ಬೆಂಗಳೂರು:ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬಜೆಟ್ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 1.58 ರೂ. ಹೆಚ್ಚಳ ಮಾಡಿದ್ದರು. ಇದೀಗ ಎರಡೂ ರೂ. ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ನಿಜಕ್ಕೂ ಕಡಿಮೆ ಆಗಿದ್ದು ಕೇವಲ 46 ಪೈಸೆ ಅಷ್ಟೇ ಎಂದು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, 46 ಪೈಸೆ ಕಡಿಮೆ ಮಾಡಿ ದೊಡ್ಡ ಸಾಧನೆ ಎಂದು ಹೇಳಿಕೊಂಡು ಓಡಾಡುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ವಿರುದ್ಧ ರೇವಣ್ಣ ಹಾಗೂ ಇತರರು ಹತಾಶರಾಗಿ ಏನೇನೋ ಹೇಳಿಕೆ ಕೊಡುತ್ತಿದ್ದಾರೆ. ನಾವಂತೂ ಒಂದು ಶಬ್ಧ ಮಾತಾಡುತ್ತಿಲ್ಲ. ಮುಖ್ಯಮಂತ್ರಿಯವರು ಅಭಿವೃದ್ಧಿ ಕೆಲಸ ಮರೆತು ದೇವಾಸ್ಥಾನಗಳಿಗೆ ಓಡಾಡುತ್ತಿದ್ದಾರೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಯಾವ ಸಚಿವರೂ ಕೂಡ ಸಿಗುತ್ತಿಲ್ಲ. ಮುಖ್ಯಮಂತ್ರಿಯವರಿಗೆ ಸರ್ಕಾರ ಅಸ್ತಿತ್ವದಲ್ಲಿರುವ ನಂಬಿಕೆಯಿಲ್ಲ. ಇಂತಹ ವಾತಾವರಣದಲ್ಲಿ ಸರ್ಕಾರ ಮುಂದುವರಿದಿರುವುದು ನೋವಿನ ಸಂಗತಿ ಎಂದರು.
ಇನ್ನಾದರೂ ಸರ್ಕಾರದ ಕೆಲಸದತ್ತ ಗಮನಹರಿಸಲಿ. ಅವರ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಂಡು ಬಿಜೆಪಿ ಮೇಲೆ ಆರೋಪ ಮಾಡದೆ ಅಭಿವೃದ್ಧಿ ಕೆಲಸದತ್ತ ಗಮನಹರಿಸಲಿ ಎಂದು ಹೇಳಿದರು.