Advertisement

ಆರ್ಥಿಕತೆ ಪ್ರಬಲವಾಗಿದೆ; ದೇಶಕ್ಕೆ ಹಿಂಜರಿತದ ಭಯವಿಲ್ಲ: ಸಚಿವೆ ನಿರ್ಮಲಾ ಸೀತಾರಾಮನ್‌

10:10 PM Aug 01, 2022 | Team Udayavani |

ನವದೆಹಲಿ: ಬೆಲೆಯೇರಿಕೆ ಕುರಿತು ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷಗಳ ಆಗ್ರಹಕ್ಕೆ ಕೊನೆಗೂ ಕೇಂದ್ರ ಸರ್ಕಾರ ಒಪ್ಪಿದೆ. ಸೋಮವಾರ ಲೋಕಸಭೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಲೆಯೇರಿಕೆ ಕುರಿತು ಮಾತನಾಡಿದ್ದಾರೆ. ಆದರೆ, ಅವರ ಹೇಳಿಕೆಯು ತೃಪ್ತಿಕರವಾಗಿಲ್ಲ ಎಂದು ಹೇಳಿರುವ ಕಾಂಗ್ರೆಸ್‌, ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದಿದೆ.

Advertisement

ಲೋಕಸಭೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ, “ಕೆಲವು ಮಾಧ್ಯಮಗಳು ವರದಿ ಮಾಡಿರುವಂತೆ ನಮ್ಮ ದೇಶ ಆರ್ಥಿಕ ಹಿಂಜರಿತದ ಕಡೆಗೆ ಹೋಗುವ ಸಾಧ್ಯತೆಯೇ ಇಲ್ಲ. ಕೊರೊನಾ ಸೋಂಕು, ಸೋಂಕಿನ 2ನೇ ಅಲೆ, ಒಮಿಕ್ರಾನ್‌, ರಷ್ಯಾ-ಉಕ್ರೇನ್‌ ಯುದ್ಧ ಮುಂತಾದ ಅನೇಕ ಸವಾಲುಗಳ ನಡುವೆಯೂ ನಾವು ಹಣದುಬ್ಬರವನ್ನು ಶೇ.7 ಅಥವಾ ಅದಕ್ಕಿಂತ ಕೆಳಗೆಯೇ ಇರುವಂತೆ ನೋಡಿಕೊಂಡಿದ್ದೇವೆ. ಅದನ್ನು ಎಲ್ಲರೂ ಗುರುತಿಸಬೇಕು’ ಎಂದರು.

ಪ್ರಸ್ತುತ ಚಿಲ್ಲರೆ ಹಣದುಬ್ಬರ ಶೇ.7ರಷ್ಟಿದೆ. 2004ರಿಂದ 2014ರವರೆಗಿನ ಯುಪಿಎ ಅವಧಿಯಲ್ಲಿ ಹಣದುಬ್ಬರವು ಎರಡಂಕಿಗೆ ಹೋಗಿತ್ತು. ಸತತ 22 ತಿಂಗಳ ಕಾಲ ಅದು ಶೇ.9ಕ್ಕಿಂತ ಹೆಚ್ಚಿತ್ತು. ನಮ್ಮ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅಡುಗೆ ಎಣ್ಣೆ ದರವನ್ನು ಇಳಿಕೆ ಮಾಡಿದೆ. ಜಿಎಸ್‌ಟಿ, ಮ್ಯಾಕ್ರೋ ದತ್ತಾಂಶವೇ ನಮ್ಮ ಆರ್ಥಿಕತೆ ಪ್ರಬಲವಾಗುತ್ತಿರುವುದಕ್ಕೆ ಸಾಕ್ಷಿ ಎಂದೂ ನಿರ್ಮಲಾ ಹೇಳಿದರು.

ಕಾಂಗ್ರೆಸ್‌ ಆರೋಪ.
ಇದೇ ವೇಳೆ, ಬಿಜೆಪಿ ನೇತೃತ್ವದ ಸರ್ಕಾರ ನೋಟು ಅಮಾನ್ಯ ಮತ್ತು ಜಿಎಸ್‌ಟಿ ಅನುಷ್ಠಾನದಲ್ಲಿ ಲೋಪ ಮಾಡುವ ಮೂಲಕ ಆರ್ಥಿಕತೆ ಹಳಿ ತಪ್ಪುವಂತೆ ಮಾಡಿತು ಎಂದು ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಆರೋಪಿಸಿದರು. ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಮಾತನಾಡಿ, “ಇಂಧನ ತೆರಿಗೆ ಮೂಲಕ ಕೇಂದ್ರ ಸರ್ಕಾರ 27.27 ಲಕ್ಷ ಕೋಟಿ ರೂ,ಗಳನ್ನು ಸಂಗ್ರಹಿಸಿದೆ. ಅದನ್ನು ಕೇಳಿದ ಕೂಡಲೇ ನಾವು ಯುಪಿಎ ಖರೀದಿಸಿದ ತೈಲ ಬಾಂಡ್‌ಗಳಿಗೆ ಹಣ ಪಾವತಿಸುತ್ತಿದ್ದೇವೆ ಎಂದು ಸುಳ್ಳು ಹೇಳಲಾಗುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಬಾಂಡ್‌ಗಳಿಗೆ ಪಾವತಿಸಿದ್ದು ಕೇವಲ ಶೇ.3.4ರಷ್ಟು ಅಂದರೆ 93,600 ಕೋಟಿ ರೂ. ಮಾತ್ರ’ ಎಂದರು.

