Advertisement

ದೋಣಿಯಲ್ಲೇ ಸಾಗುತ್ತಿದೆ “ಕುರು ಕುದ್ರು’ವಾಸಿಗಳ ಬದುಕು…ನದಿ ದಾಟಲು ದೋಣಿಯೇ ಆಸರೆ

09:39 AM Nov 19, 2022 | Team Udayavani |

ಕುಂದಾಪುರ : ಮಳೆಗಾಲ ಮಾತ್ರವಲ್ಲ ವರ್ಷದ 365 ದಿನಗಳು ಸಹ ಇಲ್ಲಿನ ಜನರಿಗೆ ದೋಣಿ ಮೂಲಕ ಜೀವ ಕೈಯಲ್ಲಿ ಹಿಡಿದುಕೊಂಡೇ ನದಿ ದಾಟಿ, ಬದುಕು ಕಟ್ಟಿ ಕೊಳ್ಳಬೇಕಾದ ಅನಿವಾರ್ಯ. ಶಾಲೆ, ಪೇಟೆ, ಅಗತ್ಯ ವಸ್ತುಗಳ ಖರೀದಿ, ಕಚೇರಿ ಕೆಲಸ, ಇನ್ನಿತರ ದೈನಂದಿನ ಕಾರ್ಯಗಳಿಗೆ ಈ ದ್ವೀಪವಾಸಿಗಳಿಗೆ ದೋಣಿಯೊಂದೇ ಆಸರೆ.

Advertisement

ಇದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಡ ಗ್ರಾ.ಪಂ. ವ್ಯಾಪ್ತಿಯ ಪಡುಕೋಣೆ ಸಮೀಪದ “ಕುರು ಕುದ್ರು’ ದ್ವೀಪವಾಸಿಗಳ ನಿತ್ಯ ಅನುಭವಿಸುತ್ತಿರುವ ಸಾಹಸಮಯ ಚಿತ್ರಣ.
ಕುರು ಕುದ್ರುವಿನ ಸುತ್ತ ಸೌಪರ್ಣಿಕಾ ನದಿಯಿದೆ. ಮರವಂತೆ, ಪಡುಕೋಣೆ, ನಾವುಂದ ಗ್ರಾಮಗಳು 3 ಸುತ್ತಲೂ ಈ ಕುರುವನ್ನು ಆವರಿಸಿಕೊಂಡಿವೆ. ಆದರೆ ಮಧ್ಯೆ ನದಿಯೊಂದು ಮಾತ್ರ ಇವುಗಳನ್ನು ಬೇರ್ಪಡಿಸಿದೆ. ಮರವಂತೆಯಿಂದ ದೋಣಿ ಮೂಲಕ, ಮತ್ತೂಂದು ಕಡೆಯಿಂದ ನಾಡದ ಪಡು ಕೋಣೆಯಿಂದ ದೋಣಿ ಮೂಲಕ ಈನ ಕುರು ಕುದ್ರು ವಿಗೆ ಬರಬಹುದು. ಇಲ್ಲಿನ ಜನರಿಗೆ ತೂಗು ಸೇತುವೆಯೊಂದು ಆದರೆ ಮತ್ತೆಲ್ಲ ಸಮಸ್ಯೆಗಳು ಈಡೇರಿದಂತೆಯೇ. 2 ದಶಕಗಳಿಗೂ ಹೆಚ್ಚು ಕಾಲದಿಂದ ಬೇಡಿಕೆ ಇಡುತ್ತಿದ್ದು, ಇನ್ನೂ ಈಡೇರಿಲ್ಲ. ದ್ವೀಪವಾಸಿಗಳ ಬದುಕು ಮಾತ್ರ ದೋಣಿಯಲ್ಲೇ ಕಳೆದು ಹೋಗುತ್ತಿದೆ.

