Advertisement

ಮಳೆ ಹಾನಿ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

02:40 PM May 22, 2022 | Team Udayavani |

ಮಾಯಕೊಂಡ: ಮಾಯಕೊಂಡ ಸೇರಿದಂತೆ ಹುಚ್ಚವ್ವನಹಳ್ಳಿ, ಬಾಡ, ಕಂದಗಲ್ಲು, ಗೋಪನಹಾಳು, ಅಣಬೇರು ಗ್ರಾಮಗಳಲ್ಲಿ ಗಾಳಿ-ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಶನಿವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

Advertisement

ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ 210ಕ್ಕೂ ಹೆಚ್ಚು ಹೆಕ್ಟೇರ್‌ ಭತ್ತದ ಬೆಳೆ ನೆಲ ಕಚ್ಚಿದೆ. 4-5 ಎಕರೆ ಹತ್ತಿ, 5-7 ಎಕರೆಯಲ್ಲಿನ ಕುಂಬಳ ಮೊಳಕೆಯೊಡೆಯುವ ಹಂತದಲ್ಲಿದ್ದು, ಗಾಳಿ-ಮಳೆಗೆ ನೆಲ ಕಚ್ಚಿವೆ. ಆನಗೋಡು ಹೋಬಳಿಯ ಹೊನ್ನನಾಯ್ಕನಹಳ್ಳಿ ಗ್ರಾಮದ ವೀರೇಶ್‌ ಎಂಬುವವರು 3 ಎಕರೆ ಶೇಂಗಾವನ್ನು ಒಕ್ಕಣೆ ಮಾಡಲು ಜಮೀನಿನಲ್ಲಿ ರಾಶಿ ಮಾಡಿದ್ದರು. ಮಳೆಯಿಂದ ನೆನೆದು ಸಂಪೂರ್ಣ ಕೊಳೆತು ಹೋಗಿದೆ. ಹಾನಿಗೊಳಗಾದ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್‌, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶೀಲ್ದಾರ್‌ ಬಸವನ ಗೌಡ ಕೋಟೂರು ಭೇಟಿ ನೀಡಿ ಪರಿಶೀಲಿಸಿದರು.

ಬಹುತೇಕ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಭತ್ತ ನಾಶವಾಗಿದೆ. ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಲಾಗುತ್ತದೆ. ಬೆಳೆ ಹಾನಿಗೊಳಗಾದ ರೈತರು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದರು.

ಅಧಿಕಾರಿಗಳ ತಂಡ ಮಾಯಕೊಂಡ ರೈಲ್ವೆ ಅಂಡರ್‌ಪಾಸ್‌ ಕೆಳಗೆ ನೀರು ನಿಂತ ಜಾಗಕ್ಕೆ ಭೇಟಿ ನೀಡಿದ್ದರು. ಮಳೆಗಾಲದಲ್ಲಿ ಅಕ್ಕ ಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಪಂ ಪಿಡಿಒ ನಾಗರಾಜು ಅಧಿಕಾರಿಗಳ ಗಮನಕ್ಕೆ ತಂದರು. ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಗ್ರಾಮಲೆಕ್ಕಾಧಿಕಾರಿ ಅಮಿತ್‌, ಜಯಶೀಲ, ಕೋಟೆಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next