ಕಲಬುರಗಿ: ಧರಣಿ, ಸತ್ಯಾಗ್ರಹ, ಮುಷ್ಕರ ನಿಮಿತ್ತ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಕಚೇರಿ ಮೆಟ್ಟಿಲುಗಳ ಮೇಲೆ ಕುಳಿತು ಮುಷ್ಕರ ಹಾಗೂ ಪ್ರತಿಭಟನೆ ಮಾಡುವಂತಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಕಚೇರಿಗೆ ಬರುವವರಿಗೆ ಮತ್ತು ಕಚೇರಿ ಕೆಲಸಕ್ಕೆ ಅಡಚಣೆಯಾಗುತ್ತಿದ್ದು, ಸುಗಮ ಕಾರ್ಯನಿರ್ವಹಣೆ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡಲು ಆವರಣ ಪ್ರವೇಶಕ್ಕೆ ತಡೆ ನೀಡಿ ಮೆಟ್ಟಿಲುಗಳ ಮುಂದೆ ಪ್ರತಿಭಟನೆ, ಮುಷ್ಕರ, ಸತ್ಯಾಗ್ರಹ ಕೈಗೊಳ್ಳದಂತೆ ಗುರುಕರ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಮೂರು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು
ಪ್ರತಿಭಟನೆ, ಮುಷ್ಕರನಿರತ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುಕೂಲವಾಗುವಂತೆ ಡಿ.ಸಿ. ಕಚೇರಿಗೆ ಪ್ರವೇಶಿಸುವ ಎಡ ಭಾಗದ ಪ್ರವೇಶ ದ್ವಾರದಲ್ಲಿ (ನಗರಾಭಿವೃದ್ಧಿ ಕಚೇರಿ ಪಕ್ಕದಲ್ಲಿ) ಪ್ರತ್ಯೇಕವಾಗಿ ಸ್ಥಳಾವಕಾಶ ನೀಡಿದ್ದು, ಅಲ್ಲಿಯೆ ಮನವಿ ಪತ್ರ ಸಲ್ಲಿಸುವಂತೆ ಡಿ.ಸಿ. ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.