Advertisement

ಎನ್‌ಆರ್‌ಬಿಸಿ ಆಧುನೀಕರಣ ಕಾಮಗಾರಿ ಕಳಪೆ: ಸಂಸದ ಗರಂ

05:20 PM Sep 20, 2022 | Team Udayavani |

ಲಿಂಗಸುಗೂರು: ತಾಲೂಕಿನ ಗುರುಗುಂಟಾ ಗ್ರಾಮದ ಬಳಿ ನಾರಾಯಣಪುರ ಬಲದಂಡೆ ಮುಖ್ಯ ನಾಲೆ ಹಾಗೂ 7ಎ ವಿತರಣಾ ನಾಲೆಯಲ್ಲಿ ಭೋಂಗಾ ಬಿದ್ದಿದ್ದು, ಸ್ಥಳಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಗರಂ ಆದರು. ಕಾಮಗಾರಿ ಗುಣಮಟ್ಟದ ಅಸಮಾಧಾನ ವ್ಯಕ್ತಪಡಿಸಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಎಡಿಬಿ ಯೋಜನೆಯಲ್ಲಿ ಕೇಂದ್ರ ಹಾಗೂ ರಾಜ್ಯದ ತಲಾ ಶೇ.50ರಷ್ಟು ಸೇರಿದಂತೆ ಒಟ್ಟು 3800 ಕೋಟಿ ರೂ. ಅನುದಾನದಲ್ಲಿ ಎನ್‌ಆರ್‌ಬಿಸಿ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿ ಕಳೆದ ವರ್ಷದಿಂದ ನಡೆದಿದೆ. ಈಚೆಗೆ ಸುರಿದ ಮಳೆನೀರು ನಾಲೆಗೆ ಹರಿದು ಮುಖ್ಯ ನಾಲೆಯಲ್ಲಿ ಕೊರಕಲಿ ಬಿದ್ದು ರೈತರ ಜಮೀನುಗಳಿಗೆ ನಾಲೆ ನೀರು ಹರಿದು ಬೆಳೆಗಳು ನಾಶವಾಗಿವೆ. 3 ಸಾವಿರ ಕ್ಯೂಸೆಕ್‌ ನೀರು ಹರಿಯುವ ಸಾಮರ್ಥ್ಯದ ಮುಖ್ಯ ನಾಲೆಯಲ್ಲಿ ಸದ್ಯಕ್ಕೆ 1200 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಮಳೆನೀರಿಗೆ ನಾಲೆಯಲ್ಲಿ ಬಿರುಕು ಕಂಡಿದೆ ಎಂದರೆ ಕಾಮಗಾರಿ ಎಷ್ಟರಮಟ್ಟಿಗೆ ಗುಣಮಟ್ಟದಿಂದ ಕೂಡಿದೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. 20 ವರ್ಷದ ವರೆಗೆ ನಾಲೆ ಬಾಳಿಕೆ ಬರಬೇಕು. ಆದರೆ ಕಾಮಗಾರಿ ಮುಗಿದು ಕೆಲವೇ ತಿಂಗಳಲ್ಲಿ ದುಸ್ಥಿತಿಗೆ ಕಾರಣವಾಗಿದೆ. ಈ ಬಗ್ಗೆ ಈಗಾಗಲೇ ಸಿಎಂ ಹಾಗೂ ಜಲಸಂಪನ್ಮೂಲ ಸಚಿವರ ಗಮನಕ್ಕೆ ತರಲಾಗಿದೆ. ಆದರೂ ಮತ್ತೆ ಇದೇ ರೀತಿ ಕಾಮಗಾರಿ ಮುಂದುವರಿದರೆ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ದೂರು ನೀಡಿ ಅವರನ್ನು ಇಲ್ಲಿಗೆ ಕರೆದುಕೊಂಡು ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದರು.

ಎನ್‌ಆರ್‌ಬಿಸಿ ಆಧುನೀಕರ ಹಾಗೂ ನಂದವಾಡಗಿ ಯೋಜನೆ 6 ಸಾವಿರ ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಇದಕ್ಕಾಗಿ ಸರ್ಕಾರದ ಅಧಿಕೃತ ಭೂಮಿಪೂಜೆ ಕಾರ್ಯಕ್ರಮ ನಡೆದಿಲ್ಲ. ಇದರಿಂದ ದೊಡ್ಡ ಮೊತ್ತ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇರದ ಕಾರಣ ಇದೊಂದು ಖಾಸಗಿ ಕಾಮಗಾರಿಯಂತೆ ಆಗಿದೆ. ಇದರಿಂದ ಗುತ್ತಿಗೆದಾರರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಸರ್ಕಾರದಿಂದ ಭೂಮಿಪೂಜೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ವೇಳೆ ನಾರಾಯಣಪುರ ವೃತ್ತದ ಅಧೀಕ್ಷಕ ಅಭಿಯಂತರ ಸಂಜೀವ ಹುಲಕಾಯಿ, ಸಹಾಯಕ ಆಯುಕ್ತ ರಾಹುಲ್‌ ಸಂಕನೂರು, ಕಾರ್ಯನಿರ್ವಾಹಕ ಅಭಿಯಂತರ ಶಂಕರ ಕಿಮಾವತ್‌, ಎಇಇಗಳಾದ ಮಲ್ಲಿಕಾರ್ಜುನ, ಆರ್‌.ಡಿ. ಬಿರಾದರ, ವಿದ್ಯಾಧರ, ಶಿವಕುಮಾರ, ಬೈಲಪ್ಪ, ಮುಖಂಡರಾದ ರಾಜಾ ಸೋಮನಾಥ ನಾಯಕ, ಮೌನೇಶ ನಾಯಕ ಹಾಗೂ ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next