ದಾವಣಗೆರೆ: ಮೂಲಭೂತ ಕರ್ತವ್ಯಗಳ ಪಾಲನೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕಾನೂನು ಸೇವಾ ಸದಸ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.
ಭಾರತ ಸಂವಿಧಾನ ಸಪ್ತಾಹದ ಅಂಗವಾಗಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಅಡಿ ಮೂಲಭೂತ ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತೇವೆ. ಆದರೆ ಈ ಹಂತದಲ್ಲಿ ಮೂಲಭೂತ ಕರ್ತವ್ಯಗಳನ್ನೇ ಮರೆಯುತ್ತಿದ್ದೇವೆ. ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸುಪ್ರೀಂ ಕೋರ್ಟ್
ನಿರ್ದೇಶನದಂತೆ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳ ಪಾಲನೆ ಮಾಡಬೇಕು ಎಂದರು.
ಶಾಲಾ-ಕಾಲೇಜುಗಳಲ್ಲಿ ಆಂಗ್ಲ ಭಾಷೆಯ ಜೊತೆಗೆ ಕನ್ನಡ ಮಾಧ್ಯಮವನ್ನು ಕಡ್ಡಾಯವಾಗಿ ಕಲಿಸಬೇಕು. ಕನ್ನಡದಲ್ಲೇ ಮಾತನಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಪೋಷಕರು ಮನೆಗಳಲ್ಲೂ ಮಕ್ಕಳೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡಿಗರಾದ ನಾವು ಕನ್ನಡದಲ್ಲೇ ಮಾತನಾಡೋಣ, ವ್ಯವಹರಿಸೋಣ, ಬರೆಯೋಣ. ಎಲ್ಲವನ್ನೂ ಕನ್ನಡದಲ್ಲಿ ಮಾಡುವ ಮೂಲಕ ಕನ್ನಡವನ್ನು ಉಳಿಸಿ, ಬೆಳೆಸಬೇಕಿದೆ. ಬೇರೆ ಭಾಷೆಗಳ ಬಗ್ಗೆ ದುರಾಭಿಮಾನ ಬೇಡ ಎಂದು ಸಲಹೆ ನೀಡಿದರು.
ಹಿರಿಯ ನ್ಯಾಯವಾದಿ ಎಲ್.ಎಚ್. ಅರುಣ್ ಕುಮಾರ್ ಮಾತನಾಡಿ, ಸಂವಿಧಾನದ ಅಂಗವಾಗಿ ಏರ್ಪಡಿಸಿರುವ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧಿಗಳು ಮನೋಭಾವದಿಂದ ಭಾಗವಹಿಸಬೇಕು. ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸ್ಪರ್ಧಾತ್ಮಕ ಯುಗದಲ್ಲಿ ಮೂಲಭೂತ
ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯ, ಸಂವಿಧಾನದ ಬಗ್ಗೆ ಅರಿತುಕೊಂಡರೆ ಸಹೋದರತೆ, ಏಕತೆ ಮೂಡುತ್ತದೆ ಎಂದು ತಿಳಿಸಿದರು.
Related Articles
ಎಲ್ಲ ಭಾಷೆಗಳಲ್ಲೂ ಏಕತೆಯನ್ನು ಕಾಣುವ ಭಾರತ ಹಲವು ಭಾಷೆ ಒಳಗೊಂಡಿದೆ. ನಾವೆಲ್ಲರೂ ಭಾರತೀಯರೇ. ಮೂಲ ಗ್ರಂಥ ಸಂವಿಧಾನ ಎಂದು ಹೇಳಿಕೊಳ್ಳಬೇಕೆ ವಿನಃ ಆಯಾ ಜಾತಿ ಧರ್ಮದ ಅನುಸಾರದಲ್ಲಿ ಗ್ರಂಥಗಳನ್ನು ಹೇಳಬಾರದು. ಅವುಗಳನ್ನು ಸಮುದಾಯಕ್ಕೆ ಸೀಮಿತವಾಗಿಟ್ಟು ಕೊಳ್ಳಬೇಕು ಎಂದರು.
ಮುಖ್ಯ ಶಿಕ್ಷಕಿ ಬಿ.ಎಸ್. ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿ ಟಿ. ಅಂಬಣ್ಣ, ಶಿಕ್ಷಣ ಸಂಯೋಜಕ ಡಿ. ನಾಗರಾಜ್, ಕೆ.ಜಿ. ರವಿಕುಮಾರ್, ಶಾಲಾ ಕಾರ್ಯದರ್ಶಿ ಸಂತೋಷ್ಕುಮಾರ್, ಸಹನಾ ಸಂತೋಷ್ಕುಮಾರ್ ಇತರರು ಇದ್ದರು.
ಹಿಂಜರಿಕೆ ಬಿಟ್ಟು ಹೇಳಿಕೆ ನೀಡಿ
ಪೋಕ್ಸೋ ಎಂದರೆ ಕೇವಲ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಲ್ಲ. 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳು ಪೋಕ್ಸೋ ಅಡಿಯಲ್ಲಿ ಬರುತ್ತವೆ. ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ. ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ರೂಪಿಸಲಾಗಿದೆ.
ಮಕ್ಕಳಿಗೆ ಗುಪ್ತವಾಗಿ ವಿಚಾರಣೆ ಮಾಡಲಾಗುತ್ತಿದೆ. ಮಕ್ಕಳು ಯಾವುದೇ ರೀತಿಯ ದೌರ್ಜನ್ಯಗಳಾದಾಗ ಮುಕ್ತವಾಗಿ ನ್ಯಾಯಾಲಯ ಇಲ್ಲವೇ ಪೊಲೀಸ್ ಠಾಣೆಗೆ
ಹಾಜರಾಗಿ ದೂರು ಅಥವಾ ಹೇಳಿಕೆ ನೀಡಬೇಕು. ಯಾವುದೇ ಭಯ ಬೇಡ ಎಂದು ಕಾನೂನು ಸೇವಾ ಸದಸ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ತಿಳಿಸಿದರು.