Advertisement

ವಿಷಕಂಠ ಶಿವನ ವಾನಪ್ರಸ್ಥಕ್ಕೆ ಶಿವರಾಮನ ಸಾಕ್ಷ್ಯ

11:24 PM Nov 11, 2022 | Team Udayavani |

ನ. 14ರಿಂದ 20ರ ವರೆಗೆ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಸಹಕಾರಿ ತಣ್ತೀಗಳ ಬಗೆಗೆ ಚಿಂತನೆ ನಡೆಸುವ ಕಾಲವಿದು. ಮೊಳ ಹಳ್ಳಿ ಶಿವರಾಯರು, ಪೆರಾಜೆ ಶ್ರೀನಿವಾಸ ರಾಯರು, ಜಿ.ಎಸ್‌.ಆಚಾರ್‌, ವಾರಣಾಶಿ ಸುಬ್ರಾಯ ಭಟ್‌, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಬಂಟ್ವಾಳ ನಾರಾಯಣ ನಾಯಕ್‌ರಂತಹ ನಡೆ-ನುಡಿಗಳಲ್ಲಿ ಸಹಕಾರಿಗಳಾಗಿದ್ದವರನ್ನು ಸ್ಮರಿಸಲಾಗುತ್ತಿದೆ.

Advertisement

ಪೆರಾಜೆ ಶ್ರೀನಿವಾಸ ರಾಯರು ಸಹಕಾರ ಕ್ಷೇತ್ರದಲ್ಲಿ ದಿಗ್ಗಜರೆನಿಸಿದ ಇತ್ತೀಚಿನವರು. ಇವರ ಇಳಿವಯಸ್ಸಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಹಕಾರ ರಂಗದ ಸಮಾರಂಭಗಳಲ್ಲಿ ಆಹ್ವಾನಿಸಿ ಗೌರವ ಸಲ್ಲಿಸುತ್ತಿದ್ದಾಗ “ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಕುರಿತು ನೀವುಗಳೆಲ್ಲ ಮೆಚ್ಚುಗೆ ಸೂಚಿಸುತ್ತೀರಿ. ಇದರಲ್ಲಿ ನನ್ನ ಪಾಲು ಏನೂ ಇಲ್ಲ. ಇದೆಲ್ಲ ಗುರುಗಳಾದ ಮೊಳಹಳ್ಳಿ ಶಿವರಾಯರಿಗೆ ಸಲ್ಲುತ್ತದೆ. ಅವರು ಶಾಲಾ ವಿದ್ಯಾರ್ಥಿ ಹಂತದಲ್ಲಿಯೇ ನಮಗೆ ಸಹಕಾರ ತಣ್ತೀವನ್ನು ತಿಳಿಸುವ ಆಂದೋಲನ ನಡೆಸಿದ್ದರು. ಹೀಗಾಗಿ ನಾನು ನನ್ನ ಯಥಾಶಕ್ತಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ವಿನೀತರಾಗಿ ನುಡಿಯುತ್ತಿದ್ದರು. ಶಿವರಾಯರು ವಿದ್ಯಾರ್ಥಿದೆಸೆಯಲ್ಲಿಯೇ ಸಹಕಾರ ತತ್ತವನ್ನು ಪ್ರಸಾರ ಮಾಡುತ್ತಿದ್ದುದು ಮಾತ್ರವಲ್ಲ, ತಾನೂ ವಿದ್ಯಾರ್ಥಿದೆಸೆಯಲ್ಲಿರುವಾಗಲೇ ಸಮಾಜ ಸೇವೆಯಲ್ಲಿ ತೊಡಗಿದವರಾಗಿದ್ದರು.

