ಬೆಳಗಾವಿ: ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡುವ ಉದ್ದೇಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೋಂಕು ನಿವಾರಣೆಗೆ ಲಾಕ್ ಡೌನ್ ಉತ್ತರ ಅಲ್ಲ. ಜನರು ಸರಕಾರದೊಂದಿಗೆ ಸಹಕರಿಸಬೇಕು. ಬೆಳಗಾವಿ ಲಾಕ್ ಡೌನ್ ಮಾಡುವ ಮುನ್ನ ಸಾಧಕ ಬಾದಕಗಳ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಕೋವಿಡ್ ವೈರಸ್ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದೆ. ಬೆಳಗಾವಿ ಲಾಕ್ ಡೌನ್ ಮಾಡುವುದು ಒಂದೇ ಕ್ರಮವಲ್ಲ. ಸರಕಾರ, ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಲಾಕ್ ಡೌನ್ ಮಾಡಿ ಸೋಂಕು ನಿಯಂತ್ರಣ ಸಾಧ್ಯವೇ ಎಂದು ಈಗಾಗಲೇ ನೋಡಿದ್ದೇವೆ. ಜನರು ಸಹಕಾರ ಕೊಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಕೊವೀಡ್-19 ದೊಡ್ಡ ರೋಗ ಅಲ್ಲ. ಜನರಲ್ಲಿ ಭಯ ಬಿಳಿಸುವ ಅಗತ್ಯ ಇಲ್ಲ. ಕೋವಿಡ್ ಸೋಂಕಿತರಲ್ಲಿ ಎ ಬಿ ಸಿ ಎಂದು ವಿಂಗಡನೆ ಮಾಡಲಾಗಿದೆ. ಎ ಕೆಟಗರಿ ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದರು.
ಬಿಮ್ಸ್ ದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಸೂಚನೆ ನೀಡಲಾಗಿದೆ ಎಂದರು.
ಅಂಬ್ಯುಲೆನ್ಸ್ ಕೊರತೆಯಿದ್ದರೆ ನಗರದಲ್ಲಿರುವ ಮ್ಯಾಕ್ಸಿಕ್ಯಾಬ್ ಗಳನ್ನು ಬಳಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬಿಮ್ಸ್ ನಲ್ಲಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದ ನಿರ್ದೇಶನ ನೀಡಲಾಗಿದೆ ಎಂದರು.
ಶಾಸಕ ಮಹೇಶ ಕುಮಠಳ್ಳಿ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್, ಎಸ್ಪಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.