Advertisement

ಇನ್ನು ನಗರದಲ್ಲಿ ಸ್ಫೋಟಕ ಸಾಮಗ್ರಿ ದಾಸ್ತಾನಿಗಿಲ್ಲ ಅನುಮತಿ

07:56 PM Oct 11, 2021 | Team Udayavani |

ಮಹಾನಗರ: ಮಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶವನ್ನು “ಸುರಕ್ಷಿತ ವಲಯ’ವನ್ನಾಗಿ ಮಾಡಲು ಮಂಗಳೂರು ಪೊಲೀಸರು ಹೆಜ್ಜೆ ಇಟ್ಟಿದ್ದು ಸ್ಫೋಟಕ ಸಾಮಗ್ರಿಗಳ ದಾಸ್ತಾನಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ.

Advertisement

ನಗರ ವೇಗವಾಗಿ ಬೆಳೆಯುತ್ತಿರುವು ದರಿಂದ ಇಲ್ಲಿ ಸೂಕ್ತ ಅಂತರ ಕಾಪಾಡುವುದು ಸೇರಿದಂತೆ ಅಗ್ನಿಶಾಮಕ ಇಲಾಖೆಯ ನಿಯಮಗಳನ್ನು ಪಾಲಿಸುವುದು ಕಷ್ಟಸಾಧ್ಯ. ಮಾತ್ರವಲ್ಲದೆ ಮಂಗ ಳೂರು ವಿವಿಧ ರೀತಿಯಲ್ಲಿ ಸೂಕ್ಷ್ಮ ನಗರವಾಗಿದೆ. ಹಾಗಾಗಿ ಸ್ಫೋಟಕ ಸಾಮಗ್ರಿಗಳ ದಾಸ್ತಾನುಗಳ ಸಂಗ್ರಹಕ್ಕೆ ಅವಕಾಶ ನೀಡದಿರಲು ಅಗ್ನಿ ಶಾಮಕ ಇಲಾಖಾಧಿಕಾರಿಗಳು ಮತ್ತು ಪೊಲೀಸರು ನಿರ್ಧರಿಸಿದ್ದಾರೆ.

11 ಮಂದಿಗೆ ನೋಟಿಸ್‌
ಮಂಗಳೂರು ನಗರ ಸಹಿತ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 11 ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕೇಂದ್ರ/ ಮಳಿಗೆಗಳಿಗೆ ನೋಟಿಸ್‌ ನೀಡಿ ತೆರವುಗೊ ಳಿಸಲು ಸೂಚಿಸಲಾಗಿದೆ. ಈ ಪೈಕಿ ನಗರದ ಬಹುತೇಕ ಮಂದಿ ಸ್ಫೋಟ ಸಾಮಗ್ರಿ ದಾಸ್ತಾನು/ ಮಾರಾಟ ವ್ಯಾಪಾರಸ್ಥರು ತೆರವುಗೊಳಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

1,600 ಕೆ.ಜಿ.ಗೂ ಅಧಿಕ ಸ್ಫೋಟಕ ವಶ !
ಮಂಗಳೂರು ಪೊಲೀಸರು ಇದೇ ಮೊದಲ ಬಾರಿಗೆ ಎಂಬಂತೆ ಕಳೆದೆರಡು ತಿಂಗಳುಗಳಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಿ 1,600 ಕೆ.ಜಿ.ಗೂ ಅಧಿಕ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ ಪೊಟ್ಯಾಶಿಯ ನೈಟ್ರೇಟ್‌, ಬೇರಿಯಂ ನೈಟ್ರೇಟ್‌, ಅಲ್ಯುಮೀನಿಯಂ ಪೌಡರ್‌, ಗನ್‌ ಪೌಡರ್‌, ಗಂಧಕದ ಪೌಡರ್‌ ಮೊದಲಾದವು ಸೇರಿವೆ.

ಮಂಗಳೂರು ಕೇಂದ್ರ
ಪಟಾಕಿ ತಯಾರಿಕೆಗೆ, ಪ್ರಾಣಿಗಳ ಬೇಟೆ, ಮೀನುಗಳನ್ನು ಹಿಡಿಯಲು ತೋಟೆಯಂತಹ ಸ್ಫೋಟಕಗಳ ತಯಾರಿಕೆ, ಕಲ್ಲುಕೋರೆಗೆ ಬಳಕೆ ಮೊದಲಾದ ಉದ್ದೇಶಗಳಿಂದ ಮಂಗಳೂರು ನಗರವನ್ನು ಕೇಂದ್ರೀಕರಿಸಿ ಸ್ಫೋಟಕ ಸಾಮಗ್ರಿಗಳ ದಾಸ್ತಾನು, ಮಾರಾಟ ಭಾರೀ ಪ್ರಮಾಣದಲ್ಲಿ ನಡೆಯುತ್ತಿತ್ತು. ನಗರದ ಹೊರವಲಯದಲ್ಲಿಯೂ ಹಲವಾರು ವರ್ಷಗಳಿಂದ ಸ್ಫೋಟಕ ಸಾಮಗ್ರಿಗಳ ವ್ಯಾಪಾರ ನಡೆದುಕೊಂಡು ಬಂದಿತ್ತು.