“ಮಕ್ಕಳೇ, ತಲೆ ಮೇಲೆ ಧರಿಸಿರುವ ಗಾಂಧಿ ಟೋಪಿಯಿಂದ ನಿಮಗೆ ಎಲ್ಲಿಲ್ಲದ ಗೌರವ ದೊರೆಯುತ್ತದೆ. ಏಕೆಂದರೆ ಅದಕ್ಕೆ ಪಾವಿತ್ರ್ಯವಿದೆ. ಆ ಮೌಲ್ಯವನ್ನು ನೀವು ತಲೆಯ ಮೇಲೆ ಧರಿಸಿರುವಿರಿ ಎನ್ನುವ ಎಚ್ಚರವಿರಲಿ. ಆ ಎಚ್ಚರವೇ ನಿಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿಸಿ ಒಳ್ಳೆಯ ಕೆಲಸವನ್ನು ಮಾಡಿಸುತ್ತದೆ. ಹಾಗೆಯೇ ಶುಭ್ರವಾದದ್ದು ಸಹಕಾರಿ ತಣ್ತೀ. ಅದನ್ನು ಮನಸ್ಸಲ್ಲಿಟ್ಟು ಸಹಕಾರಿ ಕೆಲಸವನ್ನು ಮಾಡುವಾಗ ಸೇವಾ ಮನೋಭಾವವು ತಾನಾ
ಗಿಯೇ ಜಾಗೃತವಾಗಬೇಕು’ ಎಂದು ಶಿವರಾಯರು ಹೇಳುತ್ತಿದ್ದರು.

1930ರಿಂದ 70ರ ದಶಕದವರೆಗೆ ಪುತ್ತೂರಿನಲ್ಲಿದ್ದ ಹಿರಿಯ ಸಾಹಿತಿ ಡಾ| ಶಿವರಾಮ ಕಾರಂತರು ಅಲ್ಲಿ ನಡೆಸಿದ ಚಟುವಟಿಕೆಗಳು ವ್ಯಾಪಕ. “ಆ ಪ್ರದೇಶದಲ್ಲಿ ನಾನೇನು ಮಾಡಿದ್ದರೂ ಅದು ಅವರ ಪ್ರೇರಣೆ ಮತ್ತು ನೆರವುಗಳಿಂದ’ ಎಂದು “ಸ್ಮತಿಪಟಲದಿಂದ’ ಕೃತಿಯಲ್ಲಿ ಡಾ|ಕಾರಂತರು ದಾಖಲಿಸಿದ್ದಾರೆ.

1880ರ ಆ. 4ರಂದು ಜನಿಸಿದ ಶಿವರಾಯರು 1967ರ ಜು. 4ರಂದು ಚೆನ್ನೈಯಲ್ಲಿ ಕೀರ್ತಿಶೇಷ ರಾದರು. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಹಡಾcರು ಎಂಬಲ್ಲಿ ಶಿವರಾಯರ ಅಜ್ಜನವರ ಜಾಗವಿತ್ತು. ಪುತ್ತೂರಿಗೆ ಹೋದ ಮೇಲೂ ಮೊಳಹಳ್ಳಿಯವರೇ ಆದರು.