20 ಮಕ್ಕಳು ಶಾಲೆಗೆ
ಕುರು ಕುದ್ರು 40 ಎಕರೆ ವಿಸ್ತೀರ್ಣ ಹೊಂದಿದ್ದು, ಒಟ್ಟು 8 ಕುಟುಂಬಗಳು ನೆಲೆಸಿದ್ದು, 75 – 80 ಮಂದಿ ಇಲ್ಲಿದ್ದಾರೆ. ಹಿಂದೆ ಇನ್ನು 8-10 ಮನೆಗಳಿದ್ದು, ಅವರೆಲ್ಲ ಈ ಸಂಕಷ್ಟದ ಬದುಕಿನಿಂದಾಗಿ ದ್ವೀಪ ಬಿಟ್ಟು, ಬೇರೆಡೆಗೆ ತೆರಳಿದ್ದಾರೆ. 1ನೇ ತರಗತಿಯಿಂದ ಕಾಲೇಜು ವರೆಗಿನ 20 ಮಕ್ಕಳು ಪ್ರತೀ ನಿತ್ಯ ಈ ನದಿಯನ್ನು ದೋಣಿ ಮೂಲಕ ದಾಟಿ ಹೋಗಿ ಬರುತ್ತಿದ್ದಾರೆ. ಭತ್ತ ಹಾಗೂ ತೆಂಗು ಕೃಷಿಯೇ ಇಲ್ಲಿನ ಜನರ ಬದುಕಿಗೆ ಆಸರೆಯಾಗಿದೆ. ಇಲ್ಲೊಂದು ಕಿ.ಪ್ರಾ. ಶಾಲೆ ಇತ್ತು. ಶಿಕ್ಷಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದ ಕಾರಣ ಸುಮಾರು 20 ವರ್ಷಗಳ ಹಿಂದೆ ಆ ಶಾಲೆ ಮುಚ್ಚಿದೆ. ಈಗದರ ಕುರುಹು ಮಾತ್ರವಿದೆ.

ದೋಣಿಯೇ ಆಧಾರ
ಮಳೆಗಾಲವಿರಲಿ, ಬೇಸಗೆಯೇ ಇರಲಿ. ದೋಣಿಯೊಂದೇ ಇಲ್ಲಿನ ವಾಸಿಗಳಿಗೆ ನದಿ ದಾಟಲು ಊರುಗೋಲು. ಮಳೆಗಾಲದಲ್ಲೂ ತುಂಬಿ ಹರಿಯುವ ಸೌಪರ್ಣಿಕಾ ನದಿ ದಾಟಿ ಶಾಲೆಗೆ ಬರಬೇಕಾದ ಅನಿವಾರ್ಯತೆ ಮಕ್ಕಳದು. ಯಾರಿಗಾದರೂ ಅನಾರೋಗ್ಯ ಉಂಟಾದರೆ, ಗರ್ಭಿಣಿಯರ ಪಾಡಂತೂ ಹೇಳತೀರದು.

20 ವರ್ಷಗಳಿಂದಲೂ ಬೇಡಿಕೆ
ಕುರು-ಪಡುಕೋಣೆ ನಡುವೆ ತೂಗು ಸೇತುವೆ ನಿರ್ಮಿಸಿಕೊಡಿ ಎಂಬುದು ಸುಮಾರು 2 ದಶಕಗಳಿಂದಲೂ ನಾವು ಬೇಡಿಕೆ ಇಡುತ್ತಿದ್ದೇವೆ. ಐ.ಎಂ. ಜಯರಾಮ ಶೆಟ್ಟರ ಕಾಲದಿಂದಲೂ ಒತ್ತಾಯಿಸುತ್ತಿದ್ದೇವೆ. ಆ ಬಳಿಕದ ಎಲ್ಲ ಶಾಸಕರು, ಸಂಸದರು, ಸರಕಾರಕ್ಕೆ, ಅಧಿಕಾರಿಗಳಿಗೆ ಮನವಿ ಕೊಡುತ್ತಿದ್ದೇವೆ. ಆದರೆ ಈವರೆಗೆ ನಮ್ಮ ಬೇಡಿಕೆ ಮಾತ್ರ ಈಡೇರಿಲ್ಲ.
– ರಾಮಚಂದ್ರ ಹೆಬ್ಟಾರ್‌ ಕುರು ಕುದ್ರು, ಊರ ಹಿರಿಯರು

Advertisement

ತೂಗು ಸೇತುವೆಗೆ ಪ್ರಯತ್ನ
ಕುರುಕುದ್ರುವಿಗೆ ಸ್ವತಃ ದೋಣಿಯಲ್ಲಿ ಹೋಗಿ ಜನರ ಸಮಸ್ಯೆ, ಅಹವಾಲುಗಳನ್ನು ಆಲಿಸಿದ್ದೇನೆ. ತೂಗು ಸೇತುವೆಗಾಗಿ ಈಗಾಗಲೇ ಸಂಬಂಧಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುರು ಕುದ್ರು ನಿವಾಸಿಗಳ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಆದ್ಯತೆ ನೆಲೆಯಲ್ಲಿ ತೂಗು ಸೇತುವೆಗಾಗಿ ಪ್ರಯತ್ನಿಸಲಾಗುವುದು.
– ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಪ್ರಶಾಂತ್ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next