Advertisement

“ಪ್ರತೀ ಮಸೀದಿಯಲ್ಲೂ ಶಿವಲಿಂಗ ಹುಡುಕುವುದೇಕೆ?’:ಮೋಹನ್‌ ಭಾಗವತ್‌ 

11:48 PM Jun 03, 2022 | Team Udayavani |

ಹೊಸದಿಲ್ಲಿ: “ವಾರಾಣಸಿಯ ಜ್ಞಾನವಾಪಿ ಮಸೀದಿಯ ಬಗ್ಗೆ ನಮ್ಮಲ್ಲಿ ಅನನ್ಯ ಭಾವನೆಯಿದೆ. ಆ ಭಾವನೆಗೆ ಅನುಗುಣವಾಗಿ ಜ್ಞಾನವಾಪಿ ವಿಚಾರದಲ್ಲಿ ನಾವು ಕಾನೂನು ಹೋರಾಟ ಮಾಡುತ್ತಿರುವುದು ಸರಿಯಷ್ಟೆ. ಹಾಗೆಂದು ಎಲ್ಲ ಮಸೀದಿಗಳನ್ನು ವಿವಾದಕ್ಕೊಳಪಡಿಸುವುದು, ಎಲ್ಲಾ ಮಸೀದಿಗಳಲ್ಲಿ ಶಿವಲಿಂಗವನ್ನು ಹುಡುಕುವುದು ಸರಿಯಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಲಾಗಿದ್ದ ಸಂಘ ಶಿಕ್ಷಾ ವರ್ಗದ 3ನೇ ವರ್ಷದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಪ್ರತಿಯೊಂದು ಪ್ರಾರ್ಥನಾ ಸ್ಥಳಗಳ ಬಗ್ಗೆಯೂ ನಾವೊಂದು ಭಾವನೆಯನ್ನು ಇಟ್ಟು ಕೊಂಡಿರುತ್ತವೆ. ಸುಖಾಸುಮ್ಮನೇ ಅವುಗಳ ಬಗ್ಗೆ ದಿನಕ್ಕೊಂದು ವಿವಾದ ಎಬ್ಬಿಸುವುದು ಸರಿಯಲ್ಲ. ಅಷ್ಟಕ್ಕೂ ವಿವಾದಗಳನ್ನು ನಾವೇಕೆ ಬೆಳೆಸ ಬೇಕು? ಎಂದು ಅವರು ಪ್ರಶ್ನಿಸಿದರು. “ನಾವು ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರಾರ್ಥನಾ ಮಂದಿರಗಳ ಧ್ವಂಸ ಪ್ರಕರಣಗಳು ಈಗಿರುವ ಮುಸ್ಲಿಮರು, ಹಿಂದೂಗಳು ನಡೆಸಿದ್ದಲ್ಲ. ನೂರಾರು ವರ್ಷಗಳ ಹಿಂದೆ ಹೊರಗಡೆಯಿಂದ ಬಂದು ಇಲ್ಲಿ ಆಳ್ವಿಕೆ ಮಾಡಿದವರು, ಭಾರತೀಯರು ಕಾಣುತ್ತಿದ್ದ ಸ್ವತಂತ್ರ ಭಾರತದ ಕನಸನ್ನು ನುಚ್ಚು ನೂರು ಮಾಡಲು ಹಾಗೂ ಅವರ ಆತ್ಮಬಲವನ್ನು ಉಡುಗಿಸಲು ದೇಗುಲಗಳನ್ನು ಧ್ವಂಸಗೊಳಿಸಿದರು. ಅದನ್ನು ಈಗ ಪುನಃ ಕೆದಕುವುದು ಸರಿಯಲ್ಲ ಎಂದು ಭಾಗವತ್‌ ಕಿವಿಮಾತು ಹೇಳಿದ್ದಾರೆ.

ಭಾಗವತ್‌ ಅವರ ಈ ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮುಸ್ಲಿಂ ಮುಖಂಡರು ಇದು ಆರ್‌ಎಸ್‌ಎಸ್‌ನ ಇಬ್ಬಗೆಯ ನೀತಿಗೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next