Advertisement

ಈಗ ಆನ್‌ಲೈನ್‌ ಪ್ರಚಾರದ ಹವಾ; ಉ.ಪ್ರ, ಗೋವಾದಲ್ಲಿ ಡಿಜಿಟಲ್‌ ಪ್ರಚಾರ ಶುರು

09:09 PM Jan 22, 2022 | Team Udayavani |

ನವದೆಹಲಿ: ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ದೊಡ್ಡ ಪ್ರಮಾಣದ ರ್ಯಾಲಿ, ಸಾರ್ವಜನಿಕ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗ ಜ.31ರ ವರೆಗೆ ನಿಷೇಧ ಹೇರಿದೆ.

Advertisement

ಹೀಗಾಗಿ ಪ್ರಮುಖವಾಗಿ ಉತ್ತರ ಪ್ರದೇಶ ಮತ್ತು ಗೋವಾಗಳಲ್ಲಿ ಆನ್‌ಲೈನ್‌ ಪ್ರಚಾರ ಬಿರುಸಾಗಿಯೇ ಶುರವಾಗಿದೆ. ಅದಕ್ಕೆ ಪೂರಕವಾಗಿ ಲಕ್ನೋದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಬಿಜೆಪಿಯ ವಿಡಿಯೋ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್‌, 2017ಕ್ಕಿಂತ ಮೊದಲು ರಾಜ್ಯದ ಜನರು ಉದ್ಯಮಿಗಳು ಮತ್ತು ಪ್ರಜೆಗಳು ಬೇರೆಡೆಗೆ ವಲಸೆ ಹೋಗುತ್ತಿದ್ದರು. ಆದರೆ, ಈಗ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿದೆ. ಉತ್ತರ ಪ್ರದೇಶ ದೇಶದಲ್ಲಿಯೇ ಪ್ರಬಲ ಅರ್ಥ ವ್ಯವಸ್ಥೆ ಹೊಂದಿರುವ ರಾಜ್ಯವಾಗಿ ಮಾರ್ಪಾಡಾಗುವತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ.

ವ್ಯಾನ್‌ನಲ್ಲಿ ಏನಿರಲಿದೆ?
ಸಬ್‌ ಕಾ ಸಾಥ್‌ ಮತ್ತು ಸಬ್‌ ಕಿ ವಿಕಾಸ್‌ ಎಂಬ ಘೋಷಣೆಯ ಅನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ಬಗ್ಗೆ ವಿಡಿಯೋ ಪ್ರದರ್ಶಿಸಲಾಗುತ್ತದೆ. ಅದಕ್ಕಾಗಿ ಎಲ್‌ಇಡಿ ಮಾನಿಟರ್‌ ಗಳನ್ನೂ ವ್ಯಾನ್‌ಗಳಲ್ಲಿ ಅಳವಡಿಸಲಾಗಿದೆ. ಎಲ್ಲಾ 403 ಕ್ಷೇತ್ರಗಳಿಗೆ ಪ್ರಚಾರ ವ್ಯಾನ್‌ಗಳು ತೆರಳಲಿವೆ.

ಗೋವಾದಲ್ಲಿ ಆನ್‌ಲೈನ್‌ ಪ್ರಚಾರ:
ಬೀಚ್‌ ರಾಜ್ಯ ಗೋವಾದಲ್ಲಿ ಪ್ರಮುಖ ಪಕ್ಷಗಳು ಚುನಾವಣಾ ಆಯೋಗದ ನಿರ್ದೇಶನದ ಹಿನ್ನೆಲೆಯಲ್ಲಿ ಆನ್‌ಲೈನ್‌ ಪ್ರಚಾರಕ್ಕೆ ಶುರು ಮಾಡಿವೆ. ವಾಟ್ಸ್‌ಆ್ಯಪ್‌ ಗ್ರೂಪ್‌, ಇನ್‌ಸ್ಟಾ ಗ್ರಾಂ ರೀಲ್‌ಗ‌ಳು, ಫೇಸ್‌ಬುಕ್‌ನಲ್ಲಿ ಸಂವಾದಗಳತ್ತ ಮುಖ ಮಾಡಿವೆ. ಅದಕ್ಕೆ ಪೂರಕವಾಗಿ ಮನೆ ಮನೆ ಪ್ರಚಾರ ನಡೆಸಲಾರಂಭಿಸಿವೆ. ಬಿಜೆಪಿ, ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಶಿವಸೇನೆ, ಎನ್‌ಸಿಪಿಗಳು ಡಿಜಿಟಲ್‌ ಪ್ರಚಾರಕ್ಕೆ ಮುಂದಾಗಿವೆ. ಇದೊಂದು ಸವಾಲಿನ ಪ್ರಚಾರವಾಗಿದೆ. ಹಿಂದಿನ ದಿನಗಳಲ್ಲಿ ಇಂಥ ಪ್ರಚಾರವನ್ನು ಯಾವ ಪಕ್ಷವನ್ನೂ ಕೈಗೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸುವ ಬಗ್ಗೆ ನಾವು ಕಲಿಯುವುದರ ಜತೆಗೆ ಮತದಾರರಿಗೂ ಅರಿವು ಮೂಡಿಸಬಹುದು ಎಂದು ಗೋವಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಸವಾಯ್‌ಕರ್‌ ಹೇಳಿದ್ದಾರೆ.

