Advertisement

ಭಿಕ್ಷೆ ಕೇಳಿದ ಮಾನಸಿಕ ಅಸ್ವಸ್ಥನ ಮೇಲೆ ಹಲ್ಲೆ

07:36 PM Nov 18, 2020 | mahesh |

ಮಂಡ್ಯ: ಹಸಿವು ನೀಗಿಸಿಕೊಳ್ಳಲು ಭಿಕ್ಷೆ ಕೇಳಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಮರದ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿರುವ ಘಟನೆ ಬುಧವಾರ ನಡೆದಿದೆ.

Advertisement

ಪಾಂಡವಪುರ ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿರುವ ಶ್ರೀಕಂಠೇಶ್ವರ ಮೆಡಿಕಲ್ ಸ್ಟೋರ್‌ನಲ್ಲಿ ಮಾನಸಿಕ ಅಸ್ವಸ್ಥ ಭಿಕ್ಷೆ ನೀಡುವಂತೆ ಬೇಡಿಕೊಂಡಿದ್ದಾನೆ. ಭಿಕ್ಷೆ ನೀಡಲು ನಿರಾಕರಿಸಿದ ಅಂಗಡಿ ಮಾಲೀಕರು ಮುಂದೆ ಹೋಗುವಂತೆ ಸೂಚಿಸಿದರು. ಆದರೂ, ಅಸ್ವಸ್ಥ ವ್ಯಕ್ತಿ ಮುಂದೆ ಹೋಗದೆ ಹಲವು ಬಾರಿ ಭಿಕ್ಷೆ ನೀಡುವಂತೆ ಒತ್ತಾಯಿಸಿ ಬೇಡಿಕೊಂಡಿದ್ದಾನೆ. ಇದರಿಂದ ಕುಪಿತರಾದ ಅಂಗಡಿ ಮಾಲೀಕ ಶಿಲ್ಪ ಎಂಬುವವರು ಮರದ ರಿಪೀಸ್ ಪಟ್ಟಿಯಿಂದ ಭಿಕ್ಷುಕನ ಮೇಲೆ ಏಳೇಟು ಬಾರಿ ಹಲ್ಲೆ ನಡೆಸಿದ್ದಾರೆ.

ಹಲ್ಲೆಯಿಂದ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತ ಸುರಿಯುತ್ತಿದ್ದನ್ನು ಕಂಡು ಸಾರ್ವಜನಿಕರು ಅಂಗಡಿ ಮಾಲೀಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡು ಗಾಯಗೊಂಡ ವ್ಯಕ್ತಿಯನ್ನು ಅಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ಆದರೆ ಅಂಗಡಿ ಮಾಲೀಕರು ಸಾರ್ವಜನಿಕರ ಮಾತಿಗೆ ಸೊಪ್ಪು ಹಾಕಲಿಲ್ಲ.

ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ನರಳಾಡುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರೇ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು. ವೈದ್ಯರು ತಲೆಗೆ ಹೊಲಿಗೆ ಹಾಕಿ ಚುಚ್ಚು ಮದ್ದು ನೀಡಿ ಕಳುಹಿಸಿದ್ದಾರೆ. ಅಸ್ವಸ್ಥ ವ್ಯಕ್ತಿ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಗ್ರಾಮದ ರಾಜೇಶ್‌ಗೌಡ(೩೮) ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next