Advertisement

Online ವಂಚನೆ ಮೂರು ಪಟ್ಟು ಹೆಚ್ಚಳ; ಷೇರು ಹೂಡಿಕೆ; ಟ್ರೇಡಿಂಗ್‌ ಹೆಸರಲ್ಲಿ ಖೆಡ್ಡಾ!

09:41 AM Mar 01, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿಯೂ ಆನ್‌ಲೈನ್‌ನಲ್ಲಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಭಾರೀ ಏರಿಕೆಯಾಗುತ್ತಿದ್ದು ಕಳೆದೆರಡು ವರ್ಷಗಳಲ್ಲಿ ಪ್ರಕರಣಗಳು ಮೂರುಪಟ್ಟು ಏರಿಕೆಯಾಗಿವೆ.

Advertisement

ಹೊಸಹೊಸ ಮಾರ್ಗಗಳನ್ನು ಸೈಬರ್‌ ವಂಚಕರು ಬಳಸುತ್ತಿದ್ದು ವಿದ್ಯಾವಂತರೇ ಇದರಲ್ಲಿ ಸಿಲುಕಿ ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ, ಪಾರ್ಟ್‌ಟೈಮ್‌ ಜಾಬ್‌, ಕ್ರಿಪ್ಟೋ ಟ್ರೇಡಿಂಗ್‌ ಪ್ರಸ್ತುತ ವಂಚಕರ ಪ್ರಮುಖ ದಾಳಗಳಾಗಿವೆ. ಈ ಮೂಲಕ ಕೋಟ್ಯಂತರ ರೂಪಾಯಿ ವಂಚಕರ ಪಾಲಾಗುತ್ತಿದೆ.

ಲಿಂಕ್‌, ಆ್ಯಪ್‌ ಗಳ ಮೂಲಕ ಗಾಳ ಹಾಕುವ ವಂಚಕರು ಆರಂಭದಲ್ಲಿ ಸಣ್ಣ ಮೊತ್ತವನ್ನು ರಿಟರ್ನ್ಸ್ ಆಗಿ ಪಾವತಿಸುತ್ತಾರೆ. ಹಣ ಹೂಡಿಕೆ ಮಾಡುವವರು ಅದರಿಂದ ಪ್ರೇರಿತರಾಗಿ ದೊಡ್ಡ ಪ್ರಮಾಣದ ಹೂಡಿಕೆ ಮಾಡುತ್ತಾರೆ. ಅವರು ಬಳಸುವ ಆ್ಯಪ್‌ “ಹೆಚ್ಚಿನ ಆದಾಯ’ವನ್ನು ತೋರಿಸಿದರೂ ವಾಸ್ತವವಾಗಿ ಅವರ ಖಾತೆಗೆ ಆ ಹಣ ಜಮೆಯಾಗಿರುವುದಿಲ್ಲ. ಎಇಪಿಎಸ್‌ (ಆಧಾರ್‌ ಸಕ್ರಿಯ ಗೊಳಿಸಿದ ಪಾವತಿ ವ್ಯವಸ್ಥೆ) ಮೂಲಕವೂ ವಂಚನೆಗಳು ನಡೆಯುತ್ತಿವೆ. ಹೆಚ್ಚಿನ ಮೊತ್ತದ ರಿಟರ್ನ್ಸ್ ಆಸೆಯಲ್ಲಿ ನಿವೃತ್ತರು ಕೂಡ ತಮ್ಮ ಉಳಿತಾಯದ ಹಣವನ್ನು ಹೂಡಿಕೆ ಮಾಡಿ ಕಳೆದುಕೊಂಡಿದ್ದಾರೆ.

“ಜನರ ಅತಿ ಆಸೆ ಇಂತಹ ವಂಚನೆಗಳಿಗೆ ಮುಖ್ಯ ಕಾರಣ. ಆ್ಯಂಡ್ರಾಯ್ಡ ಪ್ಲೇ ಸ್ಟೋರ್‌ನಲ್ಲಿಯೇ ಇಂತಹ ವಂಚನೆಗಳು ಹೆಚ್ಚು ನಡೆಯುತ್ತಿವೆ. ಆ್ಯಪ್‌ ಗಳ ಹಿನ್ನೆಲೆ ಪರಿಶೀಲಿಸದೆ ಬಳಕೆ ಮಾಡುವುದರಿಂದ ತೊಂದರೆಯಾಗುತ್ತಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಎನ್‌ಬಿಎಫ್ಸಿ ಅನುಮೋದಿತ ಅಥವ ಅಧಿಕೃತವಾದ ಆ್ಯಪ್‌ಗ್ಳನ್ನು ಮಾತ್ರ ಬಳಕೆ ಮಾಡಬೇಕು ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞ ಡಾ| ಅನಂತ ಪ್ರಭು ಗುರುಪುರ.

