Advertisement

ಚುನಾವಣೆ-ರಾಜಕೀಯ ಸಭೆಗಿಲ್ಲದ ನಿರ್ಬಂಧ ನಮಗ್ಯಾಕೆ?ವೀಕೆಂಡ್‌ ಕರ್ಫ್ಯೂ ಬೆಂಬಲಿಸಲ್ಲ

06:40 PM Aug 27, 2021 | Team Udayavani |

ಕಲಬುರಗಿ: ಯಾವುದೇ ಲಾಜಿಕ್‌ ಇಲ್ಲದ ಅದರಲ್ಲೂ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಮಾರಕವಾಗಿರುವ ವಾರಾಂತ್ಯ ಕರ್ಫ್ಯೂಗೆ ಬೆಂಬಲಿಸುವುದಿಲ್ಲ. ಎಂದಿನಂತೆ ವ್ಯಾಪಾರ-ವಹಿವಾಟು ನಡೆಸುವ ಮುಖಾಂತರ ಡೋಂಟ್‌ ಕೇರ್‌ ಮಾಡುವುದಾಗಿ ಹೈದ್ರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತುಕೈಗಾರಿಕಾ ಸಂಸ್ಥೆ(ಎಚ್ಕೆಸಿಸಿಐ) ಹಾಗೂ ವಿವಿಧ ವ್ಯಾಪಾರದ ಸಂಘಗಳು ಜಂಟಿಯಾಗಿ ಎಚ್ಚರಿಕೆ ನೀಡಿವೆ.

Advertisement

ಚುನಾವಣೆ ನಡೆಯುತ್ತವೆ. ರಾಜಕೀಯ ಸಭೆಗಳು ನಡೆಯುತ್ತವೆ. ಬ್ಯಾಂಕ್‌ ಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲು ಅನುಮತಿಯಿದೆ. ಆದರೆ ಬರೀ ಸಣ್ಣಪುಟ್ಟ ವ್ಯಾಪಾರ, ವ್ಯವಹಾರಕ್ಕೆ ವಾರಾಂತ್ಯ ಕರ್ಫ್ಯೂ ಜಿಲ್ಲೆಯಲ್ಲಿ ಜಾರಿಗೆ ತರುವುದು ಅವೈಜ್ಞಾನಿಕ ಹಾಗೂ ಸಮಂಜಸವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್‌ ಕರ್ಫ್ಯೂ ಪಾಲಿಸುವುದಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಸುತ್ತೇವೆ ಎಂದು ಎಚ್ಕೆಸಿಸಿಐ ಅಧ್ಯಕ್ಷ ಪ್ರಶಾಂತ ಮಾನಕರ್‌, ಗೌರವ ಕಾರ್ಯದರ್ಶಿ ಶರಣಬಸಪ್ಪ ಎಂ. ಪಪ್ಪಾ, ಸರಾಫ್‌ ಬಜಾರ್‌ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ, ಹೊಟೇಲ್‌ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ್‌ ಮೆಂಡನ್‌, ಬಟ್ಟೆ ಮಾರಾಟ ವ್ಯಾಪಾರಿ ಸಂಘದ ಕಾರ್ಯದರ್ಶಿ ಆನಂದ ದಂಡೋತಿ ಖಡಕ್‌ ಎಚ್ಚರಿಕೆ ‌ ನೀಡಿದರು.

ಎಚ್ಕೆಸಿಸಿಐದಲ್ಲಿ ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಕಲಬುರಗಿಯಲ್ಲಿ ಪಾಸಿಟಿವಿಟಿ ಬಹಳ ಕಡಿಮೆಯಿದೆ. ಹೀಗಾಗಿ
ಇದೇ ಆಗಸ್ಟ್‌ 28 ಹಾಗೂ 29ರ ವಾರಾಂತ್ಯ ಕಪ್ಯೂìದಲ್ಲಿ ಎಂದಿನಂತೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವುದರ ಮುಖಾಂತರ ಜತೆಗೆ ಇತರ ಹೋರಾಟ ಕೈಗೊಳ್ಳುವುದರ ನಿಟ್ಟಿನಲ್ಲಿ ಸರ್ಕಾರಕ್ಕೆ ಸವಾಲು ಹಾಕುತ್ತೇವೆ ಎಂದು ಪ್ರಕಟಿಸಿದರು.

ನೆರೆಯ ಮಹಾರಾಷ್ಟ್ರದಲ್ಲಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಇಲ್ಲ. ಅಲ್ಲದೇ ರೈಲು, ಬಸ್‌ಗಳ ಮೂಲಕ ಸರಳವಾಗಿ ಮಹಾರಾಷ್ಟ್ರದಿಂದ ಬರಲಾಗುತ್ತಿದೆ. ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶಾತಿಗೆ ಯಾವುದೇ ನಿರ್ಬಂಧವಿಲ್ಲ. ಹೀಗಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿರುವ ವೀಕೆಂಡ್‌ ಕರ್ಫ್ಯೂಗೆ ಧಿಕ್ಕಾರ ಎಂದರು.

