Advertisement

ಕರ್ನಾಟಕ ಸೇರುವೆವು…; ಗಡಿನಾಡ ಕನ್ನಡಿಗರ ಒಕ್ಕೊರಲ ಧ್ವನಿ

01:26 AM Nov 27, 2022 | Team Udayavani |

ವಿಜಯಪುರ: ಒಂದು ವಾರದೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ನಮ್ಮ ಮಾತೃ ಭೂಮಿ ಕರ್ನಾಟಕಕ್ಕೆ ಸೇರಲು ಅನುಮತಿ ನೀಡಿ ಎಂದು ಮರಾಠಿ ನೆಲದಲ್ಲಿರುವ ಗಡಿನಾಡ ಕನ್ನಡಿಗರು ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Advertisement

ಜತ್‌ ತಾಲೂಕಿನ ಉಮದಿ ಪಟ್ಟಣದ ಮಲಕಾರ ಸಿದ್ಧ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಸಭೆ ಸೇರಿದ್ದ ಗಡಿನಾಡ ಕನ್ನಡಿಗರು, ಮಹಾರಾಷ್ಟ್ರ ಸರಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. “ನೀರು ಕೊಡಿ, ಇಲ್ಲವೇ ನಮ್ಮನ್ನು ಕರ್ನಾಟಕ ಸೇರಲು ಬಿಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಮಹಾಜನ ಆಯೋಗದ ವರದಿ ಪ್ರಕಾರ ಜತ್‌, ಮಹಾರಾಷ್ಟ್ರದಲ್ಲಿರುವ ಅಕ್ಕಲಕೋಟ, ಲಾತೂರ, ಸೋಲಾಪುರ, ಕೊಲ್ಲಾಪುರ ಸೇರಿದಂತೆ ಕನ್ನಡಿಗರೇ ವಾಸ ಇರುವ ಪ್ರದೇಶ ಕರ್ನಾಟಕಕ್ಕೆ ಸೇರುವುದು ಖಚಿತ. ಹೀಗಾಗಿ ಈ ಭಾಗದಲ್ಲಿ ಅಭಿವೃದ್ಧಿ ಮಾಡಿ ದರೂ ವ್ಯರ್ಥ ಎಂದರಿತ ಮಹಾರಾಷ್ಟ್ರ ಸರಕಾರ ತನ್ನ ನೆಲದಲ್ಲಿರುವ ಕನ್ನಡದ ಗ್ರಾಮಗಳ ಅಭಿವೃದ್ಧಿ ಮಾಡು ತ್ತಿಲ್ಲ ಎಂಬುದು ಗಡಿನಾಡ ಕನ್ನಡಿಗರ ಆರೋಪ.

ಸಾಂಗ್ಲಿ ಜಿಲ್ಲೆಯ ಜತ್‌ ತಾಲೂಕಿನ 42 ಹಳ್ಳಿಗಳಿಗೆ ನೀರಾವರಿ ಕಲ್ಪಿಸುವುದಕ್ಕಾಗಿ ಮಹಿಷಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಯುತ್ತಲೇ ಇದೆ. ಇದಕ್ಕಾಗಿ ಮಹಿಷಾಳ ಪಾಣಿ ಸಂಘರ್ಷ ಪರಿಷತ್‌ ಹೆಸರಿನಲ್ಲಿ ಸಂಘಟನೆ ಸ್ಥಾಪಿಸಿ ಹೋರಾಟ ನಡೆಸುತ್ತಲೇ ಇದ್ದಾರೆ. ಅಲ್ಲದೆ ಗಡಿ ಭಾಗದಲ್ಲಿರುವ ಕನ್ನಡದ ಹಳ್ಳಿಗಳಿಗೆ ಕುಡಿಯುವ ನೀರು, ಆರೋಗ್ಯ, ಕನ್ನಡ ಶಾಲೆಗಳ ಬಲವರ್ಧನೆಗೆ ಅಗತ್ಯ ಅನುದಾನ, ರಸ್ತೆ, ಸಾರಿಗೆ, ವಿದ್ಯುತ್‌ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ಹೋರಾಟಗಳು ನಡೆಯುತ್ತಲೇ ಇವೆ. ಆದರೂ 4 ದಶಕಗಳಲ್ಲಿ ಗಡಿನಾಡ ಕನ್ನಡಿಗರ ಭಾವನೆಗೆ ಮಹಾರಾಷ್ಟ್ರ ಸರಕಾರ ಸ್ಪಂದಿಸಿಲ್ಲ. ನೀಡಿದ ಭರವಸೆಗಳು ಈಡೇರಿಲ್ಲ.
ಹೀಗಾಗಿ ದಶಕದ ಹಿಂದೆ 42 ಗ್ರಾಮ ಪಂಚಾಯತ್‌ಗಳು ಅಂಗೀಕರಿಸಿದ ನಿರ್ಣಯದಂತೆ ಕರ್ನಾಟಕ ಸೇರಲು ಅನುಮತಿ ನೀಡಿ ಎಂದು ಮಹಾರಾಷ್ಟ್ರ ಸರಕಾರವನ್ನು ಆಗ್ರಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಈಗ ಮಹಾರಾಷ್ಟ್ರದ ರಾಜಕಾರಣಿಗಳು ನೀಡಿರುವ ಕನ್ನಡ ವಿರೋಧಿ ಹೇಳಿಕೆಗಳು, ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಗಡಿನಾಡ ಕನ್ನಡಿಗರ ಕುರಿತು ಆಡಿರುವ ಆತ್ಮವಿಶ್ವಾಸದ ಮಾತುಗಳು ಮಹಾರಾಷ್ಟ್ರದ ಕನ್ನಡ ಹಳ್ಳಿಗಳಲ್ಲಿ ಸಂಚಲನ ಮೂಡಿಸಿದೆ.

