Advertisement

ಇಂದಿನಿಂದ ಏಕದಿನ ಸರಣಿ: ಜಿಂಬಾಬ್ವೆ ವಿರುದ್ಧ ಜಬರ್ದಸ್ತ್ ಆಟದ ನಿರೀಕ್ಷೆ

10:59 PM Aug 17, 2022 | Team Udayavani |

ಹರಾರೆ: ಮೇಲ್ನೋಟಕ್ಕೆ ತೀರಾ ಸಾಮಾನ್ಯವೆಂದೇ ಪರಿಗಣಿಸಲ್ಪಡುವ ಜಿಂಬಾಬ್ವೆ ವಿರುದ್ಧ ಅವರದೇ ನೆಲದಲ್ಲಿ ಟೀಮ್‌ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಗೆ ಅಣಿಯಾಗಿದೆ. ಹಿಂದಿನೆರಡು ಪ್ರವಾಸದ ವೇಳೆ 3-0 ವೈಟ್‌ವಾಶ್‌ ಸಾಧನೆಗೈದಿದ್ದ ಭಾರತ, ಈ ಸಲವೂ ಇದೇ ಫ‌ಲಿತಾಂಶವನ್ನು ಪುನರಾವರ್ತಿಸೀತೇ ಎಂಬುದೊಂದು ಕುತೂಹಲ.

Advertisement

ಮೂರೂ ಪಂದ್ಯಗಳ ತಾಣ “ಹರಾರೆ ನ್ಪೋರ್ಟ್ಸ್ ಕ್ಲಬ್‌’ ಅಂಗಳ. ಎಲ್ಲವೂ ಹಗಲು ಪಂದ್ಯಗಳು. ಗುರುವಾರ ಮೊದಲ ಮುಖಾಮುಖೀ ನಡೆಯಲಿದ್ದು, ಆ. 20 ಮತ್ತು 22ರಂದು ಉಳಿದೆರಡು ಪಂದ್ಯಗಳು ಸಾಗಲಿವೆ.
ಈ ಸರಣಿ ಕೆ.ಎಲ್‌. ರಾಹುಲ್‌ ಪಾಲಿಗೆ ಅತ್ಯಂತ ಮಹತ್ವದ್ದಾ ಗಿದೆ. ಎರಡು ಪಂದ್ಯಗಳ ಸುದೀರ್ಘ‌ ವಿರಾಮದ ಬಳಿಕ ಅವರು ಟೀಮ್‌ ಇಂಡಿಯಾಕ್ಕೆ ಮರಳಿದ್ದಾರೆ. ಜತೆಗೆ ನಾಯಕತ್ವದ ಮಹತ್ವದ ಜವಾಬ್ದಾರಿಯೂ ಇದೆ. ಶಿಖರ್‌ ಧವನ್‌ ಜತೆ ಆರಂಭಿಕನಾಗಿ ಇಳಿಯುವ ರಾಹುಲ್‌ ಅವರ ಫಾರ್ಮ್ ಮತ್ತು ಫಿಟ್‌ನೆಸ್‌ ಮೇಲೆ ಎಲ್ಲರ ಗಮನ ಕೇಂದ್ರೀಕೃತಗೊಂಡಿದೆ. ರಾಹುಲ್‌ ಅವರಿಂದ ನೈಜ ಬ್ಯಾಟಿಂಗ್‌ ಫಾರ್ಮ್ ಕಂಡುಬಂದದ್ದೇ ಆದರೆ ಭಾರತಕ್ಕೆ ಅದು ಖಂಡಿತವಾಗಿಯೂ ಹೆಚ್ಚಿನ ಲಾಭ ತರಲಿದೆ.

