Advertisement

ಸಿನಿಮಾ ಶೂಟಿಂಗ್‌ಗೆ ಬಳಸುತ್ತಿದ್ದ ಹಳೇ ಅಂಬಾಸಿಡರ್‌ ಕಾರಿನಲ್ಲಿ ಮೃತ ದೇಹ ಪತ್ತೆ

09:38 AM May 14, 2022 | Team Udayavani |

ಬೆಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಹಳೇ ಕಾರೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.

Advertisement

ಮೃತ ವ್ಯಕ್ತಿಯು ಸುಮಾರು 45 ವರ್ಷದವರಾಗಿದ್ದು, ಗುರುತು ಪತ್ತೆಯಾಗಿಲ್ಲ. ಶುಕ್ರವಾರ ಮಧ್ಯಾಹ್ನ ಕಾರಿನ ಬಳಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಕಾರಿನ ಬಾಗಿಲು ತೆರೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದರು.

ಗೋಪಿ ಎಂಬವವರಿಗೆ ಸೇರಿದ ಹಳೇ ಅಂಬಾಸಿಡರ್‌ ಕಾರನ್ನು ಕಳೆದ ಎರಡು ವರ್ಷಗಳಿಂದ ರಾಜಾಜಿನಗರ ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದು, ಕಾರಿಗೆ ವಿಭಿನ್ನ ವಾಗಿ ಪೇಟಿಂಗ್‌ ಮಾಡಲಾಗಿದೆ. ಈ ಕಾರನ್ನು ಈ ಮೊದಲು ಸಿನಿಮಾ ಶೂಟಿಂಗ್‌ಗೆ ಬಳಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಾರಿನ ಮಾಲೀಕ ಗೋಪಿ ಸದ್ಯ ಬೇರೆಡೆ ಮನೆ ಸ್ಥಳಾಂತರಿಸಿದ್ದು, ಕಾರನ್ನು ಜನಸಂದಣಿ ಕಡಿಮೆ ಇರುವ ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದರು. ಹೀಗಾಗಿ ಎರಡು ವರ್ಷ ದಿಂದ ಕಾರು ಅಲ್ಲೇ ಇತ್ತು. ಇದೀಗ ಆ ಕಾರಿನ ಚಾಲಕನ ಆಸನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ತಾಜ್‌ ಕೋಣೆಗಳಲ್ಲಿ ಹಿಂದೂ ವಿಗ್ರಹಗಳಿಲ್ಲ! ಭಾರತೀಯ ಪ್ರಾಚ್ಯವಸ್ತು ಇಲಾಖೆ ಸ್ಪಷ್ಟನೆ

Advertisement

ಮದ್ಯದ ಬಾಟಲಿ ಪತ್ತೆ

ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿದೆ. ವ್ಯಕ್ತಿ ಮದ್ಯ ಸೇವಿಸಿ ಬಳಿಕ ಮೃತಪಟ್ಟಿರುವ ಸಾಧ್ಯತೆಯಿದೆ. 8 ದಿನದ ಹಿಂದೆ ಈ ಅಪರಿಚಿತ ವ್ಯಕ್ತಿ ರಾಜಾಜಿನಗರ ಕೈಗಾರಿಕಾ ಪ್ರದೇಶದ ರಸ್ತೆಗಳಲ್ಲಿ ಓಡಾಡುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೃತನ ಬಳಿ ಅಗ್ರಹಾರ ದಾಸರಹಳ್ಳಿ ವಿಳಾಸದ ಮಂಜುನಾಥ್‌ ಹೆಸರಿನ ಕಲರ್‌ ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ ಸಿಕ್ಕಿದೆ. ಅದರಲ್ಲಿ ವಯಸ್ಸು 60 ವರ್ಷ ಎಂದಿದೆ. ಮೃತ ವ್ಯಕ್ತಿಯ ವಯಸ್ಸು ಸುಮಾರು 45 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಸದ್ಯಕ್ಕೆ ಮೃತ ವ್ಯಕ್ತಿಯ ಗುರುತು ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next