Advertisement

ಕೊಳ್ಳೇಗಾಲದಲ್ಲಿ ಲಂಚ ಮುಕ್ತ ಜಾಗೃತಿ ಅಭಿಯಾನ

03:32 PM Sep 05, 2017 | |

ಕೊಳ್ಳೇಗಾಲ: ನಗರದ ತಾಲೂಕು ಕಚೇರಿಯ ಆವರಣದಲ್ಲಿ ಲಂಚಮುಕ್ತ ಜನ ಜಾಗೃತಿ ಅಭಿಯಾನ ಸೋಮವಾರ ಯಶಸ್ವಿಯಾಗಿ ನಡೆಯಿತು.

Advertisement

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ರವಿ ಕೃಷ್ಣರೆಡ್ಡಿ ನೇತೃತ್ವದಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡಿದ ತಂಡದ ಸದಸ್ಯರು, ತಾಲೂಕು ಕಚೇರಿಯ ಆವರಣದಲ್ಲಿರುವ ಸಾರ್ವಜನಿಕರ ಶೌಚಾಲಯ ಗಬ್ಬು ನಾರುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಶೌಚಾಲಯದಲ್ಲಿ ಸ್ವತ್ಛತೆ ಕಾಪಾಡಿಕೊಳ್ಳದ ಅಧಿಕಾರಿಗಳು ಇನ್ನೂ ಕುಂದು ಕೊರತೆಗಳನ್ನು ಎಷ್ಟರ ಮಟ್ಟಿಗೆ ನಿವಾರಣೆ ಮಾಡುತ್ತೀರಿ ಎಂದು ತಹಶೀಲ್ದಾರ್‌ ಕಾಮಾಕ್ಷಮ್ಮಗೆ ಪ್ರಶ್ನಿಸಿದರು. ಕೂಡಲೇ ಶುಚಿಗೊಳಿಸಿ, ಶುಚಿತ್ವ ಕಾಪಾಡುವಂತೆ ಮುಖಂಡರು ಮನವಿ ಮಾಡಿದರು.

ಎಲ್ಲಾ ಇಲಾಖೆಗಳಲ್ಲಿ ಪ್ರಮುಖವಾದ ಇಲಾಖೆ ಕಂದಾಯ ಇಲಾಖೆ. ತಾಲೂಕಿನ ವಿವಿಧ ಗ್ರಾಮಗಳಿಂದ ಹಲವು ಬಡಜನರು ದೂರುಗಳನ್ನು ತೆಗೆದುಕೊಂಡು ಬರುತ್ತಾರೆ. ಅವರನ್ನು ಹೆಚ್ಚು ಕಚೇರಿಗೆ ಅಲೆದಾಡಿಸದೇ, ಲಂಚ ಪಡೆಯದೇ ಕೆಲಸ ಮಾಡಿಕೊಡಬೇಕು ಎಂದು ಕಚೇರಿಯ ಸಿಬ್ಬಂದಿಗೆ ಸೂಕ್ತ ಸಂದೇಶ ರವಾನೆ ಮಾಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡಿದರು. 

ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗೆ ನಾಮಫ‌ಲಕ ಮತ್ತು ಅವರ ಹೆಸರಿನ ಐಡಿ ಕಾರ್ಡ್‌ ಧರಿಸಿಕೊಂಡು ಬರಬೇಕು. ಸಾರ್ವಜನಿಕರಿಗೆ ಸಿಬ್ಬಂದಿಗಳ ಮಾಹಿತಿ ಲಭ್ಯವಾಗಬೇಕು ಮತ್ತು ಸಾರ್ವಜನಿಕರನ್ನು ಅಲೆದಾಡಿಸದೆ ನಿಗದಿತ ಸಮಯದಲ್ಲಿ ಕೆಲಸಗಳನ್ನು ಸರಿಪಡಿಸಿ, ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕೆಂದು ಸೂಚನೆ ನೀಡಿದರು. 

