ಮುದ್ದೇಬಿಹಾಳ: ಮಾ.9ರಿಂದ ಆರಂಭಗೊಳ್ಳಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಇದೇ ಅವಧಿಯಲ್ಲಿ ನಡೆಯಲಿರುವ 5 ಮತ್ತು 8ನೇ ತರಗತಿಗಳ ಪಬ್ಲಿಕ್ ಪರೀಕ್ಷೆ (ಮೌಲ್ಯಾಂಕನ ಎಸ್ಎ-2) ಕಾರಣದಿಂದಾಗಿ ಗೊಂದಲದ ಗೂಡಾಗುವ ಲಕ್ಷಣಗಳು ಗೋಚರಿಸಿದ್ದು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರ ಆತಂಕಕ್ಕೆ ಕಾರಣವಾಗಿದೆ.
9ರಿಂದ 24ರವರೆಗೆ ಬೆಳಗ್ಗೆ 10:15ರಿಂದ ಮಧ್ಯಾಹ್ನ 1:30 ಪಿಯುಸಿ, ಮಾ.13ರಿಂದ 18ರವರೆಗೆ ಮಧ್ಯಾಹ್ನ 2:30ರಿಂದ ಸಂಜೆ 4:30ರವರೆಗೆ 5 ಮತ್ತು 8 ನೇ ತರಗತಿ ಪಬ್ಲಿಕ್ ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಪಿಯುಸಿ ಟೈಂ ಟೇಬಲ್ ಮೊದಲೇ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ ನಿಗದಿಯಾಗಿದ್ದರಿಂದ ಶಿಕ್ಷಕರು ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಿಯುಸಿ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರನ್ನಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಗೊಂದಲ ಉಂಟಾಗುವ ಆತಂಕ ಸೃಷ್ಟಿಸಿದೆ. ಏಕಕಾಲಕ್ಕೆ ಪಿಯುಸಿ ಹಾಗೂ ಪಬ್ಲಿಕ್ ಪರೀಕ್ಷೆಗಳು ಒಟ್ಟಿಗೆ ಬಂದ ದಿನದಂದು ಬೆಳಗ್ಗೆ ಪಿಯುಸಿಯಲ್ಲಿ ಕೊಠಡಿ ಮೇಲ್ವಿಚಾರಕರಾಗುವ ಶಿಕ್ಷಕರು, ಮಧ್ಯಾಹ್ನ ಪಬ್ಲಿಕ್ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕತೊಡಗಿರುವುದು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಮೂಡಿಸಿದೆ.
ಪಿಯುಸಿ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡಲಾದ ಬಹಳಷ್ಟು ಶಿಕ್ಷಕರು ಪೂರ್ವಭಾವಿ ಸಭೆಗಳಿಗೆ ಗೈರಾಗುತ್ತಿರುವುದು ಆಯಾ ಪಿಯುಸಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ತಲೆನೋವಾಗಿ ಪರಿಣಮಿಸತೊಡಗಿದೆ. ಪಿಯುಸಿ ಹಾಗೂ ಪಬ್ಲಿಕ್ ಪರೀಕ್ಷೆ ಎರಡನ್ನೂ ನಡೆಸಲೇಬೇಕಾದ ಗೊಂದಲದಲ್ಲಿರುವ ಶಿಕ್ಷಕರು ತಮ್ಮ ಚಿತ್ತವನ್ನು ಶಿಕ್ಷಣ ಇಲಾಖೆಯತ್ತ ನೆಟ್ಟಿದ್ದಾರೆ. ಈ ವಿಷಯದಲ್ಲಿ ತಾಲೂಕು, ಜಿಲ್ಲಾ ಹಂತದ ಅಧಿ ಕಾರಿಗಳೂ ಅಸಹಾಯಕತೆ ತೋಡಿಕೊಳ್ಳುತ್ತಿರುವುದು ಪರಿಸ್ಥಿತಿಯ ಗಂಭೀರತೆ ತೋರಿಸಿದೆ.
Related Articles
ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಪಿಯುಸಿ ಪರೀಕ್ಷೆ ಹೊರತುಪಡಿಸಿ ಪಬ್ಲಿಕ್ ಪರೀಕ್ಷೆಗಳ ವೇಳಾಪಟ್ಟಿ ಬದಲಾಯಿಸಬೇಕು. ಪಿಯುಸಿ ಪರೀಕ್ಷೆ ಇಲ್ಲದ ದಿನಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಅವಕಾಶ ಕೊಡಬೇಕು. ಪಿಯು ಪರೀಕ್ಷೆ ಮುಗಿದ ಮೇಲೆ ಮಧ್ಯಾಹ್ನದ ನಂತರ ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದರೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರಿಗೆ ಪಿಯುಸಿ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಬಾರದು ಎನ್ನುವ ಆಗ್ರಹ ಕೇಳಿ ಬರತೊಡಗಿದೆ.
