Advertisement

ಹಳೇ ಮೈಸೂರು: ಜೆಡಿಎಸ್‌ ನಿರೀಕ್ಷೆ ಫ‌ಲಿಸುವುದೇ?

11:30 PM Mar 27, 2023 | Team Udayavani |

ಮೈಸೂರು: ಅದು ಜಾತ್ಯತೀತ ಜನತಾದಳದ  ಲೆಕ್ಕಾಚಾರದ ತಂತ್ರ. ತನ್ನ ನೆಲದಲ್ಲಿ ಹೆಚ್ಚು ಸೀಟುಗಳನ್ನು ದಕ್ಕಿಸಿಕೊಂಡರೆ ಮಾತ್ರವೇ ಅಧಿಕಾರದ ರಾಜಕಾರಣದಲ್ಲಿ ದಾಳ ಉರುಳಿಸಬಹುದು ಎಂಬುದನ್ನು ಅದು ಬಲ್ಲದು. ಹೀಗಾಗಿಯೇ ಜೆಡಿಎಸ್‌ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನವನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಕಸರತ್ತು ನಡೆಸಿದೆ.

Advertisement

ಮೈಸೂರಿನಲ್ಲಿ ರವಿವಾರ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಬಾರಿ ಹಳೇ ಮೈಸೂರು ಪ್ರಾಂತದಲ್ಲಿ ಹೆಚ್ಚು ಸ್ಥಾನ ಗೆಲ್ಲಲು 1994ರಲ್ಲಿ  ಮೂಲ ಜನತಾದಳ ಪಡೆದ ಫ‌ಲಿತಾಂಶದ ಮೊರೆ ಹೋಗಿದ್ದಾರೆ. ಸುಮಾರು 30 ವರ್ಷಗಳ ಬಂದಿನ ಆ ಚುನಾವಣೆ ಫ‌ಲಿತಾಂಶ ತಮ್ಮ ಪಕ್ಷಕ್ಕೆ ಈ ಚುನಾವಣೆಯಲ್ಲಿ ಬೇಕು ಎಂದು ಜನತೆಗೆ ಮನವಿ ಮಾಡಿದ್ದಾರೆ. ಹೀಗೆ ಮನವಿ ಮಾಡುವಾಗ  ರಾಜ್ಯ ರಾಜಕಾರಣದಲ್ಲಿ 30 ವರ್ಷಗಳಲ್ಲಿ ಆಗಿರುವ ಬದಲಾದ ಪರಿಸ್ಥಿತಿ ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದೇ ಇಲ್ಲ. ಆದರೆ ಅವತ್ತಿನ ಪರಿಸ್ಥಿತಿಯಲ್ಲಿ ತಮ್ಮ ತಂದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಾಯಕತ್ವದಲ್ಲಿ ಹಳೇ ಮೈಸೂರು ಭಾಗದಲ್ಲಿ ಜನರು ಅದರಲ್ಲೂ ಮುಖ್ಯವಾಗಿ ಒಕ್ಕಲಿಗ ಸಮಾಜದ ಮತದಾರರು ನೀಡಿದ ಬೆಂಬಲವನ್ನು ಕುಮಾರಸ್ವಾಮಿ ಈಗ ತಮ್ಮ ಪಕ್ಷಕ್ಕೆ ನಿರೀಕ್ಷಿಸಿದ್ದಾರೆ. ಹೀಗಾಗಿ ಜನತಾದಳ ಈ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದನ್ನು ಪ್ರಸ್ತಾವಿಸಿದ್ದಾರೆ.

ಆದರೆ ಜನತಾದಳಕ್ಕೆ ಅವತ್ತಿದ್ದ ಪರಿಸ್ಥಿತಿ ಇವತ್ತು ಜೆಡಿಎಸ್‌ಗೆ ಇಲ್ಲ. ಆಗ ಜನತಾದಳದಲ್ಲಿ ರಾಮಕೃಷ್ಣ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಜೆ.ಎಚ್‌.ಪಟೇಲ್‌, ಸಿದ್ದರಾಮಯ್ಯ, ಎಂ.ಪಿ.ಪ್ರಕಾಶ್‌ ಅವರಂತಹ ಘಟಾನುಘಟಿ ನಾಯಕರಿದ್ದರು. ಎಚ್‌.ಡಿ.ದೇವೇಗೌಡ ಅವರು ಮಾಸ್‌ ಲೀಡರ್‌ ಆಗಿ ಹೊರಹೊಮ್ಮಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದರು. ಈಗ ಜೆಡಿಎಸ್‌ಗೆ ಪರಿಸ್ಥಿತಿ ಅಷ್ಟು ಸುಲಭವಾಗಿಲ್ಲ. 1994ರ ಅಸೆಂಬ್ಲಿ ಚುನಾವಣೆ ಪರಿಸ್ಥಿತಿ ಇರಲಿ ಕಳೆದ 2018ರ ಅಸೆಂಬ್ಲಿ ಚುನಾವಣೆಯ ಅನುಕೂಲಕರ ಪರಿಸ್ಥಿತಿ ಜೆಡಿಎಸ್‌ಗೆ ಈಗಿದೆಯೇ ಎಂಬ ಪ್ರಶ್ನೆ ಇದೆ.

