Advertisement

ಒಂದು ವರ್ಷದಿಂದ ಪೂರ್ಣಕಾಲಿಕ ಪಿಡಿಒ ಇಲ್ಲ

07:34 PM Jan 22, 2022 | Team Udayavani |

ಅಜೆಕಾರು: ಗ್ರಾಮೀಣ ಭಾಗದ ಜನತೆಗೆ ಪ್ರತಿಯೊಂದು ಸರಕಾರಿ ಯೋಜನೆ ಲಭ್ಯವಾಗುವುದು ಗ್ರಾಮ ಪಂಚಾಯತ್‌ ಮುಖಾಂತರವೇ. ಪಂಚಾಯತ್‌ನ ಪ್ರಮುಖ ಅಧಿಕಾರಿಯಾಗಿರುವ ಪಿಡಿಒ ಇಲ್ಲದಿದ್ದರೆ ಜನಸಾಮಾನ್ಯರಿಗೆ ಯೋಜನೆಗಳು, ಸವಲತ್ತುಗಳು ದೊರೆ ಯುವುದು ಅಸಾಧ್ಯವಾಗಿದೆ.

Advertisement

ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದ 4 ಬಾರಿ ಅಭಿವೃದ್ಧಿಗಾಗಿ ರಾಜ್ಯ ಸರಕಾರದ ಗಾಂಧಿ ಗ್ರಾಮ ಪುರಸ್ಕಾರ ಪಡೆದ ವರಂಗ ಗ್ರಾ.ಪಂ. ಕಳೆದ ಒಂದು ವರ್ಷಗಳಿಂದ ಪೂರ್ಣಕಾಲಿಕ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಇಲ್ಲದೆ ಬಸವಳಿಯುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ವರಂಗ ಪಂಚಾಯತ್‌ನಲ್ಲಿ ಪೂರ್ಣಕಾಲಿಕ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದವರನ್ನು 2020ನೇ ಸಾಲಿನಲ್ಲಿ ಹೆಬ್ರಿ ಪಂಚಾಯತ್‌ಗೆ ಪ್ರಭಾರವಾಗಿ ನಿಯೋಜನೆ ಮಾಡಿ, ಹೆಬ್ರಿಯಲ್ಲಿ ಪೂರ್ಣಕಾಲಿಕರಾಗಿದ್ದ ಪಿಡಿಒ ಅವರನ್ನು ವರಂಗಕ್ಕೆ ಪ್ರಭಾರವಾಗಿ ನಿಯೋಜಿಸಲಾಗಿತ್ತು. ಆದರೆ ವರಂಗಕ್ಕೆ ಪ್ರಭಾರವಾಗಿ ನಿಯೋಜನೆಗೊಂಡ ಪಿಡಿಒ ಅವರು ಪದೋನ್ನತಿಗೊಂಡು ವರ್ಗಾವಣೆ ಆದ ಬಳಿಕ ವರಂಗದಲ್ಲಿ ಪೂರ್ಣಕಾಲಿಕ ಪಿಡಿಒ ಇಲ್ಲದಂತಾಗಿದೆ.

2011ರ ಜನಗಣತಿ ಪ್ರಕಾರ ಸುಮಾರು 8,094 ಜನಸಂಖ್ಯೆ ಹೊಂದಿರುವ ವರಂಗ ಪಂಚಾಯ ತ್‌ ವ್ಯಾಪ್ತಿ ಯಲ್ಲಿ 1,474 ಮನೆಗಳಿವೆ. ಕಳೆದ 10 ವರ್ಷಗಳಲ್ಲಿ ಈ ಅಂಕಿ ಸಂಖ್ಯೆಗಳಿಗೆ ಇನ್ನಷ್ಟು ಸೇರ್ಪಡೆಗೊಂಡಿವೆ.

ಸೂಕ್ತ ಬಸ್‌ ವ್ಯವಸ್ಥೆಯೇ ಇಲ್ಲ
18 ಸದಸ್ಯರನ್ನು ಹೊಂದಿರುವ ಗ್ರಾ.ಪಂ.ನ ಕಚೇರಿ ಮುನಿಯಾಲಿನಲ್ಲಿದ್ದು ಅಂಡಾರು ಗ್ರಾಮಸ್ಥರು ಅಜೆಕಾರು ಮಾರ್ಗವಾಗಿ ಸುತ್ತು ಬಳಸಿ ಬಸ್‌ನಲ್ಲಿ ಬರಬೇಕಾದರೆ, ಪಡುಕುಡೂರು ಹಾಗೂ ಮುಟ್ಲುಪಾಡಿ ಭಾಗದ ಜನತೆಗೆ ಸೂಕ್ತ ಬಸ್‌ ವ್ಯವಸ್ಥೆಯೇ ಇಲ್ಲ. ಆದರೂ ಸಹ ಅಗತ್ಯ ಕಾರ್ಯಗಳಿಗಾಗಿ ಪಂ. ಕಚೇರಿಗೆ ಬಂದರೆ ಪಿಡಿಒ ಇಲ್ಲದೆ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಪೂರ್ಣಕಾಲಿಕ ಪಿಡಿಒ ಇಲ್ಲದೆ ಇರುವುದರಿಂದ ದೂರದ ಗ್ರಾಮಗಳಿಂದ ಬರುವ ನಾಗರಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ.