ಕಳೆದ ಎರಡು ವರ್ಷಗಳಿಂದ ವ್ಯಾಪಾರ ಇಲ್ಲದಿದ್ದಕ್ಕೆ ತೀವ್ರ ಸಂಕಷ್ಟಕ್ಕೆ ‌ ಒಳಗಾಗಿದ್ದೇವೆ. ಅಂಗಡಿ-ಮುಂಗಟ್ಟುಗಳ ಬಾಡಿಗೆ ಹಾಗೂ ವಿದ್ಯುತ್‌ ಬಿಲ್‌ ಕಟ್ಟಲಿಕ್ಕಾಗುತ್ತಿಲ್ಲ. ವ್ಯಾಪಾರ ಶನಿವಾರ ಹಾಗೂ ರವಿವಾರ ನಡೆಯುವುದೇ ಹೆಚ್ಚು.‌ ಈ ಎರಡು ದಿನ ಬಂದ್‌ ಮಾಡಿದರೆ ವ್ಯಾಪಾರಿಗಳಿಗೆ ನಷ್ಟ ಆ‌ಗುತ್ತದೆ. ಒಂದು ವೇಳೆ ಕರ್ಫ್ಯೂ ಜಾರಿ ಮಾಡುವುದಾದರೆ ಸೋಮವಾರ, ಮಂಗಳವಾರ ಈ ಎರಡು ದಿನ ಸಂಪೂರ್ಣ ಬಂದ್‌ ಮಾಡಲಿ.

Advertisement

ಎಲ್ಲವೂ ಕಾರ್ಯನಿರ್ವಹಿ‌ಸಿ ಬರೀ ಸಣ್ಣ ಪುಟ್ಟ ವ್ಯಾಪಾರಕ್ಕೆ ಬ್ರೇಕ್‌ ಹಾಕಿರುವುದು ಯಾವ ನ್ಯಾಯ. ಕೋವಿಡ್‌ ನಿಯಂತ್ರಣಕ್ಕೆ ಬೆಂಬಲವಿದೆ. ಆದರೆ ಎಲ್ಲವೂ
ಸುಗಮವಾಗಿ ನಡೆದು ತಮಗಷ್ಟೇ ನಿರ್ಬಂಧ ಹಾಕುತ್ತಿರುವುದು ಅನ್ಯಾಯ ಹಾಗೂ ಶೋಷಣೆಯ ಪರಮಾವಧಿಯಾಗಿದೆ.

ಪೊಲೀಸರಂತೂ ತಮ್ಮನ್ನು ಅತ್ಯಂತ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು. ಲಾಕ್‌ಡೌನ್‌ ವೇಳೆಯಲ್ಲಿ ರಾಜ್ಯದ ಯಾವುದೇ ನಗರ ಹಾಗೂ ಜಿಲ್ಲೆಯಲ್ಲಿ ಹಾಕಲಾಗದ ಕೆಎಡಿ ಕಾಯ್ದೆಯಡಿ 374ರ ಅಡಿ ವ್ಯಾಪಾರಸ್ಥರ ವಿರುದ್ಧ ಪ್ರಕರಣ ¨ ‌ದಾಖಲಿಸಲಾಗಿದೆ. ಈಗ ಪೊಲೀಸರು ಜಾಮೀನು ಪಡೆದುಕೊಳ್ಳಿ ಎಂದುಒತ್ತಡ ಹೇರುತ್ತಿದ್ದಾರೆ ಎಂದು ನೋವು ತೋಡಿಕೊಂಡರು.

ವೈನ್‌ಶಾಪ್‌ ಅಸೋಸಿಯೇಷನ್‌ ಉಪಾಧ್ಯಕ್ಷ ವಿ.ಪಿ. ರೆಡ್ಡಿ, ಮುಖ್ಯ ಕಾರ್ಯದರ್ಶಿ ವೆಂಕಟೇಶ ಕಡೇಚೂರು, ಪದಾಧಿಕಾರಿಗಳಾದ ಸಂತೋಷ ಲಂಗರ್‌, ರವೀಂದ್ರ ಮಾದಮಶೆಟ್ಟಿ ಮುಂತಾದವರಿದ್ದರು. ಮನೀಷ ಜಾಜು, ಸುಬಾಷ ಮಂಗಾಣೆ, ಸಂತೋಷ ಗಂಗಸಿರಿ ಮುಂತಾದವರಿದ್ದರು.