Advertisement

ಆಪ್‌ ವತಿಯಿಂದ ಗೋವಾಕ್ಕಾಗಿಯೇ 20 ಮಂದಿಯನ್ನು ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ನೇಮಕ ಮಾಡಿದೆ. ತೃಣಮೂಲ ಕಾಂಗ್ರೆಸ್‌ ಚುನಾವಣಾ ವ್ಯೂಹಚನೆಕಾರ ಪ್ರಶಾಂತ್‌ ಕಿಶೋರ್‌ 2,500 ಮಂದಿ ಸಿಬ್ಬಂದಿಯನ್ನು ಜಾಲತಾಣ ನಿರ್ವಹಣೆಗೆ ನಿಯೋಜಿಸಿದೆ. ವಾಟ್ಸ್‌ಆ್ಯಪ್‌ ಮೂಲಕ ಶೇ.30ರಷ್ಟು ಮತದಾರರನ್ನು ತಲುಪಲು ಯತ್ನಿಸಿದೆ.

ಕೈರಾನಾದಲ್ಲಿ ಶಾ ಪ್ರಚಾರ
ಪಶ್ಚಿಮ ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮನೆ ಮನೆ ಪ್ರಚಾರ ಶುರು ಮಾಡಿದ್ದಾರೆ. ಸದ್ಯ ಜಿಲ್ಲೆಯ ಜನರು ಭೀತಿಯಿಂದ ಇಲ್ಲ. ಈ ಪ್ರದೇಶದ ಜನರು ಅಭಿವೃದ್ಧಿ ಮತ್ತು ನೆಮ್ಮದಿಯನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಅದನ್ನು ಪೂರೈಸಿದೆ ಎಂದರು ಶಾ. ತುಂತುರು ಮಳೆ ಸುರಿದ ಕಾರಣದಿಂದ ಅಲ್ಲೆಲ್ಲ ಚಳಿಯ ವಾತಾವರಣ ಇತ್ತು. ಅದನ್ನೆಲ್ಲ ಲೆಕ್ಕಿಸದೆ, ಅವರು, ಮನೆ ಮನೆ ಪ್ರಚಾರ ನಡೆಸಿದರು. ಕೈರಾನಾದಲ್ಲಿ ನಡೆದಿದ್ದ ಗಲಭೆಯ ವೇಳೆ ನೊಂದಿದ್ದ ಕುಟುಂಬಗಳ ಸದಸ್ಯರನ್ನೂ ಅವರು ಭೇಟಿ ಮಾಡಿದರು.

ಬಿಎಸ್‌ಪಿ ಪಟ್ಟಿ:
ಫೆ.14ರಂದು ನಡೆಯಲಿರುವ 2ನೇ ಹಂತದ ಚುನಾವಣೆಗೆ ಬಿಎಸ್‌ಪಿ 51 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಶೇ.70ರಷ್ಟು ಹೊಸಬರು:
ಉ.ಪ್ರ.ದಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪೈಕಿ ಶೇ.70 ಮಂದಿ ಹೊಸಬರೇ ಆಗಿದ್ದಾರೆ. ಇದರ ಜತೆಗೆ ಕೆಲವು ಮಂದಿ ಹಿರಿಯ ಮುಖಂಡರಿಗೆ ಕೂಡ ಟಿಕೆಟ್‌ ನೀಡಿದೆ. ಇದುವರೆಗೆ ಘೋಷಣೆ ಮಾಡಿರುವ 166 ಮಂದಿಯ ಪೈಕಿ 119 ಮಂದಿ ಅಭ್ಯರ್ಥಿಗಳು ಮೊದಲ ಬಾರಿಗೆ ಚುನಾವಣೆ ಎದುರಿಸುವವರಾಗಿದ್ದಾರೆ.

