Advertisement

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

11:32 AM Jan 14, 2022 | Team Udayavani |

ಸ್ಯಾಂಡಲ್‌ವುಡ್‌ನ‌ಲ್ಲಿ ಸಿನಿಪ್ರಿಯರಿಗೆ ಮತ್ತು ಕಲಾವಿದರಿಗೆ ಹಬ್ಬ ಮತ್ತು ಹುಟ್ಟುಹಬ್ಬ ಎರಡೂ ವಿಶೇಷವಾಗಿರುತ್ತವೆ. ಅನೇಕ ಚಿತ್ರತಂಡಗಳು ವರ್ಷದ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ತಮ್ಮ ಸಿನಿಮಾಗಳ ಮುಹೂರ್ತ, ಟೈಟಲ್‌ ಅನೌನ್ಸ್‌, ಫ‌ಸ್ಟ್‌ಲುಕ್‌ -ಪೋಸ್ಟರ್‌ ಲಾಂಚ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ರಿಲೀಸ್‌ ಮಾಡಲು ಪ್ಲಾನ್‌ ಹಾಕಿಕೊಂಡಿರುತ್ತವೆ.

Advertisement

ಪ್ರತಿವರ್ಷ ಬರುವ ಹತ್ತಾರು ಹಬ್ಬಗಳ ಸಂಭ್ರಮ ಚಿತ್ರರಂಗದಲ್ಲೂ ಅಷ್ಟರ ಮಟ್ಟಿಗೆ ಹೊಸಕಳೆ ತಂದುಕೊಡುತ್ತದೆ. ಇನ್ನು ಸಿನಿಪ್ರಿಯರಿಗೂ ಅಷ್ಟೇ, ಮನೆಯಲ್ಲಿ ಹಬ್ಬದ ವಾತಾವರಣದ ಜೊತೆಗೆ ಚಿತ್ರರಂಗದ ಇಂಥ ಚಟುವಟಿಕೆಗಳು ಹಬ್ಬದ ಸಂಭ್ರವನ್ನು ಇನ್ನಷ್ಟು ಹೆಚ್ಚಿಸುತ್ತಿರುತ್ತದೆ. ಅದರಲ್ಲೂ ವರ್ಷದ ಮೊದಲಿಗೆ ಬರುವ ಸಂಕ್ರಾಂತಿ ಹಬ್ಬದ ಜೋಶ್‌ ಜೋರಾಗಿಯೇ ಇರುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ, ಸಂಕ್ರಾಂತಿ ಹಬ್ಬ ಇಡೀ ಚಿತ್ರರಂಗ ರೀ-ಸ್ಟಾರ್ಟ್‌ ಮಾಡುವಂಥ ಹಬ್ಬ ಎಂದೇ ಹೇಳಬಹುದು. ವರ್ಷದ ಆರಂಭದಲ್ಲಿ ಶುರುವಾಗಲಿರುವ ಬಹುತೇಕ ಸಿನಿಮಾಗಳ ಮುಹೂರ್ತ, ಟೈಟಲ್‌ ಲಾಂಚ್‌, ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳ ಪ್ರಮೋಶನ್ಸ್‌ ಎಲ್ಲದಕ್ಕೂ ಸಂಕ್ರಾಂತಿಯಲ್ಲಿ ಚಾಲನೆ ಸಿಗುತ್ತಿತ್ತು. ಆದರೆ ಈ ಬಾರಿಯ ಸಂಕ್ರಾಂತಿ ಹಬ್ಬದಲ್ಲಿ ಅಂಥ ಸಂಭ್ರಮವಾಗಲಿ, ಜೋಶ್‌ ಆಗಲಿ ಚಿತ್ರರಂಗದಲ್ಲಿ ಕಾಣುತ್ತಿಲ್ಲ.

ಹೌದು, ಒಂದೆಡೆ ಒಮಿಕ್ರಾನ್‌ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ, ಮತ್ತೂಂದೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ನೈಟ್‌ ಕರ್ಫ್ಯೂ, ವೀಕೆಂಡ್‌ ಲಾಕ್‌ಡೌನ್‌ ಕೂಡ ಜಾರಿಯಾಗಿದೆ. ಸಭೆ, ಸಮಾರಂಭ, ಶಾಪಿಂಗ್‌ ಮಾಲ್‌, ಮಾರ್ಕೆಟ್‌, ಥಿಯೇಟರ್‌ ಎಲ್ಲದಕ್ಕೂ ನಿರ್ಬಂಧಿತ ಪ್ರವೇಶ ನೀಡಲಾಗುತ್ತಿದೆ. ಹೀಗಾಗಿ ವರ್ಷದ ಆರಂಭದಲ್ಲಿ ಎಲ್ಲರೂ ಸೇರಿ ಸಂಭ್ರಮಿಸಬೇಕಾದ ಸಂಕ್ರಾಂತಿ ಹಬ್ಬದ ವಾತಾವರಣವೇ ಕಳೆಕುಂದಿದೆ. ಇಂಥದ್ದೊಂದು ವಾತಾವರಣದ ಕರಿಛಾಯೆ ಚಿತ್ರರಂಗದ ಮೇಲೂ ಆವರಿಸಿದೆ.

