ಸಿರುಗುಪ್ಪ: ತಾಲೂಕಿನ 12 ಗ್ರಾಪಂ ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಕುಡಿಯುವ ನೀರೊದಗಿಸಲು ನಿರ್ಮಿಸಿರುವ ನೀರಿನ ತೊಟ್ಟಿಗಳಲ್ಲಿ ನೀರಿಲ್ಲದೆ ಜಾನುವಾರುಗಳ ಪಾಲಿಗೆ ಇದ್ದು ಇಲ್ಲದಂತಾಗಿವೆ.
ತಾಲೂಕಿನ 12 ಗ್ರಾಪಂ ವ್ಯಾಪ್ತಿಯ ಎಂ.ಸೂಗೂರು, ದೊಡ್ಡರಾಜು ಕ್ಯಾಂಪ್, ಮುದ್ದಟನೂರು, ಹೊಸ ಚನ್ನಪಟ್ಟಣ,
ಮಾಳಾಪುರ, ಗುಂಡಿಗನೂರು, ಹಾವಿನಹಾಳು, ಇಬ್ರಾಹಿಂಪುರ, ನಿಟ್ಟೂರು, ಉಡೇಗೋಳ, ನಡಿವಿ, ಸಿರಿಗೇರಿ ನಡಿವಿ ರಸ್ತೆ, ಗುಂಡಿಗನೂರಿನ ಕೆರೆ ಹತ್ತಿರ, ಕೊಂಚಿಗೇರಿ, ಸಿದ್ದರಾಂಪುರ, ರಾರಾವಿ, ಹಳೇಕೋಟೆ, ಶ್ರೀಧರಗಡ್ಡೆ, ನಾಗಲಾಪುರ ಗ್ರಾಮಗಳಲ್ಲಿ 40 ಸಾವಿರ ರೂ. ವೆಚ್ಚದಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದರೂ ದನಕರುಗಳಿಗೆ ಕುಡಿಯುವ ನೀರಿನ ಭಾಗ್ಯ ಸಿಕ್ಕಿಲ್ಲ.
ಇದಕ್ಕೆ ಮುಖ್ಯ ಕಾರಣ ದನಕುರುಗಳಿಗೆ ಕುಡಿಯುವ ನೀರಿಗಾಗಿ ಕಟ್ಟಿರುವ ತೊಟ್ಟಿಗಳಲ್ಲಿ ಗ್ರಾಪಂ ಸಿಬ್ಬಂದಿಗಳು ನೀರು ತುಂಬಿಸಿದರೆ, ಸಾರ್ವಜನಿಕರು ಈ ನೀರಿನಲ್ಲಿ ಸ್ನಾನ ಮಾಡುವುದು, ಬಟ್ಟೆ ತೊಳೆಯುತ್ತಿರುವುದರಿಂದ ನೀರಿನ ದಾಹದಿಂದ ದನಕರುಗಳು ಒದ್ದಾಡುವಂತಾಗಿವೆ.
ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಸಾರ್ವಜನಿಕರು ಈ ನೀರಿನ ತೊಟ್ಟಿಗಳನ್ನು ಬಳಸುವುದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವಂತಾಗಿದ್ದು, ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ.
ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಜಾನುವಾರು ನೀರಿನ ತೊಟ್ಟಿಗಳಿಗೆ ಸರಿಯಾಗಿ ನೀರು ಬಿಡುತ್ತಿಲ್ಲ.ಇನ್ನು
ಕೆಲವೆಡೆ ಸರಿಯಾಗಿ ನೀರು ಬಿಡುತ್ತಿದ್ದರೂ ಸಾರ್ವಜನಿಕರು ದನಕರುಗಳಿಗೆ ನೀರು ಕುಡಿಯಲು ಬಿಡುತ್ತಿಲ್ಲ. ಹೀಗಾಗಿ
ತಾಲೂಕಿನಲ್ಲಿ ದನಕರುಗಳಿಗಾಗಿ ಕಟ್ಟಿರುವ ಕುಡಿಯುವ ನೀರಿನ ತೊಟ್ಟಿಗಳು ದನಕರುಗಳ ಪಾಲಿಗೆ ಮರೀಚಿಕೆಯಾಗಿವೆ.
ತಾಲೂಕಿನಲ್ಲಿ 27 ಗ್ರಾಪಂಗಳಲ್ಲಿ ಈ ಯೋಜನೆ ಇನ್ನು ಜಾರಿಯಾಗಿಲ್ಲ. ಕೇವಲ 15 ಗ್ರಾಪಂಗಳಲ್ಲಿ ಮಾತ್ರ ಈ
ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ ಎಂದು ರೈತರು ಗಂಭೀರವಾಗಿ ಆರೋಪಿಸಿದ್ದಾರೆ.