ಅಮಾನತು ನಿರ್ಧಾರ ವಾಪಸ್‌
ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ನಾಲ್ವರು ಸಂಸದರ ಅಮಾನತು ನಿರ್ಧಾರವನ್ನು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಸೋಮವಾರ ವಾಪಸ್‌ ಪಡೆದಿದ್ದಾರೆ. ಸದನಕ್ಕೆ ಪ್ಲೆಕಾರ್ಡ್‌ಗಳನ್ನು ತರುವುದಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಈ ನಿರ್ಧಾರ ಕೈಗೊಂಡಿದ್ದಾರೆ.

Advertisement

ಸದನದೊಳಗೆ ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ವಾರದ ಹಿಂದೆ ನಾಲ್ವರು ಸಂಸದರನ್ನು ಮುಂಗಾರು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಿ ಓಂ ಬಿರ್ಲಾ ಆದೇಶ ಹೊರಡಿಸಿದ್ದರು. ಈಗ ಅಮಾನತು ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಸೋಮವಾರ ಲೋಕಸಭೆಯಲ್ಲಿ ಸುಗಮ ಕಲಾಪ ನಡೆಯಿತು.

ಚರ್ಚೆಗೆ ಒಪ್ಪಿಗೆ:
ರಾಜ್ಯಸಭೆಯಲ್ಲೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಅವಶ್ಯಕ ವಸ್ತುಗಳ ಬೆಲೆಯೇರಿಕೆ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ಸೋಮವಾರ ಘೋಷಿಸಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಈ ಕುರಿತ ಚರ್ಚೆಗೆ ಸಮಯ ಮೀಸಲಿಡಲಾಗುವುದು ಎಂದು ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಕೇಳಿಕೊಂಡರು.

2 ವಿಧೇಯಕಗಳು ಪಾಸ್‌
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಸಮೂಹ ನಾಶಕ ಶಸ್ತ್ರಾಸ್ತ್ರಗಳು ಮತ್ತು ಅವುಗಳ ವಿತರಣೆ ವ್ಯವಸ್ಥೆಗಳ (ಕಾನೂನುಬಾಹಿರ ಚಟುವಟಿಕೆ ತಡೆ) ತಿದ್ದುಪಡಿ ವಿಧೇಯಕ, 2022 ಸಂಸತ್‌ನಲ್ಲಿ ಅಂಗೀಕಾರಗೊಂಡಿದೆ. ಸಮೂಹ ನಾಶ ಶಸ್ತ್ರಾಸ್ತ್ರಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಷೇಧಿಸುವ ಮತ್ತು ಇಂಥ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಆರ್ಥಿಕ ಸಂಪನ್ಮೂಲಗಳು ಮತ್ತು ಆಸ್ತಿಪಾಸ್ತಿಗಳನ್ನು ಜಪ್ತಿ ಮಾಡುವ, ಸ್ತಂಭನಗೊಳಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ ವಿಧೇಯಕ ಇದಾಗಿದೆ. ಏಪ್ರಿಲ್‌ನಲ್ಲಿ ಇದು ಲೋಕಸಭೆಯಲ್ಲಿ ಪಾಸ್‌ ಆಗಿತ್ತು. ಇದೇ ವೇಳೆ, ಅಂಟಾಕ್ಟಿìಕ್‌ ಪ್ರದೇಶದಲ್ಲಿ ಭಾರತ ಸ್ಥಾಪಿಸುವ ಸಂಶೋಧನಾ ಕೇಂದ್ರಗಳಿಗೆ ದೇಶೀಯ ಕಾನೂನನ್ನು ಅನ್ವಯವಾಗಿಸುವ ಇಂಡಿಯನ್‌ ಅಂಟಾಕ್ಟಿಕ್‌ ವಿಧೇಯಕವೂ ಸಂಸತ್‌ನ ಅಂಗೀಕಾರ ಪಡೆದಿದೆ. ಇನ್ನು, ನ್ಯಾಷನಲ್‌ ರೈಲ್‌ ಆ್ಯಂಡ್‌ ಟ್ರಾನ್ಸ್‌ಪೊàಟೇìಷನ್‌ ಯುನಿವರ್ಸಿಟಿಯನ್ನು ಗತಿಶಕ್ತಿ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.

ಸದನದಲ್ಲೇ ಸಂಸದೆ ಹಸಿ ಬದನೆ ತಿಂದಿದ್ದೇಕೆ?
ಲೋಕಸಭೆಯಲ್ಲಿ ಬೆಲೆಯೇರಿಕೆ ಕುರಿತ ಚರ್ಚೆ ವೇಳೆ ಟಿಎಂಸಿ ಸಂಸದೆಯೊಬ್ಬರು ಹಸಿ ಬದನೆಕಾಯಿಯನ್ನು ತಿಂದಿದ್ದಾರೆ! ದರ ಏರಿಕೆಯು ಜನಸಾಮಾನ್ಯರ ಮೇಲೆ ಎಂಥ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಿದ ಸಂಸದೆ ಕಕೋಲಿ ಘೋಷ್‌ ದಸ್ತಿದಾರ್‌, “ಕಳೆದ ಕೆಲ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ 4 ಪಟ್ಟು ಹೆಚ್ಚಾಗಿದೆ. 600 ರೂ. ಇದ್ದದ್ದು ಈಗ 1,000 ರೂ. ಆಗಿದೆ. ನಾವೆಲ್ಲ ಹಸಿ ತರಕಾರಿಗಳನ್ನೇ ತಿನ್ನಬೇಕೆಂದು ಸರ್ಕಾರ ಬಯಸುತ್ತಿದೆಯೇ’ ಎಂದು ಪ್ರಶ್ನಿಸುತ್ತಾ ಹಸಿ ಬದನೆಕಾಯಿಯನ್ನು ಸದನದಲ್ಲೇ ಕಚ್ಚಿ ತಿಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next