Advertisement

6 ತಿಂಗಳಲ್ಲಿ 425 ಪ್ರಕರಣ ಭೇದಿಸಿ 334 ಮಂದಿ ಸೆರೆ

12:48 AM Sep 22, 2019 | Team Udayavani |

ಬೆಂಗಳೂರು: ಕಳೆದ 6 ತಿಂಗಳಲ್ಲಿ ದರೋಡೆ, ಸುಲಿಗೆ, ಸರಗಳ್ಳತನ, ಮನೆಗಳ್ಳತನ, ವಾಹನಗಳ್ಳತನ ಸೇರಿದಂತೆ 425 ಪ್ರಕರಣ ಭೇದಿಸಿರುವ ಉತ್ತರ ವಿಭಾಗದ ಪೊಲೀಸರು, 334 ಮಂದಿ ಆರೋಪಿಗಳನ್ನು ಬಂಧಿಸಿ, 5,28,87,431 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

5 ದರೋಡೆ ಪ್ರಕರಣಗಳಲ್ಲಿ 10 ಮಂದಿ, 69 ಸುಲಿಗೆ ಪ್ರಕರಣದಲ್ಲಿ 101, 23 ಸರಗಳ್ಳತನ ಪ್ರಕರಣದಲ್ಲಿ 25 ಮಂದಿ, 71 ಮನೆಗಳ್ಳತನ ಪ್ರಕರಣದಲ್ಲಿ 49 ಮಂದಿ, 236 ವಾಹನ ಕಳ್ಳತನ ಪ್ರಕರಣದಲ್ಲಿ 103 ಹಾಗೂ ಇತರೆ 21 ಪ್ರಕರಣಗಳಲ್ಲಿ 46 ಮಂದಿ ಸೇರಿದಂತೆ ಒಟ್ಟು 334 ಮಂದಿಯನ್ನು ಬಂಧಿಸಲಾಗಿದೆ. ಆರ್‌.ಟಿ.ನಗರದ ಎಚ್‌ಎಂಟಿ ಮೈದಾನದಲ್ಲಿ ಶನಿವಾರ ಜಪ್ತಿ ಮಾಡಿದ ಚಿನ್ನಾಭರಣ, ವಾಹನ ಹಾಗೂ ಹಸುಗಳನ್ನು ಪ್ರದರ್ಶನಕ್ಕೀಡಲಾಗಿತ್ತು. ನಂತರ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಕಳವು ವಸ್ತುಗಳನ್ನು ಮಾಲಿಕರಿಗೆ ಹಿಂದಿರುಗಿಸಿದರು.

ಎಚ್ಚರಿಕೆ ವಹಿಸಿ: ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳ ಅಪರಾಧ ಪ್ರಕರಣಗಳ‌ ಪತ್ತೆ ಕಾರ್ಯ ಸುಲಭವಲ್ಲ. ಸೂಕ್ತ ಸಾಕ್ಷ್ಯಧಾರ ಸಂಗ್ರಹಿಸಬೇಕಿದೆ. ಹಾಗೆಯೇ ಕಳೆದುಕೊಂಡ ವಸ್ತುಗಳನ್ನು ಮತ್ತೆ ವಶಪಡಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಆರೋಪಿಗಳು ಮಾದಕ ವಸ್ತು, ಮದ್ಯಸೇವನೆಯಿಂದ ಅವರ ಆರೋಗ್ಯ ಹದಗೆಟ್ಟಿದೆ. ಹೀಗಾಗಿ, ವಿಚಾರಣೆ ನಡೆಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ತಾಂತ್ರಿಕ ತನಿಖೆ ಕೈಗೊಂಡು, ವಿಡಿಯೋ ಚಿತ್ರೀಕರಣವನ್ನೂ ಮಾಡಬೇಕಾಗಿದೆ ಎಂದು ಹೇಳಿದರು.

ಸಿಬ್ಬಂದಿ ಕೊರತೆ: ನಗರದಲ್ಲಿ 1.40 ಕೋಟಿ ಜನರಿದ್ದಾರೆ. ಆದರೆ, ಪೊಲೀಸ್‌ ಸಿಬ್ಬಂದಿ ಕೇವಲ 19 ಸಾವಿರ. ಈ ಪೈಕಿ ವಾರದ ರಜೆ ಹಾಗೂ ಇನ್ನಿತರೆ ರಜೆಗಳನ್ನು ಸಿಬ್ಬಂದಿ ಹೊರತು ಪಡಿಸಿದರೆ ಕೇವಲ 15 ಸಾವಿರ ಪೊಲೀಸ್‌ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರೂ ಪ್ರಕರಣಗಳ ಪತ್ತೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಹಸು ಕದ್ದವರ ಬಂಧನ: ಮನೆ ಮುಂದೆ ಕಟ್ಟಿ ಹಾಕಿದ್ದ ಹಸುಗಳನ್ನು ಕಳವು ಮಾಡಿ ರೈತರಿಗೆ, ಕಸಾಯಿ ಖಾನೆಗಳಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ನಾಲ್ವರನ್ನು ನಂದಿನಿ ಲೇಔಟ್‌ ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರ ನಗರ ನಿವಾಸಿ ಮಂಜುನಾಥ (29), ನಂದಿನಿ ಲೇಔಟ್‌ನ ರಘು (28), ಲಗ್ಗೆರೆ ಲೋಕೇಶ್‌ (28), ಬಸವರಾಜು (22), ಗೊರಗುಂಟೆಪಾಳ್ಯದ ಗುರುಪ್ರಸಾದ್‌ (35) ಬಂಧಿತರು. ಅವರಿಂದ 2.40 ಲಕ್ಷ ಮೌಲ್ಯದ ನಾಲ್ಕು ಹಸುಗಳನ್ನು ವಶಪಡಿಸಿಕೊಂಡು, ಶನಿವಾರ ಮಾಲಿಕರಿಗೆ ಹಸ್ತಾಂತರಿಸಲಾಗಿದೆ.

Advertisement

ಶಂಕರ ನಗರದಲ್ಲಿ ಚಂದ್ರು ಎಂಬುವವರು ಮನೆ ಮುಂದೆ ಕಟ್ಟಿಹಾಕಿದ್ದ ನಾಲ್ಕು ಹಸುಗಳನ್ನು ಆರೋಪಿಗಳು ಆ. 22ರಂದು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದರು. ನಸುಕಿನ 3ರ ಸುಮಾರಿಗೆ ಚಂದ್ರು ಮನೆ ಬಳಿ ಮೇಯುತ್ತಿದ್ದ ಹಸುಗಳನ್ನು ಸರಕು ಸಾಗಣೆ ವಾಹನದಲ್ಲಿ ತುಂಬಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ದನಗಳನ್ನು ವಾಹನಕ್ಕೆ ತುಂಬಿಕೊಳ್ಳುತ್ತಿರುವುದು ಸಮೀಪದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿತ್ತು. ಈ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಯಾವುದೇ ದೂರು ಬಂದರೂ ಮೊದಲು ದಾಖಲಿಸಿಕೊಳ್ಳಬೇಕು. ಬಳಿಕ ಅವುಗಳನ್ನು ಸಂಬಂಧಿಸಿದ ಠಾಣೆಗಳಿಗೆ ವರ್ಗಾಯಿಸಬೇಕು ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next