Advertisement

ಅಧಿಕಾರಿಗಳ ನಿದ್ದೆಗೆಡಿಸಿದ ಮಿಸ್ಸಿಂಗ್‌ ಲಿಂಕ್‌

09:00 AM Apr 25, 2020 | mahesh |

ಬೆಂಗಳೂರು: ನಗರದ “ಹಾಟ್‌ ಸ್ಪಾಟ್‌’ ಪಾದರಾಯನಪುರ ಈಗ ಮೇಲ್ನೋಟಕ್ಕೆ ತಿಳಿಯಾಗಿದೆ. ಗಲಭೆಯಲ್ಲಿ ಪಾಲ್ಗೊಂಡವರನ್ನೂ ವಶಕ್ಕೆ ಪಡೆದಾಗಿದೆ. ಅಗತ್ಯ ಇರುವವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಆದರೆ, ಇದೆಲ್ಲದರ ನಡುವೆ ಒಂದು “ಮಿಸ್ಸಿಂಗ್‌ ಲಿಂಕ್‌’ ಇದೆ. ಅದು ಪೊಲೀಸ್‌ ಮತ್ತು ಬಿಬಿಎಂಪಿ ನಿದ್ದೆಗೆಡಿಸಿದೆ. ಕ್ವಾರಂಟೈನ್‌ ಸಂದರ್ಭದಲ್ಲಿನ ಗಲಭೆ ನಂತರ ವಾರ್ಡ್‌ನಲ್ಲಿದ್ದ ಕೆಲವರು ಮರುದಿನದಿಂದಲೇ ಕಣ್ಮರೆಯಾಗಿದ್ದಾರೆ. ಅವರು ಎಲ್ಲಿಗೆ ಹೋದರು ಎಂಬ ಚಿಂತೆ ಅಧಿಕಾರಿಗಳನ್ನು ಕಾಡುತ್ತಿದೆ. ಹೀಗೆ “ಮಿಸ್ಸಿಂಗ್‌’ ಆಗಿರುವ ಸುದ್ದಿ ಹರಡುತ್ತಿರುವ ಬೆನ್ನಲ್ಲೇ ಪಾದರಾಯನಪುರ ವಾರ್ಡ್‌ಗೆ ಹೊಂದಿಕೊಂಡ ಪ್ರದೇಶಗಳಲ್ಲೂ ಆತಂಕದ ಕವಿದಿದೆ. ತಮ್ಮ ಏರಿಯಾದಲ್ಲಿ ನೆಲೆಸಿರಬಹುದಾ ಎಂಬ ಭೀತಿ ಎದುರಾಗಿದೆ.

Advertisement

ಸೋಂಕು ದೃಢಪಟ್ಟ ದ್ವಿತೀಯ ಸಂಪರ್ಕದಲ್ಲಿದ್ದ 53 ಜನರನ್ನು ಏ. 19ರಂದು ಕ್ವಾರಂಟೈನ್‌ ಮಾಡಲು ಹೋದಾಗ, ಉಂಟಾದ ಸಂಘರ್ಷದ ನಂತರವೇ ಜನ ಇಲ್ಲಿಂದ ಕಾಲುಕಿತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ದಾಂಧಲೆಯಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ 126 ಜನರನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಬಂಧಿತರಲ್ಲೇ ಐವರಿಗೆ ಇಲ್ಲಿಯವರೆಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಭೀತಿಗೆ ಕಾರಣವಾಗಿದೆ.

ಇನ್ನೊಬ್ಬನಿಗೆ ಬಲೆ ಬೀಸಿದ್ದೇವೆ!: ದಾಂಧಲೆ ನಡೆದಾಗ ಮತ್ತು ನಡೆದ ನಂತರ ಕೆಲವರು ತಪ್ಪಿಸಿಕೊಂಡಿರುವ ಅನುಮಾನ ಇದೆ. ಅಂತಹವರ ಹುಡುಕಾಟ ನಡೆದಿದೆ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಹೀಗೆ ಕಣ್ಮರೆಯಾದವರಲ್ಲಿ ಇರ್ಫಾನ್‌ ಕೂಡ ಒಬ್ಬ. ಈತನಿಗಾಗಿ ಬಲೆ ಬೀಸಿದ್ದೇವೆ ಎಂದು ಜಗ ಜೀವನ್‌ರಾಮ್‌ನಗರ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಬಿಬಿಎಂಪಿ ಎಡವಿದ್ದೆಲ್ಲಿ?: ಪಾದರಾಯನಪುರದಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೇಳಿದ್ದರು. ದ್ವಿತೀಯ ಸಂಪರ್ಕಿತರನ್ನೂ ಕ್ವಾರಂಟೈನ್‌ ಮಾಡಿದರೆ, ಬಂಧಿತರಲ್ಲಿ ಐವರಿಗೆ ಕೋವಿಡ್ ಬರಲು ಹೇಗೆ ಸಾಧ್ಯ ಎಂಬುದೇ ಈಗ ಯಕ್ಷ ಪ್ರಶ್ನೆ.

