ಅನೀಶ್ ತೇಜಶ್ವರ್ ನಾಯಕ, ನಿರ್ಮಾಪಕರಾಗುವುದರ ಜೊತೆಗೆ ಗಾಯಕರೂ ಆಗಿದ್ದಾರೆ. ಹೌದು, ಹೀರೋ ಆಗಿದ್ದ ಅನೀಶ್ “ವಾಸು – ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ನಿರ್ಮಾಪಕರಾದರು. ಈಗ ಅದೇ ಚಿತ್ರದಲ್ಲಿ ಹಾಡುವ ಮೂಲಕ ಗಾಯಕರೂ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅನೀಶ್ ತೇಜಶ್ವರ್ ಹಾಡಿದ್ದಾರೆ.
“ಅಲೆಮಾರಿ’ ಸಂತು ಬರೆದ “ಇವನೊಬ್ಬ ಪೊರ್ಕಿ, ಇವನೊಬ್ಬ ಕಂತ್ರಿ… ವಾಸು ಬಂದ ದಾರಿ ಬಿಡಿ…’ ಎಂಬ ಹಾಡಿಗೆ ಅನೀಶ್ ಧ್ವನಿಯಾಗಿದ್ದಾರೆ. ಅಜನೀಶ್ ಸಂಗೀತದಲ್ಲಿ ಮೂಡಿ ಬಂದ ಈ ಹಾಡನ್ನು ಇತ್ತೀಚೆಗೆ ಅಜನೀಶ್ ಅವರ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.
ಅಷ್ಟಕ್ಕೂ ಈ ಹಾಡನ್ನು ಹಾಡಬೇಕೆಂಬ ಯೋಚನೆ ಅನೀಶ್ ಅವರಿಗಿರಲಿಲ್ಲವಂತೆ. ಇದೊಂದು ಹಾಡು ಮಾತ್ರ ಬಾಕಿ ಇದ್ದುದರಿಂದ, ಯಾರಿಂದ ಹಾಡಿಸಬೇಕು, ಯಾವಾಗ ಹಾಡಿಸಬೇಕು ಎಂಬ ಚರ್ಚೆ ನಡೆಯುತ್ತಿರುವಾಗ, “ಬೇಗನೇ ಯಾರಿಂದನಾದರೂ ಹಾಡಿಸಿ, ಇಲ್ಲಾ ಅಂದ್ರೆ, ನಾನೇ ಹಾಡಲಾ?’ ಎಂದು ಅನೀಶ್ ಹೇಳಿದ್ದಾರೆ. ಹಾಗೆ ಹೇಳಿದ್ದೇ ತಡ, ಅಜನೀಶ್ ಲೋಕನಾಥ್ ತಡಮಾಡದೆ, ಸ್ಟುಡಿಯೋಗೆ ಕರೆಸಿ, ಹಾಡಿ ಅಂದಿದ್ದಾರೆ. ಸಾಂಗ್ ಚೆನ್ನಾಗಿ ಮೂಡಿಬಂದರೆ ಮಾತ್ರ ಇಟ್ಟುಕೊಳ್ಳೋಣ, ಇಲ್ಲವಾದರೆ ಬೇಡ ಎಂಬ ತೀರ್ಮಾನಕ್ಕೆ ಬಂದು, ಅನೀಶ್ ತೇಜಶ್ವರ್ ಹಾಡಿದ್ದಾರೆ.
ಕೇವಲ ಎರಡು ಗಂಟೆಯಲ್ಲೇ ಆ ಹಾಡು ಮುಗಿಸಿಬಿಟ್ಟಿದ್ದಾರೆ. ಅದೊಂದು ಪೆಪ್ಪಿ ನಂಬರ್ ಆಗಿದ್ದರಿಂದ ಜೋಶ್ನಲ್ಲೇ ಹಾಡಿದ್ದಾರೆ. ಅದು ಅಜನೀಶ್ಗೂ ಇಷ್ಟವಾಗಿದೆ. ಹೀರೋ ಇಂಟ್ರಡಕ್ಷನ್ ಸಾಂಗ್ಗೆ ಅವರೇ ಧ್ವನಿಯಾಗಿರುವುದರಿಂದ ಸಹಜವಾಗಿಯೇ ಅವರಿಗೆ ಖುಷಿ ಇದೆ. ಈ ಹಾಡನ್ನು ಮುಂದಿನವಾರ ಬಿಡುಗಡೆ ಮಾಡಲು ಅನೀಶ್ ಯೋಚಿಸಿದ್ದಾರೆ.
ಅಂದಹಾಗೆ, ಚಿತ್ರ ಈಗ ಸೆನ್ಸಾರ್ ಅಂಗಳದಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ವಾಸು’ ಜುಲೈನಲ್ಲೇ ಬರುವ ಸಾಧ್ಯತೆ ಇದೆ. ಇಲ್ಲವಾದರೆ, ಆಗಸ್ಟ್ ಮೊದಲ ವಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣವಿದೆ. ನಿಶ್ವಿಕಾ ನಾಯ್ಡು ನಾಯಕಿ. ಉಳಿದಂತೆ ಅವಿನಾಶ್, ಗಿರೀಶ್, ಮಂಜುನಾಥ್ ಹೆಗಡೆ, ಅರುಣ ಬಾಲರಾಜ್, ದೀಪಕ್ ಶೆಟ್ಟಿ ಇತರರು ನಟಿಸಿದ್ದಾರೆ. ಅಜಿತ್ ಉಗ್ಗಿನ್ ವಾಸನ್ ಈ ಚಿತ್ರದ ನಿರ್ದೇಶಕರು.