Advertisement

ಬೆಂಗಳೂರಿನಲ್ಲಿ 2ನೇ ದಿನವೂ ಒತ್ತುವರಿ ತೆರವು; ಪಟ್ಟಿಯಲ್ಲಿ ವಿಪ್ರೋ, ಪ್ರೆಸ್ಟೀಜ್ ಹೆಸರು

10:27 AM Sep 14, 2022 | Team Udayavani |

ಬೆಂಗಳೂರು: ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ 2ನೇ ದಿನವೂ ಮುಂದುವರಿದಿದ್ದು, ಮಂಗಳವಾರ ಮಹದೇವಪುರ ಮತ್ತು ಯಲಹಂಕ ವಲಯ ವ್ಯಾಪ್ತಿಯಲ್ಲಿ 18 ಕಡೆಯ ಒತ್ತುವರಿ ತೆರವು ಮಾಡಲಾಗಿದೆ. ಅತಿಕ್ರಮಣ ಕಟ್ಟಡಗಳ ಪಟ್ಟಿಯಲ್ಲಿ ವಿಪ್ರೋ, ಪ್ರೆಸ್ಟೀಜ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ಹೆಸರುಗಳಿರುವುದಾಗಿ ವರದಿ ತಿಳಿಸಿದೆ.

Advertisement

ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗದಂತೆ ತಡೆಯಲು ಬಿಬಿಎಂಪಿ ಸೋಮವಾರದಿಂದ ತೀವ್ರಗತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಅದರಂತೆ ಸೋಮವಾರ ಮಹದೇವಪುರ ವಲಯ ವ್ಯಾಪ್ತಿಯಲ್ಲಿ 15 ಕಡೆ ತೆರವು ಕಾರ್ಯಾಚರಣೆ ನಡೆಸಿದ್ದ ಬಿಬಿಎಂಪಿ, ಮಂಗಳವಾರ ಮಹದೇವಪುರ ವಲಯದ ಜತೆಗೆ ಯಲಹಂಕ ವಲಯದಲ್ಲೂ ಕಾರ್ಯಾಚರಣೆ ನಡೆಸಿದೆ.

ಮಹದೇವಪುರ ವಲಯ ವ್ಯಾಪ್ತಿಯ 3 ಬಡಾವಣೆ ಹಾಗೂ ಯಲಹಂಕ ವಲಯದಲ್ಲಿ ಒಂದು ಕಡೆ ತೆರವು ಕಾರ್ಯಾಚರಣೆ ನಡೆಸಿ, ರಾಜಕಾಲುವೆ ಜಾಗ ವಶಕ್ಕೆ ಪಡೆಯಲಾಗಿದೆ. ಮಹದೇವಪುರ ವಲಯದ ಚಲ್ಲಘಟ್ಟದ ಸರ್ವೆ ನಂ. 70/14ರಲ್ಲಿ ನಲಪಾಡ್‌ ಅಕಾಡೆಮಿಯಿಂದ 2.5 ಮೀ. ಅಗಲ ಮತ್ತು 150.5 ಮೀ. ಉದ್ದದ ರಾಜ ಕಾಲುವೆ ಒತ್ತುವರಿ ಮಾಡಿಕೊಂಡು ರಾಜಕಾಲುವೆ ಮೇಲೆ ಕಾಂಕ್ರೀಟ್‌ ಸ್ಲ್ಯಾಬ್‌ ಅಳವಡಿಸಿ ಕಾಂಪೌಡ್‌ ನಿರ್ಮಿಸಲಾಗಿತ್ತು. ಅದರಲ್ಲಿ 50 ಮೀ. ಉದ್ದದ ಒತ್ತುವರಿಯನ್ನು ಮಂಗಳವಾರ ತೆರವು ಮಾಡಲಾಗಿದ್ದು, ಬುಧವಾರ ಮುಂದಿನ ಒತ್ತುವರಿ ತೆರವು ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಮಹದೇವಪುರ ವಲಯದ ಶಾಂತಿನಿಕೇತನ ಲೇಔಟ್‌ನಲ್ಲಿ 7 ಕಟ್ಟಡ ಹಾಗೂ 4 ಕಾಂಪೌಂಡ್‌ ಗೋಡೆಗಳನ್ನು ತೆರವು ಮಾಡಲಾಗಿದೆ. ಪಾಪಯ್ಯ ರೆಡ್ಡಿ ಲೇಔಟ್‌ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್‌ ಮೆಂಟ್‌ ಗೋಡೆ ಹಾಗೂ 4 ಶೆಡ್‌ಗಳನ್ನು ತೆರವು ಮಾಡಲಾಗಿದೆ. ಬಸವನಪುರದಲ್ಲಿ 1 ಕಾಂಪೌಂಡ್‌ ಗೋಡೆ ತೆರವು ಮಾಡಿ ಜಾಗ ವಶಕ್ಕೆ ಪಡೆಯಲಾಗಿದೆ.