ಏಕಾಂಗಿಯಾಗಿ ಸ್ಪರ್ಧೆ:
ಬಿಹಾರದಲ್ಲಿ ಬಿಜೆಪಿ ಜತೆಗೆ ಮೈತ್ರಿಯಲ್ಲಿರುವ ಜೆಡಿಯು ಉ.ಪ್ರ.ದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿದೆ. ಚುನಾವಣಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿಯ ಬಳಿ ಪ್ರಸ್ತಾಪ ಮಾಡಿದ್ದರೂ, ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ, ಪಕ್ಷ ಏಕಾಂಗಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿತು. ಒಟ್ಟು 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ನಾಯಕ ಲಲನ್‌ ಸಿಂಗ್‌ ಹೇಳಿದ್ದಾರೆ.

ಕರ್ಹಾಲ್‌ನಿಂದಲೇ ಸ್ಪರ್ಧೆ:
ಮೈನ್‌ಪುರಿ ಜಿಲ್ಲೆಯ ಕರ್ಹಾಲ್‌ನಿಂದಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅವರು ಶನಿವಾರ ಹೇಳಿಕೊಂಡಿದ್ದಾರೆ. ಜತೆಗೆ ಅಭ್ಯರ್ಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದಾರೆ.

ಶೇ.60 ಮಂದಿ ಪಕ್ಷಾಂತರಿಗಳು!
2017ರಿಂದ 2022ರ ವರೆಗೆ ಗೋವಾದಲ್ಲಿ 24 ಮಂದಿ ಶಾಸಕರು ಪಕ್ಷ ಬದಲಾಯಿಸಿಕೊಂಡಿದ್ದಾರೆ. ಈ ಮೂಲಕ ವಿಧಾನಸಭೆಯ ಒಟ್ಟು ಶೇ.60 ಮಂದಿ ಶಾಸಕರು ನಿಷ್ಠೆ ಬದಲಾಯಿಸಿದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇದೊಂದು ದಾಖಲೆಯಾಗಿದೆ ಎಂದು ಎಸೋಸಿಯೇಷನ್‌ ಆಫ್ ಡೆಮಾಕ್ರಾಟಿಕ್‌ ರಿಫಾಮ್ಸ್‌ì ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಪೈಕಿ ವಿಶ್ವಜಿತ್‌ ರಾಣೆ, ಸುಭಾಶ್‌ ಶಿರೋಡ್ಕರ್‌ ಮತ್ತು ದಯಾನಂದ ಸೋಪ್ಟೆ ಪ್ರಮುಖರಾಗಿದ್ದಾರೆ.

ಸುಲಭವಲ್ಲ:
ಶಿವಸೇನೆ ಮತ್ತು ಎನ್‌ಸಿಪಿ ಫೆ.14ರ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿವೆ. 1989ರಿಂದಲೇ ಶಿವಸೇನೆ ಗೋವಾದಲ್ಲಿದ್ದರೂ ಪಕ್ಷದ ಅಭ್ಯರ್ಥಿಗಳು ಠೇವಣಿಯನ್ನೂ ಉಳಿಸಿಕೊಂಡಿಲ್ಲ. 2017ರಲ್ಲಿ ಎನ್‌ಸಿಪಿ ಸ್ಪರ್ಧಿಸಿ 1 ಸ್ಥಾನದಲ್ಲಿ ಜಯ ಸಾಧಿಸಿತ್ತು. ಒಟ್ಟಾರೆಯಾಗಿ ಹೇಳುವುದಿದ್ದರೆ 2 ಪಕ್ಷಗಳಿಗೆ ರಾಜ್ಯದಲ್ಲಿ ಪ್ರಭುತ್ವ ಸಾಧಿಸಲು ಇದುವರೆಗೆ ಸಾಧ್ಯವಾಗಿಲ್ಲ.

