಿ ಸಂಸ್ಥೆಗಳ ಅಧಿಕಾರಿಗಳ ವಿಚಾರ ಸಂಕಿರಣ ಹಾಗೂ ಕಾರ್ಯನಿರ್ವಹಣೆ, ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿಲಾಯಿತು. ಇಲ್ಲಿ ಮುಖ್ಯವಾಗಿ ಸಕಾಲ ಯೋಜನೆಯ ಯಶಸ್ವಿ ಅನುಷ್ಠಾನ ಹಾಗೂ ನಗರಾಭಿವೃದ್ಧಿಗೆ ಎಲ್ಲ ಇಲಾಖೆಗಳ ಅಗತ್ಯ ಸಮನ್ವಯತೆಯನ್ನು ಕಾಯ್ದುಕೊಳ್ಳುವ ಮೂಲಕ ನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯ ಎಂಬ ನಿರ್ಣಯಕ್ಕೆ ಬರಲಾಯಿತು.

ಗೋಷ್ಠಿಯನ್ನು ಉದ್ದೇಶಿಸಿ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌ ಮಾತನಾಡಿ, ಬಿಬಿಎಂಪಿಯು ಸ್ಥಳೀಯ ಮಟ್ಟದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುಮತಿಯನ್ನು ಆನ್‌ಲೈನ್‌ ಮೂಲಕ ಪಡೆಯುವುದು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಗಣನೀಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಣ ಮತ್ತು ಹಸಿ ತ್ಯಾಜ್ಯಗಳ ವಿಂಗಡಣೆಗಾಗಿ ಪ್ರತ್ಯೇಕ ಪ್ಲಾಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಬೆಂಗಳೂರು ನಗರವನ್ನು 3 ಡಿ ನಗರವನ್ನಾಗಿಸಲು ಪಾಲಿಕೆ ಸಾಕಷ್ಟು ಶ್ರಮ ವಹಿಸುತ್ತಿದೆ. ನಗರದಲ್ಲಿ ಕೆರೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಉಳಿದಂತೆ ನಗರದಾದ್ಯಂತ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು ಎಂದು ಹೇಳಿದರು. ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ಕಡಿವಾಣ ಹೇರಲು ವಲಯ ನಿಯಮವಾಳಿಗೆ ತಿದ್ದುಪಡಿ ತರಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಮೂರು ಲಕ್ಷ ವಾಣಿಜ್ಯ ಕಟ್ಟಡಗಳಿವೆ.

ಆದರೆ, ಬೆಸ್ಕಾಂನಿಂದ ಒಂದೂವರೆಪಟ್ಟು ಹೆಚ್ಚು ಕಟ್ಟಡಗಳು ವಾಣಿಜ್ಯ ವಿದ್ಯುತ್‌ ಸಂಪರ್ಕ ಪಡೆದಿವೆ. ಈಗ ಇಂತಹ ಕಟ್ಟಡಗಳಿಗೆ ನೀರು, ವಿದ್ಯುತ್‌ ಕಡಿತಗೊಳಿಸುವ ಕ್ರಮ ಕೈಗೊಳ್ಳಲಾಗುವುದು.ಈ ನಿಯಮ ಜಾರಿಯಾದರೆ ಅಕ್ರಮ ಕಡಿಮೆಯಾಗಲಿದೆ. ಇನ್ನು ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಅಡ್ಡಿಯಾಗುತ್ತಿದ್ದು, ಈ ವಿಚಾರದಲ್ಲಿ ನ್ಯಾಯಾಂಗ ಮಧ್ಯಪ್ರವೇಶಿಸದಿದ್ದರೆ ಕಾರ್ಯಾಚರಣೆ ಸುಲಭ ಎಂದರು. ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ರಮಣ ರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

ಬೆಂಗಳೂರು-ದೆಹಲಿ ಹೋಲಿಕೆ ಸರಿಯಲ್ಲ: ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಮಾತನಾಡಿ, ನೀರಿನ ವಿಚಾರದಲ್ಲಿ ಬೆಂಗಳೂರು ಹಾಗೂ ನವದೆಹಲಿ ಹೋಲಿಕೆ ಸರಿಯಲ್ಲ. ನವದೆಹಲಿಯಲ್ಲಿ 3 ಕೋಟಿ ಜನರಿಗೆ ನೀರು ನೀಡಲು 33 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಾರೆ. ಆದರೆ, ಬೆಂಗಳೂರು ಜಲಮಂಡಳಿಯಲ್ಲಿ 1.2 ಕೋಟಿ ಜನರಿಗೆ ನೀರು ಕೇವಲ 4 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಸಿಬ್ಬಂದಿ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಳಚೆ ನೀರು ಕೆರೆ ಸೇರುತ್ತಿದೆ ಎಂಬ ದೂರು ಇದೆ. ಆದರೆ ಈಗ 1,500 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿಗಳನ್ನು ನಿರ್ಮಿಸಿ ಶೇ.50 ರಷ್ಟು ಕೊಳಚೆ ನೀರನ್ನು ಸಂಸ್ಕರಿಸಲಾಗುತ್ತಿದೆ. ಸಣ್ಣ ರಸ್ತೆ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಗಳಿಂದ ಒಳಚರಂಡಿ ನಿರ್ಮಾಣ ಕಷ್ಟವಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳ ಸಮನ್ವಯತೆ ಅಗತ್ಯ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.

ವೈಫ‌ಲ್ಯದ ಪರಿಣಾಮಗಳು ಪೊಲೀಸರ ಮೇಲೆ: ನಗರ ಸಂಚಾರ ವಿಭಾಗದ ಉಪ ಆಯುಕ್ತ ರವಿಕಾಂತೇಗೌಡ ಮಾತನಾಡಿ, ನಗರಾಭಿವೃದ್ಧಿ ಯೋಜನೆಗಳ ವೈಫ‌ಲ್ಯಗಳ ಫ‌ಲಿತಾಂಶವನ್ನು ಟ್ರಾಫಿಕ್‌ ಪೊಲೀಸರು ಅನುಭವಿಸುತ್ತಿದ್ದಾರೆ. ಹೀಗಾಗಿ, ಎಲ್ಲ ಇಲಾಖೆಗಳು ಯೋಜನೆ ರೂಪಿಸುವ ಮುನ್ನ ಎಲ್ಲ ಇಲಾಖೆಗಳನ್ನು ಒಳಗೊಳ್ಳಬೇಕಾದ ಅಗತ್ಯವಿದೆ.

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಹೆಚ್ಚಳದ ಬಳಿಕ, ನಿಯಮ ಉಲ್ಲಂಘನೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿಯಲ್ಲಿ ಯಾವುದೇ ಪಾರ್ಕಿಂಗ್‌ ನಿಯಮವಿಲ್ಲ. ಹೀಗಾಗಿ, ಎಲ್ಲೆಂದರಲ್ಲಿ ವಾಹನ ನಿಲ್ಲುಸುತ್ತಾರೆ. ಅಲ್ಲದೆ, ನಗರಾಭಿವೃದ್ಧಿ ಯೋಜನೆಯಲ್ಲಿ ಪ್ರತಿಭಟನೆ ನಡೆಸುವವರಿಗೆ ಸೂಕ್ತ ಸ್ಥಳವನ್ನು ಗುರುತಿಸಬೇಕಿದೆ. ಅದರ ಜತೆಗೆ ಅನಾವಶ್ಯಕ ವಾಹನಗಳ ತಡೆಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next