ನಟಿ ಸಂಯುಕ್ತಾ ಹೊರನಾಡು “ಒಂದ್ ಕಥೆ ಹೇಳ್ಲಾ’ ಎಂಬ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಇದೇ “ಬಾಲ್ಕನಿ’ಯಲ್ಲಿ ಬಂದಿತ್ತು. ಅದಕ್ಕಿಂತ ಮುಂಚೆಯೇ ಇನ್ನೊಂದು ಚಿತ್ರತಂಡವೊಂದು “ಒಂದ್ ಕಥೆ ಹೇಳ್ಲಾ’ ಶೀರ್ಷಿಕೆಯಡಿ ಸಿನಿಮಾ ಆರಂಭಿಸಿ, ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಮುಗಿಸಿದೆ.
ಈ ಸುದ್ದಿಯೂ ಹೊರಬೀಳುತ್ತಿದ್ದಂತೆಯೇ, ಅತ್ತ ಸಂಯುಕ್ತಾ ಹೊರನಾಡು ಅಭಿನಯದಲ್ಲಿ “ಒಂದ್ ಕಥೆ ಹೇಳ್ಲಾ’ ಚಿತ್ರ ಘೋಷಣೆ ಮಾಡಿದ್ದ ನಿರ್ದೇಶಕ ಕೃಷ್ಣ ಸಾಯಿ ಅವರು, ಬುಧವಾರ, ತಮ್ಮ ಚಿತ್ರದ ಶೀರ್ಷಿಕೆಯನ್ನು ಬದಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಕೃಷ್ಣ ಸಾಯಿ, “ನಮಗೆ “ಒಂದ್ ಕಥೆ ಹೇಳ್ಲಾ’ ಶೀರ್ಷಿಕೆ ಬಗ್ಗೆ ಗೊತ್ತಿರಲಿಲ್ಲ. ಆದರೆ, ಕಥೆಗೆ ಪೂರಕವಾಗಿದೆ ಎಂಬ ಕಾರಣಕ್ಕೆ, ನಾವು ಅದೇ ಶೀರ್ಷಿಕೆಯನ್ನು ಇಡಬೇಕು ಅಂದುಕೊಂಡಿದ್ದೆವು. ಆದರೆ, ವಾಣಜ್ಯ ಮಂಡಳಿಯಲ್ಲಿ ನೋಂದಣಿಯಾಗಿರಲಿಲ್ಲ. ಅಷ್ಟೊತ್ತಿಗೆ ಸುದ್ದಿಯಾಗಿದೆ.
ಹಾಗಾಗಿ, ನಾವು ಆ ಶೀರ್ಷಿಕೆ ಕೈ ಬಿಟ್ಟು, ಬೇರೆ ಶೀರ್ಷಿಕೆಯಡಿ ಸಿನಿಮಾ ಮಾಡುತ್ತೇವೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ನಿರ್ದೇಶಕ ಗಿರೀಶ್ ಎಂಬುವವರು, ಕಳೆದ ವರ್ಷ ಅಕ್ಟೋಬರ್ 28 ರಂದು ವಾಣಿಜ್ಯ ಮಂಡಳಿಯಲ್ಲಿ “ಒಂದ್ ಕಥೆ ಹೇಳ್ಲಾ’ ಟೈಟಲ್ ನೋಂದಣಿ ಮಾಡಿಸಿದ್ದರು. ಚಿತ್ರೀಕರಣ ಶುರುಮಾಡಿ, ನವೆಂಬರ್ ವೇಳೆಗೆ ಬಹುತೇಕ ಚಿತ್ರೀಕರಣ ಕೂಡಾ ಮುಗಿಸಿದ್ದರು.
ಆದರೆ, ಯಾವಾಗ ಇನ್ನೊಂದು ಚಿತ್ರತಂಡ ಅದೇ ಶೀರ್ಷಿಕೆಯಡಿ ಸಿನಿಮಾ ಶುರು ಮಾಡುತ್ತಿದೆ ಎಂಬ ವಿಷಯ ಹೊರಬಿತ್ತೋ, ಆಗ ನಿರ್ದೇಶಕ ಗಿರೀಶ್ ಆ ಶೀರ್ಷಿಕೆ ನಮ್ಮ ಬ್ಯಾನರ್ನಲ್ಲೇ ಇದೆ. ಯಾವ ಕಾರಣಕ್ಕೂ ಆ ಟೈಟಲ್ ಬಿಟ್ಟುಕೊಡಲು ಸಿದ್ಧವಿಲ್ಲ’ ಎಂದಿದ್ದರು. ಈಗ ಕೃಷ್ಣ ಸಾಯಿ ತಮ್ಮ ಚಿತ್ರಕ್ಕೆ “ಒಂದ್ ಕಥೆ ಹೇಳ್ಲಾ’ ಬದಲು ಇನ್ನೊಂದು ಹೆಸರು ಇಡುವುದಾಗಿ ಹೇಳುವ ಮೂಲಕ ಟೈಟಲ್ ವಿವಾದಕ್ಕೆ ತೆರೆ ಎಳೆದಿದ್ದಾರೆ.