ಮತ್ತೋರ್ವ ಓಪನರ್‌ ಶುಭಮನ್‌ ಗಿಲ್‌ ಅವರಿಗೆ ವನ್‌ಡೌನ್‌ ಸ್ಥಾನವೇ ಮೀಸಲಾಗಲಿದೆ. ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಆಡಲಾದ ಮೂರೂ ಏಕದಿನಗಳಲ್ಲಿ ಆರಂಭಿಕನಾಗಿ ಇಳಿದ ಗಿಲ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ. ಅವರಿಂದ ಇದೇ ಫಾರ್ಮ್ ಅನ್ನು ನಿರೀಕ್ಷಿಸಲಾಗಿದೆ. ಇನ್ನೂ ಓರ್ವ ಆರಂಭಕಾರ ಋತುರಾಜ್‌ ಗಾಯಕ್ವಾಡ್‌ಗೆ ಎಲ್ಲಿ ಜಾಗ ಕೊಡುವುದು ಎಂಬುದೊಂದು ಪ್ರಶ್ನೆ.

ಮಧ್ಯಮ ಕ್ರಮಾಂಕದಲ್ಲಿ ಭಾರತಕ್ಕೆ ಬಹಳಷ್ಟು ಆಯ್ಕೆಗಳಿವೆ. ದೀಪಕ್‌ ಹೂಡಾ, ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌, ಇದೇ ಮೊದಲ ಸಲ ತಂಡವನ್ನು ಪ್ರವೇಶಿಸಿರುವ ರಾಹುಲ್‌ ತ್ರಿಪಾಠಿ ಇಲ್ಲಿನ ಪ್ರಮುಖರು. ಹಂತ ಹಂತವಾಗಿ ಇವರೆಲ್ಲರನ್ನೂ ಆಡುವ ಬಳಗದಲ್ಲಿ ಆಡಿಸಿ ನೋಡಬೇಕಿದೆ.

ಬೌಲಿಂಗ್‌ನಲ್ಲಿ ಭಾರತ ವಿಶೇಷ ಅನುಭವಿಗಳನ್ನು ಹೊಂದಿಲ್ಲ. ವೇಗದ ವಿಭಾಗದಲ್ಲಿ ಶಾದೂìಲ್‌ ಠಾಕೂರ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ ಸಿರಾಜ್‌, ಮರಳಿ ಬಂದ ದೀಪಕ್‌ ಚಹರ್‌ ಇದ್ದಾರೆ. ಸ್ಪಿನ್‌ ತ್ರಿವಳಿಗಳೆಂದರೆ ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಮತ್ತು ಶಾಬಾಜ್‌ ಅಹ್ಮದ್‌. ಸ್ಪಿನ್‌ ಆಲ್‌ರಂಡರ್‌ ಆಗಿ ದೀಪಕ್‌ ಹೂಡಾ ಅವರನ್ನು ಪರಿಗಣಿಸಬಹುದು.

Advertisement

ಜಿಂಬಾಬ್ವೆ ಸಾಮಾನ್ಯ ತಂಡವಲ್ಲ
ಜಿಂಬಾಬ್ವೆಯ ಸಾಮರ್ಥ್ಯಕ್ಕೆ ಭಾರತದ ಈ ಬೌಲಿಂಗ್‌ ಪಡೆ ಧಾರಾಳ ಎಂದು ಭಾವಿಸಿದರೆ ಅಪಾಯ ತಪ್ಪಿದ್ದಲ್ಲ. ಜಿಂಬಾಬ್ವೆ ಒಂದು ಕಾಲದ ಹೀರೋಗಳಾದ ಫ್ಲವರ್‌ ಬ್ರದರ್, ಹಾಟನ್‌, ಸ್ಟ್ರೀಕ್‌, ನೀಲ್‌ ಜಾನ್ಸನ್‌, ಮರ್ರೆ ಗುಡ್‌ವಿನ್‌, ಹೆನ್ರಿ ಒಲೊಂಗ ಅವರಂಥ ಸ್ಟಾರ್‌ ಆಟಗಾರರನ್ನು ಹೊಂದಿಲ್ಲದೇ ಇರಬಹುದು, ಆದರೆ ಕಳೆದ ಸರಣಿಯಲ್ಲಿ ಅದು ಬಾಂಗ್ಲಾ ವಿರುದ್ಧ ಇದೇ ಹರಾರೆ ಅಂಗಳದಲ್ಲಿ 300 ಪ್ಲಸ್‌, 290 ಪ್ಲಸ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದನ್ನು ಭಾರತ ಗಂಭೀರವಾಗಿಯೇ ಪರಿ ಗಣಿಸ ಬೇಕಿದೆ. ಆದರೆ ಜಬರ್ದಸ್ತ್ ಪ್ರದರ್ಶನ ನೀಡಲು ಮರೆಯಬಾರದು.