ಕಂಟೈನ್ಮೆಂಟ್‌ ಇದ್ದರೂ ಕಂಟಕದ ಭಯ?: ಕಂಟೈನ್ಮೆಂಟ್‌ ಆಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಬಾಪೂಜಿ ನಗರ (ವಾರ್ಡ್‌ ನಂ.134), ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಪಾದರಾಯನಪುರ (ವಾರ್ಡ್‌ ನಂ. 135)., ಕೆ.ಆರ್‌. ಮಾರುಕಟ್ಟೆ (ವಾರ್ಡ್‌ ನಂ. 139) ವಾರ್ಡ್ಗಳ ಮೇಲೆ ಪೊಲೀಸರು ಹಾಗೂ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ. ಯಾಕೆಂದರೆ ಈ ವಾರ್ಡ್‌ಗಳಲ್ಲಿನ ಮನೆಗಳು ಕಿಷ್ಕಿಂದೆಯಂತಿವೆ. ಜತೆಗೆ ಕೂಲಿ ಮತ್ತು ದಿನಗೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂಥ ವಿಷಮ ಸ್ಥಿತಿಯಲ್ಲಿ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಜಮೀರ್‌ ಅಹಮದ್‌ ವಿರುದ್ಧ ಪ್ರಕರಣಕ್ಕೆ ಕಟೀಲ್‌ ಮನವಿ
ಪಾದರಾಯನಪುರದಲ್ಲಿ ನಡೆದ ಸಮಾಜ ವಿರೋಧ ಗಲಾಟೆಯ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ಅಶಾಂತಿಗೆ ಕಾರಣರಾದ ಶಾಸಕ ಜಮೀರ್‌ ಅಹಮದ್‌ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶುಕ್ರವಾರ ಭೇಟಿಯಾದ ನಳಿನ್‌ ಕುಮಾರ್‌ ಕಟೀಲ್‌ ಅವರು ರಾಜ್ಯದಲ್ಲಿ ಕೋವಿಡ್ ಸೋಕು ತಡೆಗೆ ನಡೆದಿರುವ ಚಟುವಟಿಕೆಗಳ ವಿವರ ನೀಡುವ ಜತೆಗೆ ಮುಂದಿನ ದಿನಗಳಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ಕಾರ್ಯ ಯೋಜನೆಗಳ ಬಗ್ಗೆ ಪಕ್ಷದ ವತಿಯಿಂದ ಸಲಹೆಸಹಿತ ಮನವಿ ಸಲ್ಲಿಸಿದರು. ಪ್ರಮುಖವಾಗಿ ದೆಹಲಿಯಲ್ಲಿ ನಡೆದ ತಬ್ಲಿಘೀ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಇನ್ನೂ ಅನೇಕರನ್ನು ತ್ವರಿತವಾಗಿ ಪತ್ತೆ ಹಚ್ಚಬೇಕು. ಹಾಗೆಯೇ ಪಾದರಾಯನಪುರದಲ್ಲಿ ಗಲಭೆ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು. ಶಾಸಕ ಜಮೀರ್‌ ಅಹಮ್ಮದ್‌ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.

ನಮ್ಮ ವಾರ್ಡ್‌ನ ಒಳಗೆ ಪಾದರಾಯನಪುರದಿಂದ ಯಾರೂ ಬರದಂತೆ ಹಾಗೂ ಇಲ್ಲಿಂದ ಅಲ್ಲಿಗೆ ಯಾರೂ ಹೋಗದಂತೆ ಎಚ್ಚರಿಕೆ ವಹಿಸಿದ್ದೇವೆ. ಬಾಪೂಜಿನಗರದಲ್ಲಿ 12 ಮಸೀದಿಗಳಿದ್ದು, ಈ ಮೂಲಕವೂ ಸಾರ್ವಜನಿಕರಲ್ಲಿ ಹೊರಗೆ ಬರದಂತೆ ಹಾಗೂ ಸೋಂಕು ಲಕ್ಷಣ ಕಾಣಿಸಿಕೊಂಡರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇವೆ.
● ಅಜ್ಮಲ್‌ಬೇಗ್‌, ಬಾಪೂಜಿ ನಗರ ವಾರ್ಡ್‌ ಪಾಲಿಕೆ ಸದಸ್ಯ

● ಹಿತೇಶ್‌. ವೈ

Advertisement

Udayavani is now on Telegram. Click here to join our channel and stay updated with the latest news.

Next