Advertisement

ಪುತ್ತೂರಿನಲ್ಲಿ ಯಾವುದೇ ಸಮಾಜಸೇವೆಗೆ ಹಣಕಾಸು ಒದಗಣೆಯಲ್ಲಿ ಶಿವರಾಯರ ಪಾತ್ರ ವಿರುತ್ತಿತ್ತು. ಯಾರಿಗೆ ಪತ್ರ ಕೊಟ್ಟರೂ ಮಾನ್ಯ ವಾಗುತ್ತಿತ್ತು. ಪ್ರಭಾವೀ ವಕೀಲರಾದರೂ ಅವರು ಅರ್ಪಿಸಿಕೊಂಡದ್ದು ಸಹಕಾರ ಕ್ಷೇತ್ರದಲ್ಲಿ. ಇದು ಅವರಿಗೆ ಬಡಜನರ ಸೇವೆಗೆ ಮಾರ್ಗವಾಗಿತ್ತು. ಜೀವನ ನಿರ್ವಹಣೆಗೆ ಕೈಗೊಂಡ ವೃತ್ತಿ ವಕಾಲತ್ತು ನೆಪಕ್ಕೆ ಮಾತ್ರ. ಎಷ್ಟೆಲ್ಲ ಸಾರ್ವಜನಿಕ ಕೆಲಸಗಳನ್ನು ಮಾಡಿದರು ಎಂದು ಹೇಳುವುದು ಕಷ್ಟ. ತಮ್ಮ ಆಯುರ್ಮಾನದ ಹೆಚ್ಚಿನ ಸಮಯ ವಿನಿ ಯೋಗಿಸಿದ್ದು ಹೊಟ್ಟೆಪಾಡಿನ ವಕೀಲ ವೃತ್ತಿಗಲ್ಲ. ಗ್ರಾಮ ಸೌಕರ್ಯ ಒದಗಿಸುವಾಗ ಯಾವ ತೊಡಕು ಬಂದರೂ ಅದನ್ನು ಪರಿಹರಿಸುವ ಜಾಣ್ಮೆ ಅವರಲ್ಲಿತ್ತು ಎಂದು ಡಾ|ಕಾರಂತರು ಬೆಟ್ಟು ಮಾಡುತ್ತಾರೆ.
ಭಾರತದಲ್ಲಿ ಸಹಕಾರ ಆಂದೋಲನ ಆರಂಭ ಗೊಂಡದ್ದು 1904ರ ಮಾರ್ಚ್‌ 23ರಂದು ಕಾಯಿದೆ ರೂಪದಲ್ಲಿ ಬಂದಾಗ. ಈ ತಣ್ತೀ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ ಎಂದು ಅರಿತು ಹಾಗೆ ಶಿವರಾಯರು ನಡೆದುಕೊಂಡರು. “ನಾನು ನಿನಗಾಗಿ, ನೀನು ನನಗಾಗಿ, ನಾವೆಲ್ಲರೂ ದೇಶಕ್ಕಾಗಿ’ ಎಂಬ ತಾತ್ತಿ$Ìಕ ನೆಲೆಗಟ್ಟಿನಲ್ಲಿ ಸಹಕಾರ ಸಂಘಗಳ ಬೆಳವಣಿಗೆಗೆ ಶ್ರಮಿಸಿದರು.

1909ರಲ್ಲಿ ಪುತ್ತೂರಿನಲ್ಲಿ ಸಹಕಾರಿ ರೂರಲ್‌ ಕ್ರೆಡಿಟ್‌ ಸೊಸೈಟಿ (ಈಗ ಪುತ್ತೂರು ಕೋ ಆಪರೇಟಿವ್‌ ಟೌನ್‌ ಬ್ಯಾಂಕ್‌ ಲಿ.,) ಮೂಲಕ ಬ್ಯಾಂಕ್‌ ಸೌಲಭ್ಯವನ್ನು ಒದಗಿಸಿದ ಶಿವರಾಯರು, ಸಹಕಾರ ಸಂಘಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸುವ ಉದ್ದೇಶವಿರಿಸಿಕೊಂಡು 1914ರಲ್ಲಿ ಪುತ್ತೂರಿನಲ್ಲಿ ದಕ್ಷಿಣ ಕನ್ನಡ ಜಿÇÉಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) ಸ್ಥಾಪಿಸಿದರು. (1925ರಲ್ಲಿ ಮಂಗಳೂರಿಗೆ ಸ್ಥಳಾಂತರಗೊಂಡಿತು). 1920ರಲ್ಲಿ ತಾಲೂಕು ಬೋರ್ಡ್‌ ಅಧ್ಯಕ್ಷ, ಜಿಲ್ಲಾ ಬೋರ್ಡ್‌ ಸದಸ್ಯರಾದರು. ಪುತ್ತೂರಿನ ಸರಕಾರಿ ಪ್ರೌಢಶಾಲೆ ಸಹಿತ ಹಳ್ಳಿಗಳಲ್ಲಿ ಹಲವು ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅವರು ಕಾರಣರು.

ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌, ದ್ರಾವಿಡ ಬ್ರಾಹ್ಮಣ ಸಹಕಾರಿ ಹಾಸ್ಟೆಲ್‌ ಸಂಘ, ಸಹಕಾರಿ ಸ್ಟೋರ್‌, ಧಾನ್ಯದ ಬ್ಯಾಂಕ್‌, ಮಹಿಳೆಯರ ಕೈಗಾರಿಕಾ ಸಂಘ, ಬಿಲ್ಡಿಂಗ್‌ ಸೊಸೈಟಿ ಸಹಿತ ಹಲವು ಸಹಕಾರಿ ಸಂಘಗಳನ್ನು ಅವರು ಪುತ್ತೂರಿನಲ್ಲಿ ಸ್ಥಾಪಿಸಿದರು. ಎರಡನೇ ಮಹಾಯುದ್ಧದ ಕಾಲದಲ್ಲಿ ತಲೆದೋರಿದ ಆಹಾರ ಧಾನ್ಯದ ಕೊರತೆಯಿಂದ ಜನ ಕಂಗಾಲಾಗಿದ್ದ ಸಂದರ್ಭದಲ್ಲಿ ಶಿವರಾಯರು 1943ರಲ್ಲಿ ದ.ಕ. ಸಹಕಾರ ಸಗಟು ಮಾರಾಟ ಸಂಘವನ್ನು (1971ರಲ್ಲಿ ಚಿಲ್ಲರೆ ಮಾರಾಟಕ್ಕಾಗಿ ಜನತಾ ಬಜಾರ್‌ ಆರಂಭ) ಸ್ಥಾಪಿಸಿದರು. ಇದರ ಮೂಲಕ ಲೆವಿ ಭತ್ತ ಸಂಗ್ರಹಿಸಿ ಸಾರ್ವಜನಿಕರಿಗೆ ಹಂಚಿದರು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅದರ ಕ್ರಮಬದ್ಧ ವಿತರಣೆಗೆ ಅಹೋರಾತ್ರಿ ಶ್ರಮಿಸಿದರು. ನಿಸ್ವಾರ್ಥ ಸೇವೆಯ ಮೂಲಕ ನಾಡಿಗೆ ಬಂದ ಭೀಕರ ಪರಿಸ್ಥಿತಿಯನ್ನು ಶಿವರಾಯರು ನಿಭಾಯಿಸಿದ್ದಕ್ಕೆ ಆಗಿನ ಮದ್ರಾಸ್‌ ರಾಜ್ಯ ಸರಕಾರ ಮೆಚ್ಚುಗೆ ಸೂಚಿಸಿತ್ತು.

ಈಗ ಕರಾವಳಿ ಭಾಗದ ಗ್ರಾಮಗ್ರಾಮಗಳಲ್ಲಿ ಬೇರು ಬಿಟ್ಟಿರುವ ಸಹಕಾರಿ ಚಳವಳಿಗೆ ಬೀಜಾಂಕುರವಾದದ್ದು ಶಿವರಾಯರಿಂದ. ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ದೇಶ ಮಟ್ಟದಲ್ಲಿ ಸಹಕಾರ ಸಪ್ತಾಹ ಆರಂಭಿಸಲು ಮುಖ್ಯ ಪ್ರೇರಕರು. ಒಂದು ಗ್ರಾಮದಲ್ಲಿ ಶಾಲೆ, ಸಹಕಾರ ಸಂಘ, ಗ್ರಾ.ಪಂ. ಅಗತ್ಯವೆಂದು ನೆಹರೂ ಸ್ವಾತಂತ್ರೊéàತ್ತರದಲ್ಲಿ ಅಭಿಪ್ರಾಯಪಟ್ಟು ಅದರಂತೆ ಮುನ್ನಡೆದರೆ, ಶಿವರಾಯರು ಇದಕ್ಕೂ ಹಿಂದೆ ಯೋಚಿಸಿ ಕಾರ್ಯಪ್ರವೃತ್ತರಾಗಿದ್ದರು.