ಕಳೆದ ಚುನಾವಣೆಯಲ್ಲಿ ಆಗ ಆಡಳಿತದಲ್ಲಿದ್ದ ಕಾಂಗ್ರೆಸ್‌ ವಿರೋಧಿ ಮನೋಭಾವನೆ ಮತದಾರರಲ್ಲಿತ್ತು. ಅದರಲ್ಲೂ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಬಗ್ಗೆ ಕೆಲವು ಸಮುದಾಯದಲ್ಲಿ ಅಸಮಾಧಾನವಿತ್ತು. ಇದು ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಲಾಭ ತಂದಿತು. ಹಳೇ ಮೈಸೂರಿನಲ್ಲಿ ಜೆಡಿಎಸ್‌ಗೆ ಸೀಟುಗಳನ್ನು ತಂದು ಕೊಟ್ಟಿತು. ಈಗ ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯಲ್ಲಿದೆ. ಈ ಪರಿಸ್ಥಿತಿಯ ಲಾಭವನ್ನು ಜೆಡಿಎಸ್‌ ತನಗೆ ನೆಲೆ ಇರುವ ಹಳೇ ಮೈಸೂರು ಭಾಗದಲ್ಲಿ ಪಡೆದುಕೊಳ್ಳಲು ಕಾಂಗ್ರೆಸ್‌ ಅಡ್ಡಿಯಾಗಿದೆ. ಏಕೆಂದರೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಕೂಡ ಬಲಿಷ್ಠವಾಗಿದೆ. ಇಲ್ಲಿನ ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಪಕ್ಷವನ್ನೇ ಎದುರಿಸಬೇಕಿದೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಅಷ್ಟಾಗಿ ನೆಲೆ ಇಲ್ಲ.

ಹಳೇ ಮೈಸೂರು ಪ್ರಾಂತದಲ್ಲಿ 57 ವಿಧಾನಸಭಾ ಕ್ಷೇತ್ರಗಳಿವೆ. 2018ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್‌ 27 ಸೀಟುಗಳನ್ನು ತನ್ನದಾಗಿಸಿಕೊಂಡಿತ್ತು. ಕಾಂಗ್ರೆಸ್‌ 17, ಬಿಜೆಪಿ 11 ಕ್ಷೇತ್ರಗಳಲ್ಲಿ ಗೆದ್ದಿತ್ತು. ಆಪರೇಶನ್‌ ಕಮಲದ ಅನಂತರ ಬಿಜೆಪಿ ಸ್ಥಾನಗಳು 15ಕ್ಕೆ ಏರಿತು.  ಕಳೆದ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಚಿಕ್ಕಮಗಳೂರು, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಜೆಡಿಎಸ್‌ ಸಾಧನೆ ಶೂನ್ಯ. ತುಮಕೂರಿನಲ್ಲಿ 11ರಲ್ಲಿ 4, ಚಿಕ್ಕಬಳ್ಳಾಪುರ 5ರಲ್ಲಿ 1, ಕೋಲಾರ 6 ರಲ್ಲಿ 1, ಮಂಡ್ಯ 7ಕ್ಕೆ 7, ಹಾಸನ 7ಕ್ಕೆ 6,  ಮೈಸೂರು 11ಕ್ಕೆ 5,  ರಾಮನಗರ 4ಕ್ಕೆ 3 ಸ್ಥಾನಗಳು ಜೆಡಿಎಸ್‌ ಮಡಿಲಿಗೆ ಬಿದ್ದಿದ್ದವು.

Advertisement

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಡಮ್ಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್‌ಗೆ ಪರೋಕ್ಷ ಬೆಂಬಲ ನೀಡಿತ್ತು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಸಾಂಪ್ರದಾಯಕ ಮತದಾರರು ಕಾಂಗ್ರೆಸ್‌ ಸೋಲಿಸಲು ಜೆಡಿಎಸ್‌ ಬೆಂಬಲಿಸಿದ್ದರು. ಇದು ಜೆಡಿಎಸ್‌ಗೆ ವರವಾಗಿತ್ತು. ಈ ಬಾರಿ ಅಂತಹ ಚಿತ್ರಣ ಈವರೆಗೂ ಕಂಡು ಬರುತ್ತಿಲ್ಲ.

-ಕೂಡ್ಲಿ ಗುರುರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next