Advertisement

ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ

03:01 PM Jan 21, 2020 | Suhan S |

ಚಿಕ್ಕಮಗಳೂರು: ಕುರುಬರ ಬೂದಿಹಾಳ್‌ ಗ್ರಾಮದಲ್ಲಿ 17.34 ಎಕರೆ ಕೆರೆ ಪ್ರದೇಶ ಒತ್ತುವರಿಯಾಗಿರುವ ವಿಷಯವನ್ನು ಹಲವು ಬಾರಿ ಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾದರೆ, ನಾವೇಕೆ ಸಭೆಗೆ ಬಂದು ವಿಷಯ ಪ್ರಸ್ತಾಪಿಸಬೇಕೆಂದು ತಾಲೂಕು ಪಂಚಾಯಿತಿ ಸದಸ್ಯೆ ಶುಭಾ ಕೃಷ್ಣಮೂರ್ತಿ ಪ್ರಶ್ನಿಸಿದರು.

Advertisement

ಸೋಮವಾರ ತಾಪಂ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಶಿರವಾಸೆ ಗ್ರಾಮದಲ್ಲಿ ನಿರಾಶ್ರಿತರಾದವರಿಗೆ ಬದಲಿ ಜಾಗ ಗುರುತಿಸುವುದಾಗಿ ತಹಶೀಲ್ದಾರ್‌ ನಂದಕುಮಾರ್‌ ಸಭೆಗೆ ತಿಳಿಸಿದರು. ಸದಸ್ಯ ಸಿದ್ದಾಪುರ ರಮೇಶ್‌ ಮಾತನಾಡಿ, ಇದುವರೆಗೂ ಜಾಗ ಗುರುತಿಸಿಲ್ಲ. ತಾಲೂಕು ಕಚೇರಿಯಲ್ಲಿ ಹಣ ಬರುವ ಕೆಲಸಗಳು ಮಾತ್ರ ನಡೆಯುತ್ತವೆ ಹೊರತು ಬೇರೆ ಕೆಲಸಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ತಾಪಂ ಮಾಜಿ ಅಧ್ಯಕ್ಷ ಡಿ.ಜೆ.ಸುರೇಶ್‌ ಮಾತನಾಡಿ, ವಸ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದೆ. ಹಾಗಾಗಿ, ಸಮೀಪದ ಆರೋಗ್ಯ ಕೇಂದ್ರದಿಂದ ವಸ್ತಾರೆ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು-ಮೂರು ದಿನ ವೈದ್ಯರು ಭೇಟಿ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಆರೋಗ್ಯಇಲಾಖೆ ಅಧಿಕಾರಿಗೆ ಸೂಚಿಸಿದರು. ಹುಚ್ಚುನಾಯಿ ಕಡಿತಕ್ಕೆ ಒಳಗಾಗುವ ಜಾನುವಾರುಗಳಿಗೆ ಪಶುಸಂಗೋಪನಾ ಇಲಾಖೆಯಲ್ಲಿ ಔಷಧ ಇಲ್ಲದಂತಾಗಿದೆ.

ಆಸ್ಪತ್ರೆಯಲ್ಲಿ ಔಷಧ ಉಚಿತವಾಗಿ ಸಿಗುವ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಶುವೈದ್ಯಾಧಿಕಾರಿ ಡಾ| ರಮೇಶ್‌, ಹುಚ್ಚುನಾಯಿ ಕಡಿತಕ್ಕೆ ನೀಡುವ ಔಷಧಿ ಮೂರು ತಿಂಗಳು ಮಾತ್ರ ವಾಯಿದೆ ಇರುತ್ತದೆ. ಬಳಿಕ ಪ್ರಯೋಜನವಿರುವುದಿಲ್ಲ. ಆದ್ದರಿಂದ ಸರ್ಕಾರವೇ ಔಷಧಿ ಖರೀದಿ ನಿಲ್ಲಿಸಿದೆ ಎಂದರು.

ತಾಪಂ ಅಧ್ಯಕ್ಷ ಜಯಣ್ಣ ಪ್ರತಿಕ್ರಿಯಿಸಿ, ಆಸ್ಪತ್ರೆಯ ಖರ್ಚು-ವೆಚ್ಚ ಭರಿಸುವ ಹಣದಲ್ಲೇ ಔಷಧ ಖರೀದಿಸಲು ಮುಂದಾಗಬೇಕೆಂದು ತಿಳಿಸಿದರು.

Advertisement

ಸಮಿತಿ ಅಧ್ಯಕ್ಷೆ ರೇಖಾ ಅನಿಲ್‌ ಮಾತನಾಡಿ, ಸತ್ತಿಹಳ್ಳಿ ಹಾಗೂ ಕೆಳಗೂರು ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆದ ಮಾತೃವಂದನಾ ಕಾರ್ಯಕ್ರಮದ ಇಲಾಖೆ ಮಾಹಿತಿ ಪುಸ್ತಕದಲ್ಲಿ ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವರ ಹೆಸರಿನ ಬದಲಿಗೆ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಮತ್ತು ಸಚಿವರ ಹೆಸರಿತ್ತು. ಅಧಿಕಾರಿಗಳ ಗಮನಕ್ಕೆ ಬಂದರು ಕೂಡ ಬದಲಾಯಿಸುವ ಕೆಲಸ ಮಾಡಿಲ್ಲ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೃಷ್ಣಪ್ಪ ಅವರನ್ನು ತರಾಟೆಗೆ ತಗೆದುಕೊಂಡರು. ಸಭೆಯಲ್ಲಿ ತಾಪಂ ಇಒ ರೇವಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next