ಲಾಕ್‌ಡೌನ್‌ ವೇಳೆಯಲ್ಲಿ ಕಲಬುರಗಿಯಲ್ಲಿ ವ್ಯಾಪಾಸ್ಥರ ವಿರುದ್ಧ ರಾಜ್ಯದೆಲ್ಲೆಡೆ ಕೆಎಡಿ ಕೇಸ್‌ ಹಾಕಲಾಗಿದ್ದು,ವಾಪಸ್ಸುಪಡೆಯುವಂತೆ ಸಿಎಂ ಹಾಗೂಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದರೂ ಕ್ಯಾರೇ ಎನ್ನುತ್ತಿಲ್ಲ. ಇತ್ತ ಪೊಲೀಸ್‌ರು ಜಾಮೀನು ಪಡೆಯಿರಿ, ಇಲ್ಲವೇ ಕಾಯ್ದೆಯಡಿ ಕ್ರಮ ಎದುರಿಸಲು ಸಿದ್ಧರಾಗಿರಿ ಎಂದು ಬೆದರಿಸುತ್ತಿದ್ದಾರೆ. ಜಿಎಸ್‌ಟಿ ತುಂಬುವಂತೆ ದುಂಬಾಲು ಬೀಳಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಎಲ್ಲದಕ್ಕೂ ತೆರಿಗೆ ವಿನಾಯಿತಿ ನೀಡಲಾಗಿದೆ.ಆದರೆ ವ್ಯಾಪಾರಸ್ಥರಿಗೆ ನಯಾಪೈಸೆ ತೆರಿಗೆವಿನಾಯಿತಿ ನೀಡಲಾಗಿಲ್ಲ.
ಪ್ರಶಾಂತ ಮಾನಕರ್‌, ಅಧ್ಯಕ್ಷ,
ಶರಣುಪಪ್ಪಾ, ಗೌರವ ಕಾರ್ಯದರ್ಶಿ ಎಚ್‌ಕೆಸಿಸಿಐ

ಲಾಕ್‌ಡೌನ್‌ದಿಂದ ಎಲ್ಲ ಉದ್ಯಮ ನಷ್ಟಕ್ಕೆ ಒಳಗಾಗಿ ವ್ಯಾಪಾರಸ್ಥರು ಬದುಕು ಸಾಗಿಸುವುದೇ ದುಸ್ತರವಾಗಿದೆ. ಎಲ್ಲವೂ ಚಾಲು ಇದ್ದು, ವ್ಯಾಪಾರಕ್ಕಷ್ಟೇ ಕಡಿವಾಣ ಹಾಕಲಾಗುತ್ತಿದೆ. ತಮಗಾಗುತ್ತಿರುವ ನೋವಿನ ಬಗ್ಗೆ ಸಂಸದರು, ಶಾಸಕರ ಎದುರುಅಳಲು ತೋಡಿಕೊಂಡರೂ ಎಳ್ಳುಕಾಳಷ್ಟು ಸ್ಪಂದನೆ ದೊರಕಿಲ್ಲ. ಶನಿವಾರ-ರವಿವಾರ ಬದಲು ಸೋಮವಾರ-ಮಂಗಳವಾರ ದಿನ ಕರ್ಫ್ಯೂ ವಿಧಿಸಿ ಬ್ಯಾಂಕ್‌, ಸರ್ಕಾರಿ ಕಚೇರಿಗಳು ಸಹ ಬಂದ್‌ ಇರಲಿ.
ರಾಘವೇಂದ್ರ ಮೈಲಾಪುರ,
ಅಧ್ಯಕ್ಷ ಸರಾಪ್‌ ಸಂಘ, ಕಲಬುರಗಿ

ಮದುವೆಗೆ ಅನುಮತಿ ಕೊಡಲಾಗುತ್ತದೆ. ‌ ಆದ್ರೆ ಅವರು ಬಟ್ಟೆ ಎಲ್ಲಿ ಖರೀದಿ ಮಾಡಬೇಕು. ಎರಡು ವರ್ಷಗಳಿಂದ ಬಟ್ಟೆ ವ್ಯಾಪಾರ ನಡೆಯದ ಹಿನ್ನೆಲೆಯಲ್ಲಿ ಕೆಲವು ಬಟ್ಟೆಗಳು ಹಾಳಾಗುವ ಸಾಧ್ಯತೆಗಳೇ ಹೆಚ್ಚು. ಜಿಎಸ್‌ಟಿ ಕಟ್ಟುವುದು ಒಂದು ದಿನ ತಡ ಮಾಡುವಂತಿಲ್ಲ. ನಷ್ಟದ ನಡುವೆ ಕಾರ್ಮಿಕರಿಗೆ ಸಂಬಳ ನೀಡುವುದು ದುಸ್ತರವಾಗಿದೆ. ಹಲವು ಕ್ಷೇತ್ರಗಳಿಗೆ ರಿಯಾಯ್ತಿ ನೀಡಿರುವಂತೆ ವ್ಯಾಪಾರೋದ್ಯಮಕ್ಕೂ ರಿಯಾಯ್ತಿ ನೀಡಿ.
ಆನಂದ ದಂಡೋತಿ,
ಬಟ್ಟೆ ಮಾರಾಟ ವ್ಯಾಪಾರ ಸಂಘದ ಕಾರ್ಯದರ್ಶಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next