ಇದನ್ನೂ ಓದಿ:ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್‌ ಭಯದ ವಾತಾವರಣ ಯಾವಾಗ ತಿಳಿಯಾಗುತ್ತದೆ, ಎಲ್ಲವೂ ಯಾವಾಗ ಮೊದಲಿನಂತಾಗುತ್ತದೆ ಎಂಬುದಕ್ಕೆ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ. ಎಲ್ಲವೂ ಸದ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಹೀಗಾಗಿ ಈ ಸಂಕ್ರಾಂತಿಗೆ ಮುಹೂರ್ತ ಆಚರಿಸಿಕೊಳ್ಳಬೇಕು, ತಮ್ಮ ಸಿನಿಮಾದ ಟೈಟಲ್‌ ಅನೌನ್ಸ್‌ ಮಾಡಬೇಕು, ತಮ್ಮ ಸಿನಿಮಾದ ಫ‌ಸ್ಟ್‌ಲುಕ್‌-ಪೋಸ್ಟರ್‌ ಬಿಡಬೇಕು, ಟೀಸರ್‌ – ಟ್ರೇಲರ್‌ ರಿಲೀಸ್‌ ಮಾಡಬೇಕು, ತಮ್ಮ ಸಿನಿಮಾದ ಹಾಡುಗಳನ್ನು ಆಡಿಯನ್ಸ್‌ಗೆ ಕೇಳಿಸಬೇಕು ಎಂಬ ಉತ್ಸಾಹದಲ್ಲಿದ್ದ ಅನೇಕ ಚಿತ್ರತಂಡಗಳು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿವೆ.

Advertisement

ಕೋವಿಡ್‌ ಪೂರ್ವದಲ್ಲಿ ಪ್ರತಿವರ್ಷ ಸಂಕ್ರಾಂತಿಗೆ ಏನಿಲ್ಲವೆಂದರೂ ಡಜನ್‌ಗೂ ಹೆಚ್ಚು ಹೊಸ ಸಿನಿಮಾಗಳು ಅನೌನ್ಸ್‌ ಆಗಿದ್ದ ಉದಾಹರಣೆಗಳಿದ್ದವು. ಹತ್ತಾರು ಸಿನಿಮಾಗಳ ಹೊಸ ಹೊಸ ಅಪ್‌ಡೇಟ್ಸ್‌ ಸಂಕ್ರಾಂತಿ ಹಬ್ಬಕ್ಕೆ ಸಿಗುತ್ತಿದ್ದರಿಂದ, ಸ್ಯಾಂಡಲ್‌ ವುಡ್‌ನ‌ಲ್ಲಿ ಹೊಸವರ್ಷದ ಜೊತೆಗೆ ಸಂಕ್ರಾಂತಿ ಸಂಭ್ರಮ ಕೂಡ ಡಬಲ್‌ ಆಗಿರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಅದೆಲ್ಲದಕ್ಕೂ ಕೋವಿಡ್‌ ಬ್ರೇಕ್‌ ಹಾಕಿದ್ದು, ಈ ಸಂಕ್ರಾಂತಿ ಕೂಡ ಹಿಂದಿನಂತೆ ಮಂಕಾ ಗಿದೆ. ಈ ಸಂಕ್ರಾಂತಿಯ ಉತ್ತರಾಯಣ ಪುಣ್ಯ ಕಾಲವಾದರೂ ಮಂಕಾಗಿರುವ ಚಿತ್ರ ರಂಗಕ್ಕೆ ಹೊಸ ಚೈತನ್ಯ ನೀಡಲಿ, ಚಿತ್ರರಂಗ ಮತ್ತೆ ಕಳೆಗಟ್ಟಲಿ ಎಂಬುದು ಎಲ್ಲರ ಆಶಯ.

ಜಿ.ಎಸ್‌.ಕಾರ್ತಿಕ ಸುಧನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next