ದ.ಕ: ಶೇ.125 ಹೆಚ್ಚಳ!

Advertisement

ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 2022ರಲ್ಲಿ 68 ಸೈಬರ್‌ ಪ್ರಕರಣಗಳು ದಾಖಲಾಗಿದ್ದರೆ 2023ರಲ್ಲಿ 240 (ಶೇ. 252 ಹೆಚ್ಚಳ) ಪ್ರಕರಣಗಳು ದಾಖಲಾಗಿವೆ. 2021ರಲ್ಲಿ 107 ಪ್ರಕರಣಗಳು ದಾಖಲಾಗಿದ್ದವು. ಉದ್ಯೋಗ ವಂಚನೆ, ಟೆಲಿಗ್ರಾಂ ಆ್ಯಪ್‌ ಮೂಲಕ ಹಣಕಾಸು ವಂಚನೆ, ಪಾರ್ಟ್‌ ಟೈಂ ಉದ್ಯೋಗ, ಲೋನ್‌ ಆ್ಯಪ್‌ಗ್ಳಲ್ಲಿ ವಂಚನೆ ಮೊದಲಾದವುಗಳು ಇದರಲ್ಲಿ ಸೇರಿವೆ. ದ.ಕ, ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 2021ರಲ್ಲಿ 26 ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ 16 ಇದ್ದ ಪ್ರಕರಣ, 2023ರಲ್ಲಿ 36 ಕ್ಕೆ (ಶೇ. 125ರಷ್ಟು ಹೆಚ್ಚಳ) ಏರಿಕೆಯಾಗಿದೆ.

2 ತಿಂಗಳಲ್ಲಿ 4.42 ಕೋ.ರೂ. ವಂಚನೆ

ಉಡುಪಿ ಜಿಲ್ಲೆಯಲ್ಲಿ 2023ರಲ್ಲಿ 129 ಪ್ರಕರಣಗಳಲ್ಲಿ ಜನರು 4.44 ಕೋ.ರೂ. ಕಳೆದು ಕೊಂಡಿದ್ದಾರೆ. ಈ ವರ್ಷ ಈಗಾಗಲೇ 4.42 ಕೋ. ರೂ. ಕಳೆದು ಕೊಂಡಿದ್ದಾರೆ. ಸೈಬರ್‌ ವಂಚನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಾಗಬೇಕಿದೆ ಎನ್ನುತ್ತಾರೆ ಉಡುಪಿ ಎಸ್‌ಪಿ ಡಾ| ಅರುಣ್‌ ಕುಮಾರ್‌.

ವಂಚಕರ ಆಮಿಷಗಳಿಗೆ ಒಳಗಾಗಿ ಅನೇಕ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. 5 ಸಾವಿರ ರೂ. ವರೆಗೆ ಹಣ ಕಳೆದುಕೊಂಡವರು ದೂರು ನೀಡುತ್ತಿಲ್ಲ. ಕೆಲವು ಪ್ರಕರಣಗಳನ್ನು ಭೇದಿಸಲಾಗಿದೆ. ಹಣ ಕಳೆದುಕೊಂಡಿರುವುದು ಗೊತ್ತಾದ ಕೂಡಲೇ National Cyber Crime Reporting Portal ನಲ್ಲಿ ದೂರು ದಾಖಲಿಸಬಹುದು. ಹತ್ತಿರದ ಪೊಲೀಸ್‌ ಠಾಣೆಗೆ ದೂರು ನೀಡಬಹುದು ಅಥವಾ 1930 ಸಹಾಯವಾಣಿಗೆ ಕರೆ ಮಾಡಬಹುದು. ಆನ್‌ಲೈನ್‌ ವಂಚನೆಯ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ವಂಚನೆ ತುಂಬಾ ಹೆಚ್ಚಾಗಬಹುದು. -ಸಿ.ಬಿ. ರಿಷ್ಯಂತ್‌, ದ.ಕ. ಎಸ್‌ಪಿ

 

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next