Advertisement

ಪ್ರವಾಹ ಪೀಡಿತ ಯಾವ ರಾಜ್ಯಕ್ಕೂ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಿಲ್ಲ: ಸಿಎಂ

10:01 AM Oct 04, 2019 | Team Udayavani |

ಬೆಳಗಾವಿ: ದೇಶದ ಪ್ರವಾಹಪೀಡಿತ ಯಾವ ರಾಜ್ಯಕ್ಕೂ ಕೇಂದ್ರದಿಂದ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

Advertisement

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಕ್ಕೆ ಬಿಡುಗಡೆ ಆಗಿ, ಕರ್ನಾಟಕಕ್ಕೆ ಪರಿಹಾರ ಬಂದಿಲ್ಲ ಅಂದ್ರೆ ಬೇರೆ ಮಾತು. ಯಾವ ರಾಜ್ಯಕ್ಕೂ ಕೇಂದ್ರದ ಪರಿಹಾರ ಬಿಡುಗಡೆ ಆಗಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಲ್ಲಿದ್ದರು. ಹೀಗಾಗಿ ಪ್ರವಾಹ ಪರಿಹಾರ ಬಿಡುಗಡೆ ಕುರಿತು ಸಭೆ ಆಗಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಮಾನಿಕ ಸಮೀಕ್ಷೆ ನಡೆಸಿಹೊಗಿದ್ದಾರೆ. ನಮ್ಮ ಅಧಿಕಾರಿಗಳು ಕೂಡ ಕೇಂದ್ರಕ್ಕೆ ಇಲ್ಲಿನ ವಾಸ್ತವವನ್ನು ತಿಳಿಸಿದ್ದಾರೆ. ಎರಡ್ಮೂರು ದಿನಗಳಲ್ಲಿ ಪರಿಹಾರ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕಾಂಗ್ರೆಸ್ ಜೆಡಿಎಸ್ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕಿತ್ತು, ಸಿಎಂ ಅವರಿಗೆ ತಾಕತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದು ತಾಕತ್ತಿನ ಪ್ರಶ್ನೆ ಅಲ್ಲ, ಶಾಂತ ರೀತಿಯಿಂದ ಕೇಂದ್ರದಿಂದ ಅನುದಾನ ಪಡೆದುಕೊಳ್ಳಬೇಕಾಗಿದೆ.ಎಂದರು. ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ ಅಂತ ನಾವೇನು ಕೈಕಟ್ಟಿ ಕುಳಿತುಕೊಂಡಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಮೂರುವರೆ ಸಾವಿರ ಕೋಟಿ ರೂ, ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚು ಹಣವನ್ನು ನಾವು ಬಿಡುಗಡೆ ಮಾಡುತ್ತೇವೆ.

Advertisement

ಪ್ರವಾಹ ಪುನರ್ವಸತಿ ಕಾರ್ಯ ಹಂತ ಹಂತವಾಗಿ ನಡೆದಿದೆ. ಈಗಾಗಲೇ ಮನೆ ಬಿದ್ದವರಿಗೆ ಹಾಗೂ ಪೌಂಡೇಷನ್ ಹಾಕಿಕೊಳ್ಳುವರಿಗೆ ಒಂದು ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರ ಚೆಕ್ ನ ಬಹುತೇಕರಿಗೆ ಕೊಟ್ಟಾಗಿದೆ ಎಂದರು.

ಅತಿವೃಷ್ಟಿಗೆ ಸಿಕ್ಕಿರುವ ರೈತರಿಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ನಾನು ರೈತನ ಮಗ. ಮಳೆ ನಾಶದಿಂದ ಬೆಳೆ ಹಾನಿಯಾದರೆ ಹೇಕ್ಟರ್ ಗೆ ಆರೂವರೆ ಸಾವಿರ. ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಯಾದ್ರೆ ಹೇಕ್ಟರ್ ಗೆ ಹನ್ನೆರಡು ಸಾವಿರ‌ ಕೇಂದ್ರದಿಂದ ಹಣ ಬಂದ ಕೂಡಲೇ ವಿತರಣೆ ಮಾಡುತ್ತೇವೆ ಎಂದರು.

ಕಾಂಗ್ರೆಸ್ ನವರು ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಎಂಬುದನ್ನು ನನ್ನ ಬಾಯಿಂದ ಹೇಳಲಾರೆ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ ಅದಕ್ಕೆ ನಾನು ವಿರೋಧ ಮಾಡುವುದಿಲ್ಲ‌ ಎಂದರು. ಮೂರು ದಿನ ಅಧಿವೇಶನ ಕರೆದಿದ್ದೇವೆ ಅಲ್ಲಿ ಚರ್ಚೆ ಆಗಲಿ. ಕೇಂದ್ರದಿಂದ ಹೆಚ್ಚು ಅನುದಾನ ತರಲು ಪ್ರಯತ್ನ ಮಾಡುತ್ತೇನೆ.

ಬೆಳಗ್ಗೆ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬಂದು ತಿಂಡಿ ತಿಂದುಕೊಂಡು‌ ಹೋಗಿದ್ದಾರೆ.

ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಅಂತಾ ನಮ್ಮ ಬಾಯಿಂದ ಹೇಳಿಸಬೇಡಿ ಎಂದು ಕಿಚಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next