Advertisement

ಅಭಿವೃದ್ಧಿ ದೃಷ್ಟಿಯಿಂದಲೂ ಪೂರ್ಣಕಾಲಿಕ ಪಿಡಿಒ ಇಲ್ಲದೆ ಇರುವುದರಿಂದ ಹಿನ್ನಡೆಯಾಗುತ್ತದೆ. ಪ್ರಸ್ತುತ ಇಲ್ಲಿ ಪ್ರಭಾರ ಇರುವ ಪಿಡಿಒ ಅವರು ಶಿವಪುರ ಗ್ರಾಮ ಪಂಚಾಯತ್‌ನಲ್ಲಿ ಪೂರ್ಣಕಾಲಿಕ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದು ವಾರದಲ್ಲಿ ಕೆಲವು ದಿನಗಳಲ್ಲಿ ವರಂಗದಲ್ಲಿ ಕಾರ್ಯನಿರ್ವಹಿಸುತ್ತಾರೆ. ಎರಡು ದೊಡ್ಡ ಪಂ.ಗಳ ಕೆಲಸ ನಿರ್ವಹಿಸಬೇಕಾದ ಒತ್ತಡ ಇವರ ಮೇಲೆ ಇರುವುದರಿಂದ ವರಂಗಕ್ಕೆ ಪೂರ್ಣಕಾಲಿಕ ಪಿಡಿಒ ನೇಮಕ ವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿ ನಿತ್ಯ ನೂರಾರು ಮನವಿ
ಪಿಡಿಒ ಇಲ್ಲದೆ ಇರುವುದರಿಂದ ಗ್ರಾ.ಪಂ. ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸಲಾಗದ ಸ್ಥಿತಿ ಬಂದಿದೆ. ಪ್ರತಿನಿತ್ಯ ನೂರಾರು ಜನ ವಿವಿಧ ಮನವಿಗಳನ್ನು ಪಂ.ಗೆ ತರುತ್ತಾರೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ, ಸ್ವತ್ಛತೆಗೆ ಸಂಬಂಧ ಪಟ್ಟ ಯೋಜನೆಗಳ ಅನುಷ್ಠಾನಕ್ಕೆ ಪಿಡಿಒ ಅತ್ಯಗತ್ಯ.

ನಿರಂತರವಾಗಿ ನಡೆಯುವ ವಾರ್ಡ್‌ ಸಭೆ, ಕೋವಿಡ್‌ ಸಭೆ, ಉದ್ಯೋಗ ಖಾತರಿ ಯೋಜನೆ ಸಭೆ, ಮಹಿಳಾ ಗ್ರಾಮ ಸಭೆ, ಗ್ರಾಮಸಭೆ, ಸಂಜೀವಿನಿ ಗುಂಪುಗಳ ಸಭೆ, ಮನೆ ತೆರಿಗೆ, ಕಟ್ಟಡ ತೆರಿಗೆ, ಪಡಿತರ ಚೀಟಿ ವಿತರಣೆ, ಹೊಸ ಕಟ್ಟಡಗಳ ಪರವಾನಿಗೆ, ಉದ್ದಿಮೆಗಳ ಪರವಾನಿಗೆ ನವೀಕರಣ, ಹೊಸ ಉದ್ದಿಮೆಗಳ ಪರವಾನಿಗೆ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಹೆಬ್ರಿ ತಾಲೂಕಿನ ಪ್ರಮುಖ ಗ್ರಾ.ಪಂ.ಗಳಲ್ಲಿ ಒಂದಾಗಿರುವ ವರಂಗ ಗ್ರಾ.ಪಂ.ನಲ್ಲಿ ಅತ್ಯಗತ್ಯವಾಗಿರುವ ಪಿಡಿಒ ನೇಮಕ ಶೀಘ್ರವಾಗಿ ಆಗಬೆೇಕು ಆಗ ಮಾತ್ರ ಅಭಿವೃದ್ಧಿ ಕಾರ್ಯಗಳು ನಿರಂತರ ನಡೆಯುವ ಜತೆಗೆ ಸಾರ್ವಜನಿಕರು ಅಗತ್ಯ ಸೇವೆಗಳಿಗೆ ನಿರಂತರ ಅಲೆಯು ವುದನ್ನು ತಡೆಯಬಹುದಾಗಿದೆ.

ನಿರಂತರ ಮನವಿ
ವರಂಗ ಗ್ರಾಮ ಪಂಚಾಯತ್‌ಗೆ ಪೂರ್ಣ ಕಾಲಿಕ ಪಿಡಿಒ ಅಗತ್ಯ. ನೇಮಕ ಮಾಡುವಂತೆ ನಿರಂತರ ಮನವಿ ಮಾಡಲಾಗಿದೆ. ಶೀಘ್ರ ನೇಮಕವಾಗುವ ನಿರೀಕ್ಷೆ ಇದೆ.
-ಉಷಾ ಹೆಬ್ಟಾರ್‌,
ಅಧ್ಯಕ್ಷರು ವರಂಗ ಗ್ರಾ.ಪಂ.

ಶೀಘ್ರ ನೇಮಕ
ವರಂಗ ಗ್ರಾಮ ಪಂಚಾಯತ್‌ಗೆ ಪೂರ್ಣಕಾಲಿಕ ಪಿಡಿಒ ನೇಮಕ ಶೀಘ್ರದಲ್ಲಿ ಮಾಡಲಾಗುವುದು. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು
 -ಶಶಿಧರ್‌ ಕೆ.ಜಿ., ಕಾರ್ಯ ನಿರ್ವಹಣಾಧಿಕಾರಿ, ತಾ. ಪಂ. ಹೆಬ್ರಿ

-ಜಗದೀಶ್‌ ರಾವ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next