ಪಿಯುಸಿ ಪರೀಕ್ಷಾ ಕೇಂದ್ರಗಳು ತಾಲೂಕು ಕೇಂದ್ರ, ಆಯ್ದ ಹೋಬಳಿ ಕೇಂದ್ರಗಳಲ್ಲಿ ಮಾತ್ರ ಇವೆ. ಪಬ್ಲಿಕ್ ಪರೀಕ್ಷೆಗಳು ಆಯಾ ಶಾಲೆಗಳಲ್ಲೇ ನಡೆಯಲಿವೆ. ಗ್ರಾಮೀಣ ಭಾಗದ ಶಿಕ್ಷಕ ಕೊಠಡಿ ಮೇಲ್ವಿಚಾರಕನಾಗಿ ಪಟ್ಟಣ ಪ್ರದೇಶದ ಪಿಯುಸಿ ಕೇಂದ್ರಕ್ಕೆ ಹೋಗಿ ಮರಳಿ ಮಧ್ಯಾಹ್ನ ತನ್ನ ಶಾಲೆಗೆ ಬಂದು ಪಬ್ಲಿಕ್ ಪರೀಕ್ಷೆಯಲ್ಲಿ ಭಾಗಿಯಾಗುವುದು ಸಾಧ್ಯವೇ ಎನ್ನುವ ಪ್ರಶ್ನೆ ಮೂಡತೊಡಗಿದೆ. ಶಿಕ್ಷಣ ಇಲಾಖೆಯು ಎರಡೂ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಯಾವ ದಾರಿ ಕಂಡು ಹಿಡಿಯುತ್ತದೆ ಅನ್ನೋದನ್ನು ಶಿಕ್ಷಕ ವಲಯ ಕಾತರದಿಂದ ಎದುರು ನೋಡುತ್ತಿದೆ.
ನಮಗೆ ಇಂತಹ ಯಾವುದೇ ದೂರುಗಳು ಬಂದಿಲ್ಲ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ.
– ರಾಮಚಂದ್ರನ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧ್ಯಕ್ಷ
ಪಿಯುಸಿ ಪರೀಕ್ಷೆ ಮುಖ್ಯವಾದದ್ದು. ಪಬ್ಲಿಕ್ ಪರೀಕ್ಷೆಯನ್ನು ಹೇಗಾದರೂ ನಿಭಾಯಿಸಿ. ಈಗಾಗಲೇ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿರುವ ಶಿಕ್ಷಕರು ಪೂರ್ವಭಾವಿ ಸಭೆಗಳಿಗೆ ಮತ್ತು ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಂಥವರ ಪಟ್ಟಿಯನ್ನು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಕಳುಹಿಸಿ ಕೊಡಲಾಗುತ್ತದೆ.
-ಎಸ್.ಎನ್.ಬಗಲಿ, ಉಪ ನಿರ್ದೇಶಕರು, ಪಪೂ ಶಿಕ್ಷಣ ಇಲಾಖೆ, ವಿಜಯಪುರ
ಪಿಯುಸಿ ಹಾಗೂ ಪಬ್ಲಿಕ್ ಪರೀಕ್ಷೆಗಳು ಒಟ್ಟಿಗೆ ನಡೆಸುವಲ್ಲಿ ಶಿಕ್ಷಕರ ಕೊರತೆ ಸಂಭವ ಇದೆ. ಪಿಯುಸಿಗೆ ಕೊಠಡಿ ಮೇಲ್ವಿಚಾರಕರನ್ನಾಗಿ ಶಿಕ್ಷಕರ ನೇಮಕವನ್ನು ಕೈ ಬಿಡಬೇಕು. ಇಲ್ಲವೇ ವೇಳಾಪಟ್ಟಿ ಬದಲಾಯಿಸಬೇಕು. ಇದೂ ಆಗದಿದ್ದರೆ ಪಿಯುಸಿಯಲ್ಲಿರುವ ಉಪನ್ಯಾಸಕರನ್ನು ಪಬ್ಲಿಕ್ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕರನ್ನಾಗಿ ಕೊಡಬೇಕು.
-ಎಸ್.ಜೆ.ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ, ಮುದ್ದೇಬಿಹಾಳ
-ಡಿ.ಬಿ. ವಡವಡಗಿ