ಯಲಹಂಕ ವಲಯದ ಯಲಹಂಕ ಉಪನಗರ ವ್ಯಾಪ್ತಿಯ ಎನ್‌ಸಿಬಿಎಸ್‌ ಇನ್ಸ್‌ಟಿಟ್ಯೂಟ್‌ನಿಂದ 120 ಮೀ. ಉದ್ದದ ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್‌ ನಿರ್ಮಿಸಲಾಗಿತ್ತು. ಮಂಗಳವಾರ ಕಾಂಪೌಂಡ್‌ ಗೋಡೆ ತೆರವು ಮಾಡಿರುವ ಬಿಬಿಎಂಪಿ, ಜಾಗ ವಶಕ್ಕೆ ಪಡೆದಿದೆ.

Advertisement

ಮತ್ತೆ ಕಾರ್ಯಾಚರಣೆ: ನಗರದಲ್ಲಿ 660 ಕಟ್ಟಡಗಳಿಂದ ಒತ್ತುವರಿಯಾಗಿರುವುದನ್ನು ಬಿಬಿಎಂಪಿ ಗುರುತಿಸಿದೆ. ಸೋಮವಾರ ಮತ್ತು ಮಂಗಳವಾರ ಸುಮಾರು 28 ಕಡೆಗಳಲ್ಲಿನ ಒತ್ತುವರಿ ತೆರವು ಮಡಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿಯಲಿದ್ದು, ಈಗಾಗಲೆ ಗುರುತಿಸಿರುವ ಒತ್ತುವರಿ ಸಂಪೂರ್ಣವಾಗಿ ತೆರವು ಮಾಡುವವರೆಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಪೌಂಡ್‌ ತೆರವೇ ಹೆಚ್ಚು
ಸೆ. 1ರಿಂದ ಈವರೆಗೆ 64 ಕಡೆ ಒತ್ತುವರಿ ತೆರವು ಮಾಡಲಾಗಿದೆ. ಅದರಲ್ಲಿ 35ಕ್ಕೂ ಹೆಚ್ಚಿನ ಕಡೆ ಕಾಂಪೌಂಡ್‌ ಗೋಡೆಗಳನ್ನಷ್ಟೇ ತೆರವು ಮಾಡಿ, ಒತ್ತುವರಿ ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೆ, ಬೃಹತ್‌ ಕಟ್ಟಡಗಳು ನಿರ್ಮಾಣವಾದ ಸ್ಥಳದಲ್ಲಿ ಈ ಹಿಂದೆ ರಾಜಕಾಲುವೆ ಇತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಮಾತ್ರ ಬೃಹತ್‌ ಕಟ್ಟಡಗಳತ್ತ ಜೆಸಿಬಿಯನ್ನು ನುಗ್ಗಿಸದೆ ಕಾಂಪೌಂಡ್‌ ಗೋಡೆಗಳನ್ನು, ಶೆಡ್‌ಗಳನ್ನು, ಖಾಲಿ ಜಾಗ ವಶಕ್ಕೆ ಪಡೆಯುವುದಕ್ಕೆ ಮಾತ್ರ ಕಾರ್ಯಾಚರಣೆ ಸೀಮಿತವಾಗಿಸಿದ್ದಾರೆ.

ಭದ್ರತೆಯೊಂದಿಗೆ ಕಾರ್ಯಾಚರಣೆ
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಕಟ್ಟಡ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಹೆಚ್ಚಿನ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡಲಾಗಿದೆ. ಅದರ ಜತೆಗೆ 2 ಹಿಟಾಚಿ ಮತ್ತು 8 ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವು ಮಾಡಲಾಗಿದೆ.