ಹಣ ಕೇಳಬೇಡಿ: ಮಿನಿ ವಿಧಾನಸೌಧದ ಭವನದಲ್ಲಿ ಇರುವ ಸರ್ವೇ ಇಲಾಖೆಗೆ ದಾಳಿ ಮಾಡಿದ ತಂಡ ಜನರು ಮನವಿ ಪತ್ರವನ್ನು ನೀಡಿದ ಕೆಲವೇ ದಿನಗಳಲ್ಲಿ ಅವರ ಜಮೀನು, ಇನ್ನಿತರ ಭೂಮಿಯನ್ನು ಸರ್ವೇ ಮಾಡಬೇಕು. ಸರ್ವೇ ಕೆಲಸಕೆಂದು ಬರುವ ಸಾರ್ವಜನಿಕರಿಂದ ಯಾವುದೇ ಕಾರಣಕ್ಕೂ ಹಣ ಸುಲಿಗೆ ಮಾಡಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

Advertisement

ಲೋಕಾಗೆ ದೂರು: ಸರ್ವೆ ಅಧಿಕಾರಿಗಳು ಲಂಚಕ್ಕೆ ಒತ್ತಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದ ಕೂಡಲೇ ಅಂತಹವರ ವಿರುದ್ಧ ಲೋಕಾಯುಕ್ತರಲ್ಲಿ ದೂರು ಸಲ್ಲಿಸಲಾಗುವುದೆಂದು ತಿಳಿಸಿದರು.

ನಂತರ ಉಪ ಖಜಾನೆಗೆ ಭೇಟಿ ನೀಡಿದ ಅವರು, ಈಗಾಗಲೇ ಉಪ ಖಜಾನೆಯ ಅಧಿಕಾರಿಗಳು ಬಡಾವಣೆ ಮಾಡಿಕೊಡಲು ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದ್ದು, ಯಾರಿಂದಲೂ ಹಣಕ್ಕೆ ಒತ್ತಾಯ ಮಾಡಬಾರದು, ಎಂದು ಖಜಾನೆಯ ಅಧಿಕಾರಿ ಸುಲೋಚನಗೆ ಸಲಹೆ ನೀಡಿದರು.

ಆಸ್ಪತ್ರೆ: ವೇದಿಕೆಯ ತಂಡವು ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಅಪಾರ ಸಂಖ್ಯೆಯಲ್ಲಿ ರೋಗಿಗಳು ಜಮಾವಣೆ ಗೊಂಡಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿ ಸಾಕಷ್ಟು ರೋಗಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಸರ್ಕಾರದಿಂದ ಎಲ್ಲಾ ಔಷಧಿಗಳು ಸರಬರಾಜು ಆಗುತ್ತಿದ್ದು, ರೋಗಿಗಳಿಗೆ ಸಂಪೂರ್ಣ ಬಳಕೆಯಾಗಬೇಕು ಮತ್ತು ರೋಗಿಗಳಿಂದ ಯಾವುದೇ ತರಹದ ಹಣ ಸುಲಿಗೆ ಮಾಡಬಾರದು.ಆಸ್ಪತ್ರೆ ಸಂಪೂರ್ಣ ಸ್ವತ್ಛತೆಗೆ ಆದ್ಯತೆ ನೀಡಬೇಕೆಂದು ವೈದ್ಯರಿಗೆ ಮನವಿ ಮಾಡಿದರು.

ಉಪ ನೊಂದಾಧಿಕಾರಿಗಳ ಕಚೇರಿ: ಇಲ್ಲಿನ ಉಪ ನೋಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ದಂಧೆ ದಿನನಿತ್ಯ ನಡೆಯುತ್ತಿದೆ. ರಿಯಲ್‌ ಎಸ್ಟೇಟ್‌ನ ಹಾವಳಿಯು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಒಂದು ಆಸ್ತಿಯನ್ನು ಹಲವಾರು ಜನರಿಗೆ ನೋಂದಾಯಿಸುವುದನ್ನು ತಡೆದು ಸೂಕ್ತ ಕಡತಗಳನ್ನು ಪರಿಶೀಲಿಸಬೇಕು. ಸಾರ್ವಜನಿಕರು ದಾಖಲೆ ಪಡೆಯಲು ತಿಂಗಳುಗಟ್ಟಲೆ ಕಾಯಿಸಿ, ಸಾರ್ವಜನಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದು, ರಿಯಲ್‌ ಎಸ್ಟೇಟ್‌ ದಂಧೆಗೆ ಅವಕಾಶ ಕಲ್ಪಿಸಬಾರದು ಎಂದು ಮನವಿ ಮಾಡಿದರು.