Advertisement

ಚಳಿವಳಿ ರೂಪಿಸಲು ಸಿದ್ಧತೆ
ಮರಾಠಿ ನೆಲದಲ್ಲಿರುವ ಕನ್ನಡದ ಗ್ರಾಮಗಳ ಕನ್ನಡಿಗರಲ್ಲಿ ದಿನೇದಿನೆ ಹೋರಾಟದ ಕಿಚ್ಚು ಹೆಚ್ಚುತ್ತಿದೆ. ಉಮದಿ ನೀರಾವರಿ ಹೋರಾಟ ಸಮಿತಿ ಸಭೆಯ ಬೆನ್ನಲ್ಲೇ ತಿಕ್ಕುಂಡಿ ಗ್ರಾಮದಲ್ಲಿ ಬೈಕ್‌ ರ್ಯಾಲಿ ನಡೆಸಿರುವ ಕನ್ನಡಿ ಗರು, “ಜೈ ಕರ್ನಾಟಕ, ಜೈ ಕನ್ನಡಿಗ’ ಎಂದು ಘೋಷಣೆ ಕೂಗಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರ ನಾಯಕರ ಸಿನಿಕ ಮಾತುಗಳಿಗೆ ತಿರುಗೇಟು ನೀಡಿರುವ ಗಡಿ ನಾಡ ಕನ್ನಡಿಗರು “ಕರ್ನಾಟಕ ಸೇರಲು ಅವಕಾಶ ನೀಡಿ’ ಎಂದು ಆಗ್ರಹಿಸುವ ಚಳವಳಿ ರೂಪಿಸಲು ನಿರ್ಧರಿಸಿದ್ದಾರೆ.

ಕರ್ನಾಟಕ ಸಿಎಂ ಬೊಮ್ಮಾಯಿ ಗಡಿನಾಡ ಕನ್ನಡಿಗರ ಹಿತರಕ್ಷಣೆಗೆ ಧ್ವನಿ ಎತ್ತಿರುವುದು ಆತ್ಮವಿಶ್ವಾಸ ಮೂಡಿಸಿದೆ. ಮಹಿಷಾಳ ನೀರಾವರಿ ಯೋಜನೆ ಜಾರಿ ಆಗದಿದ್ದರೆ ಕರ್ನಾಟಕಕ್ಕೆ ಹೋಗಲು ಬಿಡಿ ಎಂಬುದು ಮಹಾರಾಷ್ಟ್ರ ಸರಕಾರಕ್ಕೆ ನಮ್ಮ ಎಚ್ಚರಿಕೆ.
-ಸುನಿಲ ಪೋತದಾರ,
ತಾಲೂಕು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ, ಉಮದಿ

ದಶಕದ ಹಿಂದೆಯೇ ಜತ್‌ ತಾಲೂಕಿನ 42 ಗ್ರಾ.ಪಂ.ಗಳು ಕರ್ನಾಟಕ ಸೇರಲು ನಿರ್ಣಯ ಅಂಗೀಕರಿಸಿವೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಾರಾಷ್ಟ್ರ ನೆಲದಲ್ಲಿರುವ ಕನ್ನಡದ ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ತುರ್ತಾಗಿ ಕಾನೂನು ಕ್ರಮ ಕೈಗೊಳ್ಳಬೇಕು.
-ಸಂಜಯ ತೇಲಿ,
ಕಾರ್ಯದರ್ಶಿ, ಮಹಿಷಾಳ ಏತ ನೀರಾವರಿ ಹೋರಾಟ ಸಮಿತಿ, ಉಮದಿ

ಅಭಿವೃದ್ಧಿಯ ವಿಷಯದಲ್ಲಿ ಮಲತಾಯಿ ಧೋರಣೆ ತೋರಿದ್ದರಿಂದಲೇ ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಧರಣಿಗಳಂಥ ಹೋರಾಟದ ಮೂಲಕ ಗಮನ ಸೆಳೆದರೂ ನಮ್ಮ ಭಾವನೆಗೆ ಸ್ಪಂದಿಸಿಲ್ಲ. ಹೀಗಾಗಿ ನಾವು ಕರ್ನಾಟಕ ಸೇರಲು ಬಿಡಿ ಎಂದು ಪಟ್ಟು ಹಿಡಿದಿದ್ದೇವೆ.
-ಗೈಬುಲಾಲ್‌ ಶೇಖ್‌,
ತಾಲೂಕು ನೀರಾವರಿ ಹೋರಾಟ ಸಮಿತಿ, ಉಮದಿ

ಗಡಿ ವಿವಾದ ಸಂಬಂಧ ಯಾವುದೇ ಕಾರಣಕ್ಕೂ ಯಾರೂ ಕಾನೂನು ಕೈಗೆತ್ತಿಕೊಳ್ಳಕೂಡದು. ಎರಡೂ ರಾಜ್ಯಗಳ ಸಾಮರಸ್ಯ ಹದಗೆಡುವುದು ಬೇಡ. ಕರ್ನಾಟಕ ಬಸ್‌ಗಳಿಗೆ, ಜನರಿಗೆ ಹಾಗೂ ಆಸ್ತಿಗೆ ಸಂಪೂರ್ಣ
ರಕ್ಷಣೆ ನೀಡಬೇಕು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next