ರೈನ್‌ಬೋ ಡ್ರೈವ್‌ ಬಗ್ಗೆ ಮಾತಿಲ್ಲ
15 ದಿನಗಳ ಹಿಂದೆ ಸುರಿದ ಮಳೆಗೆ ರೈನ್‌ಬೋ ಡ್ರೈವ್‌ ಲೇಔಟ್‌ ಸಂಪೂರ್ಣ ಜಲಾವೃತವಾಗಿತ್ತು. ಈ ಲೇಔಟ್‌ ವ್ಯಾಪ್ತಿಯಲ್ಲಿನ ರಾಜಕಾಲುವೆ ಮುಚ್ಚಿ ವಿಲ್ಲಾಗಳನ್ನು ನಿರ್ಮಿಸಿದ್ದೇ ಪ್ರವಾಹಕ್ಕೆ ಕಾರಣ ಎಂದು ಬಿಬಿಎಂಪಿ ಅಧಿಕಾರಿಗಳೂ ತಿಳಿಸಿದ್ದರು. ಅಲ್ಲದೆ, ಕಳೆದ ಏಪ್ರಿಲ್‌ನಲ್ಲಿ ಕಂದಾಯ ಇಲಾಖೆಯಿಂದ 15 ವಿಲ್ಲಾಗಳಿಗೆ ರಾಜಕಾಲುವೆ ಒತ್ತುವರಿ ಕುರಿತಂತೆ ನೋಟಿಸ್‌ ಕೂಡ ನೀಡಲಾಗಿತ್ತು. ಅದಾದ ನಂತರ ರಾಜಕಾಲುವೆ ಒತ್ತುವರಿ ತೆರವು ಮಾಡುವುದಕ್ಕೆ ಕಂದಾಯ ಇಲಾಖೆ ಅಥವಾ ಬಿಬಿಎಂಪಿ ಮುಂದಾಗಿಲ್ಲ. ಈಗಲೂ ಪ್ರವಾಹ ಉಂಟಾಗಿ ಅವಾಂತರ ಸೃಷ್ಟಿಯಾಗಿದ್ದರೂ ರೈನ್‌ಬೋ ಡ್ರೈವ್‌ನಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ವಿಲ್ಲಾಗಳ ತೆರವಿಗೆ ಬಿಬಿಎಂಪಿ ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ನಲಪಾಡ್‌ ಅಕಾಡೆಮಿ ಸಿಬ್ಬಂದಿಯಿಂದ ಹಲ್ಲೆಗೆ ಯತ್ನ
ಚಲ್ಲಘಟ್ಟದಲ್ಲಿ ನಲಪಾಡ್‌ ಅಕಾಡೆಮಿಯಿಂದ ಒತ್ತುವರಿಯಾಗಿದ್ದ ಜಾಗ ತೆರವು ಮಾಡುವ ವೇಳೆ ಸಂಸ್ಥೆಯ ಸಿಬ್ಬಂದಿ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಡ ಹೇರಲಾಯಿತು. ಈ ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಹಂತಕ್ಕೆ ಘಟನೆ ನಡೆದಿದ್ದು, ಪೊಲೀಸರು ಅಧಿಕಾರಿಗಳ ರಕ್ಷಣೆಗೆ ಬರಲಿಲ್ಲ. ನಂತರ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲಿದ್ದ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಸೂಚನೆ ನೀಡಿದ ನಂತರ ಭದ್ರತೆ ನೀಡಲಾಯಿತು.

ಧಾರ್ಮಿಕ ಮಂದಿರ ನೆಲಸಮ
ಬೇಗೂರು ವಾರ್ಡ್‌ನ ಲವಕುಶ ನಗರ ಮುಖ್ಯ ರಸ್ತೆ ಬದಿಯ 11 ಎಕರೆ 18 ಗುಂಟೆ ಇರುವ ಕೆರೆಯ ಒಂದು ಭಾಗದಲ್ಲಿ ಧಾರ್ಮಿಕ ಮಂದಿರ ನಿರ್ಮಿಸಲಾಗಿತ್ತು. ಪಕ್ಕದಲ್ಲಿ ಕೆರೆಯ ಅತಿಕ್ರಮಣ ನಿಷೇಧಿಸಲಾಗಿದೆ ಎಂಬ ಫಲಕವಿದ್ದರೂ ಅನಧಿಕೃತವಾಗಿ ಮಂದಿರ (ದಿ ಗೇಟ್‌ ಆಫ್‌ ಸಾಲ್‌ವೇಷನ್‌ ಚರ್ಚ್‌) ಸ್ಥಾಪನೆಯ ಬಗ್ಗೆ ಸಾರ್ವಜನಿಕರಿಂದಲೂ ಬಿಬಿಎಂಪಿಗೆ ದೂರು ಬಂದಿದ್ದವು. ಸ್ಥಳ ಪರಿಶೀಲಿಸಿ ಮಂದಿರ ನಡೆಸುತ್ತಿದ್ದ ವ್ಯಕ್ತಿಗೆ ಬಿಬಿಎಂಪಿ ನೋಟಿಸ್‌ ನೀಡಲಾಗಿತ್ತು. ಸ್ವಯಂ ತೆರವು ಮಾಡದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ಒತ್ತುವರಿ ತೆರವು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next