ಶಿವರಾಯರಿಂದ ಹಲವರು ಸಹಕಾರದ ಪಾಠ ಕಲಿತು, ಅದರಿಂದ ಪ್ರಯೋಜನವನ್ನೂ ಪಡೆದು ಮೇಲೆ ಬಂದರು. ಕೊನೆಗೆ ಕೆಲವರ ಮನಸ್ಸಿನಲ್ಲಿ “ಈ ಮುದುಕ ನಮ್ಮ ತಲೆಯ ಮೇಲೆ ಇನ್ನೂ ಏಕೆ ಕುಳಿತಿರಬೇಕು? ಎಷ್ಟು ವರ್ಷ ಆತ ಹುದ್ದೆ ಯಲ್ಲಿರಬೇಕು?’ ಎಂಬ ದುಬುìದ್ಧಿ ಬೆಳೆಯಿತು. ಅದನ್ನರಿತ ಶಿವರಾಯರು ನೋವು ಹೊತ್ತು ಸಹಕಾರಿ ಸಂಸ್ಥೆಗಳಿಂದ ಕೈತೊಳೆದುಕೊಂಡು ಮದರಾಸಿನಲ್ಲಿದ್ದ ಮಗನ ಮನೆಗೆ ಹೋಗಿ ವಾನಪ್ರಸ್ಥ ನಡೆಸಿದರು. ಶಿವರಾಯರು ಇಲ್ಲದ ಪುತ್ತೂರು ಬರಡಾಗಿ ಕಂಡಿತು. ಪುತ್ತೂರನ್ನು ಬಿಡಲು ಇದು ಕಾರಣ ಎಂದೂ ಕಾರಂತರು ಬರೆದುಕೊಂಡಿದ್ದಾರೆ.

ಸಹಕಾರ ತಣ್ತೀದ ಪ್ರಕಾರ ಎಲ್ಲರೂ ಸಮಾನರು. ಇಲ್ಲಿ ವರಿಷ್ಠ, ಕನಿಷ್ಠ, ಸಬಲ, ದುರ್ಬಲ ಎಂಬಿತ್ಯಾದಿ ಭೇದ ಭಾವಗಳು ಇಲ್ಲ. ಇಲ್ಲಿ ಬೇಕಿರುವುದು ಪ್ರಾಮಾಣಿಕತೆ. ಸ್ವಾರ್ಥರಹಿತ ವ್ಯಕ್ತಿಗಳಿಂದ ಸಹಕಾರ ತಣ್ತೀ ಬಾಳುತ್ತದೆ. ಇಲ್ಲಿ ವ್ಯಕ್ತಿಯೂ ಸಮಷ್ಟಿಯೂ ಮುಖ್ಯ. ವ್ಯಕ್ತಿ ಶುದ್ಧವಾಗಿದ್ದಷ್ಟು ಸಮಷ್ಟಿಯ ಹಿತವು ಕಾಪಾಡಲ್ಪಡುತ್ತದೆ ಎನ್ನುವ ಶಿವರಾಯರ ಮಾತು ನಿನ್ನೆ, ಇಂದಿಗೆ ಮಾತ್ರವಲ್ಲ ಚಿರಕಾಲವೂ ಪ್ರಸ್ತುತ. ಎಲ್ಲ ಕ್ಷೇತ್ರಗಳವರು ಈ ಮಾತನ್ನು ನಿತ್ಯವೂ ಸ್ಮರಿಸಬೇಕು, ಅದರಂತೆ ನಡೆಯಬೇಕು.

-ಮಟಪಾಡಿ ಕುಮಾರಸ್ವಾಮಿ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next