ಸರ್ಕಾರ ಹೊರಡಿಸಿರುವ ಆದೇಶದಂತೆ ನಾಮಫ‌ಲಕ, ಸಕಾಲ ಇನ್ನಿತರ ಮಾಹಿತಿಗಳನ್ನು ನಮೂದಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ನೋಂದಾವಣೆ ಇಲಾಖೆಯ ಅಧಿಕಾರಿ ಮಹದೇವಯ್ಯಗೆ ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರಿಗೆ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ, ಈಗಾಗಲೇ ರಾಜ್ಯದ 150 ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಲಂಚ ಪಡೆಯುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿಸಿ, ಭ್ರಷ್ಟರಿಗೆ ತಕ್ಕ ಪಾಠ ಕಲಿಸಲಾಗಿದೆ. ವೇದಿಕೆಯ ಹೆಸರು ಹೇಳಿದ ಸಾರ್ವಜನಿಕರಿಗೆ ಹಲವಾರು ಇಲಾಖೆಗಳಲ್ಲಿ ದಿಢೀರನೇ ಕೆಲಸಗಳು ಆಗಿರುವ ಘಟನೆಗಳು ನಡೆದಿರುವುದು ಸಂಘಟನೆಯ ಹೋರಾಟಕ್ಕೆ ತಂದ ಜಯ ಎಂದು ತಿಳಿಸಿದರು.

ಉದ್ದೇಶ: ಸರ್ಕಾರಿ ಕೆಲಸಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ, ಮಾಹಿತಿ ಹಕ್ಕು ಮತ್ತು ಸಕಾಲ ಕಾಯ್ದೆಯ ಕುರಿತು ತರಬೇತಿ ನೀಡುವುದು, ಲಂಚ ಮತ್ತು ಭ್ರಷ್ಟಚಾರದ ಬಗ್ಗೆ ಲಭ್ಯವಾಗುವ ಮಾಹಿತಿಯನ್ನು ಲೋಕಾಯುಕ್ತ ಮತ್ತು ಎಸಿಬಿ ಸಂಸ್ಥೆಗಳಿಗೆ ನೀಡಿ, ಭ್ರಷ್ಟಾಚಾರ ನಿಮೂರ್ಲನೆ, ಭ್ರಷ್ಟರ ವಿರುದ್ಧ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿ, ಕಾನೂನಿನ ಹೋರಾಟ ಮಾಡುವುದು. ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಅರಣ್ಯ ಕನಿಜ ಸಂಪತ್ತುಗಳ ಉಳಿವಿಗಾಗಿ ಹೋರಾಡಲಾಗುವುದು ಎಂದು ವಿವರಿಸಿದರು.

ಮೂಲಭೂತ ಸೌಕರ್ಯ ಮತ್ತು ಸ್ಥಳೀಯರ ಕುಂದುಕೊರತೆಗಳ ಬಗ್ಗೆ ಹೋರಾಟ, ಸಾಮಾಜಿಕ ಹೋರಾಟಗಾರರು ಮತ್ತು ಅನ್ಯ ಸಂಘಟನೆಗಳ ಒಳಗೂಡಿ ಭ್ರಷ್ಟಚಾರದ ವಿರುದ್ಧ ಜಂಟಿ ಹೋರಾಟ ನಡೆಸುವುದೇ ವೇದಿಕೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು

ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಸ್‌.ವೆಂಕಟೇಶ್‌ ಪ್ರಸಾದ್‌, ಖಜಾಂಚಿ ಮಹೇಶ್‌, ರಾಜ್ಯ ಸಮಿತಿ ಸದಸ್ಯರಾದ ವೆಂಕಟೇಶ್‌, ರಾಜನಾಗ್‌, ಉದಯಸಿಂಹ, ಜಿಲ್ಲಾಧ್ಯಕ್ಷ ಮೋಹನ್‌, ಉಪಾದ್ಯಕ್ಷ ಪ್ರಭಾಕರ್‌, ಕಾರ್ಯದರ್ಶಿ ನಂಜುಂಡಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next