ಬೀದರ: ಜೆಸ್ಕಾಂ ಅಧಿಕಾರಿಗಳು ಕೈಗಾರಿಕಾ ಘಟಕಗಳಿಗೆ ವಿದ್ಯುತ್ ತೆರಿಗೆ ವಿನಾಯ್ತಿ ನೀಡುವಲ್ಲಿ ಆಸಕ್ತಿ ತೋರಿಸದಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜೆಸ್ಕಾಂ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಒಪ್ಪಿಗೆ ಸಮಿತಿ ಸಭೆಯಲ್ಲಿ ಎಂಎಸ್ಎಂಇ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಕೋವಿಡ್-19 ಗ್ವಾರಂಟೆಡ್ ಎಮೆರ್ಜಿನ್ಸಿ ಕ್ರಿಡಿಟ್ ಲೈನ್ (ಜಿಇಸಿಎಲ್) ಸಾ ಧಿಸಿದ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಕೂಡಲೇ ವಿದ್ಯುತ್ ತೆರಿಗೆ ವಿನಾಯ್ತಿ ಪ್ರಮಾಣಪತ್ರ ನೀಡಲು ಕ್ರಮ ವಹಿಸಬೇಕೆಂದು ಸೂಚಿಸಿದರು.
9 ಘಟಕಗಳಿಗೆ ವಿನಾಯ್ತಿ ಪ್ರಮಾಣಪತ್ರ: ರಾಜ್ಯ ಸರ್ಕಾರವು 2014-19ರ ಕೈಗಾರಿಕಾ ನೀತಿ ಜಾರಿ ತಂದಿದ್ದು, ಇದರನ್ವಯ ಸಣ್ಣ ಮತ್ತು ಅತೀ ಸಣ್ಣ ಘಟಕಗಳಿಗೆ ವಿದ್ಯುತ್ ತೆರಿಗೆ ಮೇಲೆ ಶೇ.5ರಷ್ಟು 5 ವರ್ಷಗಳಿಗೆ ತೆರಿಗೆ ವಿನಾಯ್ತಿ ನೀಡಬಹುದು. ಜೆಸ್ಕಾಂ ಇಇ ಇವರಿಗೆ ವಿದ್ಯುತ್ ತೆರಿಗೆ ವಿನಾಯ್ತಿ ನೀಡಲು 9 ಘಟಕಗಳಿಗೆ ವಿದ್ಯುತ್ ತೆರಿಗೆ ವಿನಾಯ್ತಿ ಪ್ರಮಾಣಪತ್ರ ನೀಡಲಾಗಿರುತ್ತದೆ ಎಂದು ಸಭೆಗೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದರು.
3694.27 ಲಕ್ಷ ರೂ. ಬಿಡುಗಡೆ: ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಒತ್ತು ಕೊಡಬೇಕು. ಕೇಂದ್ರ ಸರ್ಕಾರ 3 ಲಕ್ಷ ಕೋಟಿ ರೂ. ಪ್ಯಾಕೇಜನ್ನು ಎಂಎಸ್ ಎಂಇ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಜಿಇಸಿಎಲ್ ಜಾರಿ ತಂದಿದೆ. ಈ ಕುರಿತು ಈಗಾಗಲೇ ಜಿಲ್ಲೆಯ ಬ್ಯಾಂಕ್ ಅಧಿಕಾರಿಗಳು, ಪ್ರಮುಖ ಉದ್ದಿಮೆದಾರರೊಂದಿಗೆ ಜಾಗೃತಿ ಶಿಬಿರ ನಡೆದಿದೆ. ಈ ಯೋಜನೆಯಡಿ ಜು.20ರವರೆಗೆ ಜಿಲ್ಲೆಯ ವಿವಿಧ ಬ್ಯಾಂಕ್ಗಳಿಂದ 3426 ಕೈಗಾರಿಕಾ ಘಟಕಗಳಿಗೆ 4155.77 ಲಕ್ಷ ರೂ. ಮಂಜೂರಿಯಾಗಿ 3694.27 ಲಕ್ಷ ರೂ. ಬಿಡುಗಡೆ ಆಗಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿಗಳು ಸಭೆಗೆ ಮಾಹಿತಿ ನೀಡಿದರು.
ಈಗಾಗಲೇ ಮಂಜೂರಿಯಾದ ಅನುದಾನ ಕಾಲಮಿತಿಯೊಳಗೆ ಬಳಸಲು ಮತ್ತು ಗುರಿ ಸಾಧನೆಗೆ ಒತ್ತು ಕೊಡಬೇಕೆಂದು ಇದೇ ವೇಳೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು. ಎಂಎಸ್ಎಂಇ ಘಟಕಗಳಿಗೆ ಕೇಂದ್ರ ಸರ್ಕಾರದ ಸಿಜಿಟಿಎಂಎಸ್ಇ ಅಡಿ ನೀಡಿದ ಸಾಲ ಮಂಜೂರಿ ಮತ್ತು ಬ್ಯಾಂಕುಗಳಿಗೆ ನೀಡಿದ ಗುರಿ ಸಾಧನೆ ಸಮರ್ಪಕವಾಗಿ ನಿರ್ವಹಿಸುವಲ್ಲಿ ಮುತುವರ್ಜಿ ವಹಿಸಬೇಕೆಂದು ಜಿಲ್ಲಾಧಿ ಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬೀದರ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನವಳ್ಳಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆಲಶೆಟ್ಟಿ, ಎಸ್ಸಿ-ಎಸ್ಟಿ ಕೈಗಾರಿಕೋದ್ಯಮಗಳ ಸಂಘದ ಅಧ್ಯಕ್ಷ ವಿಜಯಕುಮಾರ, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಬಿ.ಎಂ. ಕಮತಗಿ, ಕೆಎಸ್ಎಫ್ಸಿ ಶಾಖಾ ವ್ಯವಸ್ಥಾಪಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.