ಕಾಂಗ್ರೆಸ್‌ಗೆ ಶಕ್ತಿ ತಂದ ಹರಕ್‌
ಉತ್ತರಾಖಂಡದ ಕಾಂಗ್ರೆಸ್‌ಗೆ ಮಾಜಿ ಸಚಿವರಾದ ಡಾ.ಹರಕ್‌ ಸಿಂಗ್‌ ರಾವತ್‌ ಮತ್ತು ಯಶ್ಪಾಲ್‌ ಆರ್ಯ ಸೇರ್ಪಡೆಯಾಗಿರುವುದು ಪಕ್ಷದ ಬಲವರ್ಧನೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ರಾವತ್‌ ಅವರು ಘರ್ವಾಲ್‌ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದರೆ, ಆರ್ಯ ಅವರು ಎಸ್‌ಸಿ ಸಮುದಾಯದ ಪ್ರಮುಖ ಮುಖಂಡ ಮತ್ತು ಕುಮಾನ್‌ನಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಈ ನಡುವೆ, ಬಿಜೆಪಿಯಿಂದ ಟಿಕೆಟ್‌ ವಂಚಿತರಾದವರು ಭಿನ್ನ ಧ್ವನಿಯನ್ನು ಹೊರಡಿಸಿದ್ದಾರೆ ಮತ್ತು ಸ್ವತಂತ್ರರಾಗಿ ಸ್ಪರ್ಧಿಸುವ ಎಚ್ಚರಿಕೆ ನೀಡಿದ್ದಾರೆ.

ಬನ್ನಿ ಧುರಿಯಿಂದಲೇ ಸ್ಪರ್ಧಿಸಿ: ಛನ್ನಿಗೆ ಸವಾಲು
ಪಂಜಾಬ್‌ನಲ್ಲಿ ಆಪ್‌ನ ಸಿಎಂ ಅಭ್ಯರ್ಥಿ ಭಗವಂತ್‌ ಸಿಂಗ್‌ ಮಾನ್‌ ಅವರು ಧುರಿಯಿಂದಲೇ ಸ್ಪರ್ಧೆ ಮಾಡಿ ಎಂದು ಹಾಲಿ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಅವರಿಗೆ ಸವಾಲು ಹಾಕಿದ್ದಾರೆ. ಛನ್ನಿ ಶಾಸಕರಾಗಿರುವ ಚಮ್‌ಕೌರ್‌ ಸಾಹಿಬ್‌ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ, ಅವರೇ ಧುರಿಗೆ ಬಂದು ಸ್ಪರ್ಧಿಸಲಿ ಎಂದು ಹೇಳಿದ್ದಾರೆ.

ಹಣ ಸಂಪಾದಿಸಿದ್ದಾರೆ:
ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಅವರ ಬಂಧುಗಳು ಅಕ್ರಮವಾಗಿ ಹಣ ಸಂಪಾದಿಸಿªದಾರೆ. ಅದಕ್ಕೆ ಇತ್ತೀಚೆಗೆ ಇ.ಡಿ. ನಡೆಸಿದ ದಾಳಿ ವೇಳೆ ಪತ್ತೆಯಾದ 8 ಕೋಟಿ ರೂ. ನಗದು ಸಾಕ್ಷಿ ಎಂದು ಶಿರೋಮಣಿ ಅಕಾಲಿ ದಳ ನಾಯಕ ಸುಖ್‌ಬೀರ್‌ ಸಿಂಗ್‌ ಬಾದಲ್‌ ಆರೋಪಿಸಿದ್ದಾರೆ.

ಆಯ್ಕೆಯೇ ಸರಿ ಇಲ್ಲ:
ಕಾಂಗ್ರೆಸ್‌ ಮತ್ತು ಆಪ್‌ನ ಸಿಎಂ ಅಭ್ಯರ್ಥಿಗಳು ಸರಿ ಇಲ್ಲ. ಹಾಲಿ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದರೆ, ಆಪ್‌ನ ಭಗವಂತ್‌ ಸಿಂಗ್‌ ಮಾನ್‌ ಅವರಿಗೆ ಮದ್ಯ ಸೇವಿಸುವ ಅಭ್ಯಾಸವಿದೆ ಎಂದು ಬಿಜೆಪಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next