ಧೋನಿ, ರೋಹಿತ್‌ ಜತೆ ಹೋಲಿಸಬೇಡಿ: ರಾಹುಲ್‌
“ನನ್ನ ನಾಯಕತ್ವದ ಶೈಲಿಯನ್ನು ದಯವಿಟ್ಟು ಮಹೇಂದ್ರ ಸಿಂಗ್‌ ಧೋನಿ ಅಥವಾ ರೋಹಿತ್‌ ಶರ್ಮ ಅವರೊಂದಿಗೆ ಹೋಲಿಸಬೇಡಿ’ ಎಂದಿದ್ದಾರೆ ಕೆ.ಎಲ್‌. ರಾಹುಲ್‌. ಫಿಟ್‌ನೆಸ್‌ ಪಡೆದು ಜಿಂಬಾಬ್ವೆ ಪ್ರವಾಸದಲ್ಲಿ ಮರಳಿ ಏಕದಿನ ತಂಡದ ನಾಯಕತ್ವ ವಹಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
“ನಾನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಲು ಬಯಸುವುದಿಲ್ಲ. ನಾಯಕತ್ವದ ವಿಷಯದಲ್ಲಿ ನಾನಿನ್ನೂ ಕಿರಿಯ ಮತ್ತು ಅನನುಭವಿ. ನಾಯಕನಾಗಿ ಇದು ನನ್ನ ಕೇವಲ ಎರಡನೇ ಸರಣಿ. ಧೋನಿ, ರೋಹಿತ್‌ ಅವರ ಸಾಧನೆ, ಅವರೇರಿದ ಎತ್ತರ ಅಸಾಮಾನ್ಯ. ದೇಶಕ್ಕಾಗಿ ಅವರು ನೀಡಿದ ಕೊಡುಗೆ ಅಪಾರ. ಅವರ ಮಾರ್ಗದರ್ಶನದಲ್ಲಿ ನಾನು ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ, ಬಹಳಷ್ಟು ಕಲಿತಿದ್ದೇನೆ. ನಾಯಕತ್ವದ ವಿಷಯದಲ್ಲಿ ನಾನು ನನ್ನದೇ ಆದ ದಾರಿಯಲ್ಲಿ ನಡೆಯುತ್ತೇನೆ’ ಎಂದು ರಾಹುಲ್‌ ಹೇಳಿದರು.

ತಂಡಗಳು
ಭಾರತ
ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌, ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ಶಾದೂìಲ್‌ ಠಾಕೂರ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್‌ ಸಿರಾಜ್‌, ದೀಪಕ್‌ ಚಹರ್‌, ಶಾಬಾಜ್‌ ಅಹ್ಮದ್‌.

ಜಿಂಬಾಬ್ವೆ
ರೇಗಿಸ್‌ ಚಕಬ್ವ(ನಾಯಕ), ರಿಯಾನ್‌ ಬರ್ಲ್, ಟನಾಕ ಚಿವಾಂಗ, ಟಕುದ್ವನಾಶೆ ಕೈಟಾನೊ, ಕ್ಲೈವ್‌ ಮಡಾಂಡೆ, ವೆಸ್ಲಿ ಮಧೆವೇರ್‌, ಟಡಿವನಾಶೆ ಮರುಮನಿ, ಜಾನ್‌ ಮಸಾರ, ಟೋನಿ ಮುನ್ಯೊಂಗ, ರಿಚರ್ಡ್‌ ಎನ್‌ಗರವ, ವಿಕ್ಟರ್‌ ನ್ಯವುಚಿ, ಸಿಕಂದರ್‌ ರಝ, ಮಿಲ್ಟನ್‌ ಶುಂಬ, ಡೊನಾಲ್ಡ್‌ ಟಿರಿಪಾನೊ.

ಆರಂಭ: ಅಪರಾಹ್ನ 12.45
ಪ್ರಸಾರ: ಸೋನಿ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next