Advertisement

ಇದನ್ನೂ ಓದಿ:ನಾನೂ ಹೆಣ್ಣು ಮಗುವಿನ ತಂದೆ, ಹೇಳಿಕೆ ತಪ್ಪಾಗಿ ಅರ್ಥೈಸಿದ್ದು ದುರದೃಷ್ಟಕರ : ಡಾ.ಸುಧಾಕರ್

ಪರವಾನಿಗೆ ನವೀಕರಣ ಇಲ್ಲ
ಮಂಗಳೂರಿನಲ್ಲಿರುವ ಸ್ಫೋಟಕ ಸಾಮಗ್ರಿಗಳ ಮಳಿಗೆಗಳ ಪೈಕಿ ಹೆಚ್ಚಿನವು ವಾಣಿಜ್ಯ ಕಟ್ಟಡದಲ್ಲಿ, ಇನ್ನು ಕೆಲವು ಜನವಸತಿ ಪ್ರದೇಶದಲ್ಲಿ ಇದ್ದುದರಿಂದ ಸುರಕ್ಷೆ ದೃಷ್ಟಿಯಿಂದ ಅಗ್ನಿಶಾಮಕ ದಳದವರು ಎನ್‌ಒಸಿ (ನಿರಾಕ್ಷೇಪಣ ಪತ್ರ) ನೀಡುತ್ತಿಲ್ಲ. ಹಾಗಾಗಿ ಅವರಿಗೆ ಪರವಾನಿಗೆ ಸಿಗುತ್ತಿಲ್ಲ. ಕೆಲವರು ಈ ಹಿಂದೆ ತಾತ್ಕಾಲಿಕ ಪರವಾನಿಗೆ ಪಡೆದುಕೊಂಡಿದ್ದರು. ಅವರಿಗೆ ನೋಟಿಸ್‌ ನೀಡಿದ್ದೇವೆ. ಪರವಾನಿಗೆ ಹೊಂದಿಲ್ಲದವರ ವಿರುದ್ಧ ಸ್ಫೋಟಕ ಸಾಮಗ್ರಿ ಕಾಯಿದೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಪಟಾಕಿ ಮಾರಾಟ ಮಾಡುವವರಿಗೆ ತೆರೆದ ಸ್ಥಳದಲ್ಲಿ ಸೀಮಿತ ಅವಧಿಗೆ ಮಾತ್ರ ಪರವಾನಿಗೆ ನೀಡಲಾಗುತ್ತದೆ.

ಪಟಾಕಿ ಉದ್ಯಮಕ್ಕೆ ಪೆಟ್ಟು
ಪೊಲೀಸರ ಕ್ರಮದಿಂದಾಗಿ ಪಟಾಕಿ ವ್ಯಾಪಾರಸ್ಥರು ತೊಂದರೆಗೆ ಸಿಲುಕಿದ್ದಾರೆ. “ಹತ್ತಾರು ವರ್ಷಗಳ ಹಿಂದೆ ಪರವಾನಿಗೆ ಪಡೆಯುವಾಗ ಸುತ್ತಮುತ್ತ ಅಂಗಡಿ, ಜನವಸತಿ ಪ್ರದೇಶ ಇರಲಿಲ್ಲ. ಆದರೆ ಈಗ ಜನವಸತಿ ಹೆಚ್ಚಾಗಿದೆ. ಈಗ ಹೆಚ್ಚು ಶಕ್ತಿಶಾಲಿ ಪಟಾಕಿಗಳ ಮಾರಾಟಕ್ಕೆ ಅವಕಾಶ ಇಲ್ಲದಿರುವುದರಿಂದ ಪಟಾಕಿಗಳ ಮಾರಾಟಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಅಂತೆಯೇ ಪೊಲೀಸರು ಕೆಲವರಿಗೆ ನೋಟಿಸ್‌ ನೀಡಿ ಇನ್ನು ಕೆಲವರಿಗೆ ವ್ಯವಹಾರ ಮಾಡಲು ಅವಕಾಶ ನೀಡಿ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಈ ಹಿಂದೆ ಪಟಾಕಿ ವ್ಯಾಪಾರ ಮಾಡುತ್ತಿದ್ದ ಕೆಲವು ಮಂದಿ ದೂರಿದ್ದಾರೆ.

ಭದ್ರತೆಗೂ ಅಪಾಯ
ಮಂಗಳೂರು ನಗರವು ಉಡುಪಿ, ಚಿಕ್ಕಮಗಳೂರಿನ ನಕ್ಸಲ್‌ ಪ್ರದೇಶಗಳಿಗೆ ಸಮೀಪವಿದ್ದು, ಇದು ಸೂಕ್ಷ್ಮ ಕೇಂದ್ರ. ಇಲ್ಲಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸುವುದು ಆಂತರಿಕ ಭದ್ರತೆಗೂ ಅಪಾಯ. ಇಂತಹ ಸ್ಫೋಟಕಗಳು ದುಷ್ಕರ್ಮಿಗಳಿಗೆ ದೊರೆತರೆ ಭಾರೀ ಅನಾಹುತವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅಗ್ನಿ ಅವಘಡದಂತಹ ಅಪಾಯವೂ ಹೆಚ್ಚು.
-ಎನ್‌. ಶಶಿಕುಮಾರ್‌,
ಪೊಲೀಸ್‌ ಆಯುಕ್ತರು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next