ಚೆನ್ನೈ: ಶಾಲೆಯಲ್ಲಿ ಮಗಳಿಗೆ ಹೊಡೆದರು ಎಂದು ಆರೋಪಿಸಿ ವಿದ್ಯಾರ್ಥಿನಿಯೊಬ್ಬಳ ಪೋಷಕರು ಶಿಕ್ಷಕನನ್ನೇ ಅಟ್ಟಾಡಿಸಿಕೊಂಡು ಥಳಿಸಿದ ಘಟನೆ ತಮಿಳುನಾಡಿನ ಟುಟಿಕೋರಿನ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪಾಠ ಸರಿಯಾಗಿ ಕೇಳುತ್ತಿಲ್ಲ ಎಂದು 2ನೇ ತರಗತಿಯ 7 ವರ್ಷದ ವಿದ್ಯಾರ್ಥಿನಿಯನ್ನು ಜಾಗ ಬದಲಾಯಿಸಿ ಬೇರೆ ಕಡೆ ಕುಳಿತ್ಕೋ ಎಂದು ಶಿಕ್ಷಕ ಆರ್. ಭರತ್ ಹೇಳಿದ್ದಾರೆ. ಜಾಗ ಬದಲಾಯಿಸುವಾಗ ವಿದ್ಯಾರ್ಥಿನಿ ಬೆಂಚ್ ತಾಗಿ ಕೆಳಕ್ಕೆ ಬಿದ್ದಿದ್ದಾಳೆ.
ಈ ವಿಚಾರವನ್ನೇ ಮನೆಯಲ್ಲಿ ಹೋಗಿ ವಿದ್ಯಾರ್ಥಿನಿ ತನ್ನ ಅಜ್ಜ,ತಂದೆ,ತಾಯಿಯ ಬಳಿ ಶಿಕ್ಷಕರು ಹೊಡೆದಿದ್ದಾರೆ ಎಂದು ಅತ್ತಿದ್ದಾಳೆ. ಅಜ್ಜ, ತಂದೆ, ತಾಯಿ ಇದನ್ನೇ ನಿಜವೆಂದುಕೊಂಡು ಶಾಲೆಗೆ ಹೋಗಿ ಭರತ್ ರೊಂದಿಗೆ ವಾಗ್ವಾದ ನಡೆಸಿದ್ದಾರೆ. ಕೆಲ ಸಮಯದ ಬಳಿಕ ಶಿಕ್ಷಕನನ್ನು ಹೊರ ಎಳೆದುಕೊಂಡು ಅವರ ಮೇಲೆ ದಾಳಿ ನಡೆಸಿ, ಅಟ್ಟಾಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮಕ್ಕಳನ್ನು ಹೊಡೆಯುವುದು ಕಾನೂನು ಬಾಹಿರ. ನಿನಗೆ ಆ ಹಕ್ಕು ಕೊಟ್ಟವರು ಯಾರು, ನಿನ್ನನು ಚಪ್ಪಲಿಯಿಂದ ಹೊಡೆಯುತ್ತೇನೆ ಎಂದು ವಿದ್ಯಾರ್ಥಿನಿಯ ತಾಯಿ ಗದರಿಸಿದ್ದಾರೆ. ಇದನ್ನು ನೋಡುತ್ತಿದ್ದ ವಿದ್ಯಾರ್ಥಿನಿ ಕೂಡ ಶಿಕ್ಷಕನಿಗೆ ಕಲ್ಲು ಎಸೆಯಲು ಯತ್ನಿಸಿದ್ದಾಳೆ.
ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿ ಶಿವಲಿಂಗಂ,ಸೆಲ್ವಿಯ ಜೊತೆ ಅಜ್ಜ ಮುನುಸಾಮಿಯನ್ನು ಬಂಧಿಸಿದ್ದಾರೆ.