ನೀರು ಹರಿಸಲು ಅನುಸರಿಸುತ್ತಿರುವ ವಾರಾಬಂದಿ ನಿಯಮ ಕೈ ಬಿಡುವಂತೆ ಒತ್ತಾಯಿಸಿ ರೈತರು ಹಮ್ಮಿಕೊಂಡ ಅನಿರ್ದಿಷ್ಟ
ಪ್ರತಿಭಟನೆ ಎರಡನೇ ದಿನದಲ್ಲಿ ಮುಂದುವರಿದಿದೆ. ಮಾಜಿ ಸಚಿವ ರಾಜುಗೌಡ ಕರೆ ಮೇರೆಗೆ ಸುರಪುರ ತಾಲೂಕುಬಿಜೆಪಿ ಮಂಡಲ ಶನಿವಾರದಿಂದಲೇ ನಾರಾಯಣಪುರ ಮುಖ್ಯ ಎಂಜಿನಿಯರ್ ಕಚೇರಿ ಮುಂದೆ ಅನಿರ್ದಿಷ್ಟ ಪ್ರತಿಭಟನೆಹಮ್ಮಿಕೊಂಡಿದ್ದು ರವಿವಾರ ಅಪಾರ ಪ್ರಮಾಣದ ರೈತರು ಪಾಲ್ಗೊಂಡಿದ್ದರು. ಸರಕಾರ ನಿರ್ಧರಿಸಿದ ವಾರಾಬಂದಿ ನೀತಿ ಅವೈಜ್ಞಾನಿಕ ಪದ್ಧತಿಯಾಗಿದೆ. ಈ ನೀತಿಯಿಂದ ಬೆಳೆಗಳು ಬಾಡುತ್ತಿದ್ದು ಒಂದು ವೇಳೆ ವಾರಾಬಂದಿ ಮುಂದುವರಿಸಿದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ ಎಂದು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರೈತರು ಧಿಕ್ಕಾರ ಕೂಗಿದರು. ಈ ವೇಳೆ ಜಿಪಂ ಸದಸ್ಯ ಬಸವರಾಜ ಸ್ಥಾವರಮಠ ಮಾತನಾಡಿ,ಕಳೆದ 30ಕ್ಕೂ ಹೆಚ್ಚು ವರ್ಷದಿಂದ ಕೃಷ್ಣಾ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ಮುಂಗಾರು ಹಂಗಾಮಿಗೆ ಯಾವುದೇ ವಾರಾಬಂದಿ ಪದ್ಧತಿ ಅನುಸರಿಸದೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸುತ್ತಲೆ ಬಂದಿದೆ. ಆದರೆ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿರ್ಧಾರದಿಂದಲೇ ಅಚ್ಚುಕಟ್ಟು ಭಾಗದ ಜಮೀನುಗಳಿಗೆ ಅವೈಜ್ಞಾನಿಕ ವಾರಬಂದಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ಸಾವಿರಾರು ಹೆಕ್ಟೇರ್ ಕೊನೆ ಭಾಗದ ಜಮೀನುಗಳಿಗೆ ಇನ್ನೂ ಕೂಡಾ ನೀರು ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಲುವೆ ನೀರನ್ನೆ ನಂಬಿರುವ ರೈತ ಸಾಲ ಮಾಡಿ ಬಿತ್ತನೆ ಮಾಡಿದ್ದಾನೆ. ಸಮರ್ಪಕವಾಗಿ ನೀರಿಲ್ಲದೆ ಒಂದೊಮ್ಮೆ ಬೆಳೆಗಳು ಹಾಳಾದರೆ ಸರ್ಕಾರವೆ ನೇರ ಹೊಣೆಯಾಗುತ್ತದೆ. ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಿಂದ ಎಡದಂಡೆ ಮುಖ್ಯ ಕಾಲುವೆ ನವೀಕರಣಕ್ಕಾಗಿ ಅನುದಾನ ಒದಗಿಸಲು ಮಾಜಿ ಸಚಿವ ರಾಜುಗೌಡ ಶ್ರಮಿಸಿದ್ದಾರೆ. ಈಗ ನಡೆದಿರುವ ಉಪಕಾಲುವೆಗಳ ನವೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದರು. ಧರಣಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅಮರಣ್ಣ ಹುಡೇದ, ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಮುಖಂಡರಾದ ಎಚ್ .ಸಿ. ಪಾಟೀಲ, ರಾಜು ಹವಾಲ್ದಾರ್ ಮಾತನಾಡಿ, ರೈತ ವಿರೋಧಿ ಅವೈಜ್ಞಾನಿಕ ವಾರಾಬಂ ದಿ ಪದ್ಧತಿ ನಿಲ್ಲಿಸಬೇಕು. ಕಾಲುವೆಗಳಿಗೆ ನಿರಂತರ ನೀರು ಹರಿಸುವವರೆಗೂ ಧರಣಿ ನಿಲ್ಲುವುದಿಲ್ಲವೆಂದು ಹೇಳಿದರು. ಸೂಕ್ತ ಭದ್ರತೆ: ಧರಣಿ ಹಿನ್ನೆಲೆ ಮುದ್ದೇಬಿಹಾಳ ಸರಹದ್ದಿಗೆ ಸಂಬಂಧಿಸಿದ ಜಲಾಶಯ ಗೇಟುಗಳ ಹತ್ತಿರ ಅಹಿತಕರ ಘಟನೆ ನಡೆಯದಂತೆ ಮುದ್ದೇಬಿಹಾಳದ ಸಿಪಿಐ ರವಿ ಕಪ್ಪತ್ತನವರ ನೇತೃತ್ವದಲ್ಲಿ ಪೊಲೀಸರು ಹಗಲಿರುಳು ಸೂಕ್ತ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಾಲುವೆಗೆ ನೀರು: ಸಲಹಾ ಸಮಿತಿ ನಿರ್ಣಯದಂತೆ ಆ. 13ಕ್ಕೆ ಕಾಲುವೆಗೆ ನೀರು ಹರಿಸುವದನ್ನು ಸ್ಥಗಿತಗೊಳಿಸಬೇಕಾಗಿತ್ತು. ಮಾಜಿ ಸಚಿವರ ಹೇಳಿಕೆಯಂತೆ ಬಿಜೆಪಿಯಿಂದ ಶನಿವಾರ ಧರಣಿ ಪ್ರಾರಂಭಿಸಿದ್ದರಿಂದ ಕೆಬಿಜೆಎನ್ಎಲ್ ಅಧಿಕಾರಿಗಳು ಧರಣಿಕುರಿತು ಮೇಲಾಧಿ ಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ನಂತರ ಮೇಲಾಧಿ ಕಾರಿಗಳ ಆದೇಶದಂತೆ ಹೆಚ್ಚುವರಿಯಾಗಿ ನಾಲ್ಕು ದಿನಗಳು ಆ. 17ವರೆಗೆ ಮುಖ್ಯ ಕಾಲುವೆಗೆ ನೀರು ಹರಿಸುವುದನ್ನು ಮುಂದುವರಿಸಲಾಗುವದು ಎಂದು ಕೆಬಿಜೆಎನ್ಎಲ್ ವೃತ್ತ ಕಚೇರಿ ಅಧಿಧೀಕ್ಷಕ ಅಭಿಯಂತರ ವೀರಣ್ಣ ನಗರೂರು ತಿಳಿಸಿದ್ದಾರೆ .
Advertisement