ಪಟ್ನಾ : ಭೂತ ಪ್ರೇತಗಳ ಬಾಧೆಯಿಂದಾಗಿ ತಾನು ತನ್ನ ಸರಕಾರಿ ಬಂಗಲೆಯನ್ನು ತೆರವುಗೊಳಿಸಿದ್ದೇನೆ ಎಂಬ ವಿಚಿತ್ರ ಹೇಳಿಕೆ ನೀಡಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ಹಾಗೂ ಬಿಹಾರದ ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ .
“ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ನಾನು ವಾಸಿಸಿಕೊಂಡಿರುವ ಸರಕಾರಿ ಬಂಗಲೆಯೊಳಗೆ ಭೂತ ಪ್ರೇತಗಳನ್ನು ಛೂ ಬಿಟ್ಟಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ತೇಜ್ ಪ್ರತಾಪ್ ಯಾದವ್ ಅವರು “ನನಗೆ ಕಾಟ ನೀಡಿ ಪೀಡಿಸುವುದಕ್ಕಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ನಾನು ವಾಸವಾಗಿರುವ ಅಧಿಕೃತ ನಿವಾಸದೊಳಗೆ ಭೂತ ಪ್ರೇತಗಳನ್ನು ಛೂ ಬಿಟ್ಟಿದ್ದಾರೆ; ಅದಕ್ಕಾಗಿ ನಾನು ನಿವಾಸವನ್ನು ತೆರವುಗೊಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.
ಬಿಹಾರದಲ್ಲಿ ಮಹಾ ಘಟಬಂಧನ ಸರಕಾರ ಮುರಿದು ಬಿದ್ದ ತರುವಾಯ ಬಿಜೆಪಿ ಜತೆ ಸೇರಿ ಹೊಸ ಸರಕಾರ ರಚಿಸಿದ್ದ ಜೆಡಿಯು, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ಗೆ 2017ರ ಜುಲೈಯಲ್ಲಿ ತಮ್ಮ ಅಧಿಕೃತ ನಿವಾಸವನ್ನು ತೆರವುಗೊಳಿಸುವಂತೆ ಕೇಳಿಕೊಂಡಿತ್ತು.
ಅದಾಗಿ ಆರು ತಿಂಗಳು ಸಂದರೂ ಅವರು ನಿವಾಸವನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಭೂತ ಪ್ರೇತಗಳ ಕಾಟ ಕೊಡುತ್ತಿರುವ ನಿತೀಶ್ ಮತ್ತು ಸುಶೀಲ್ ಕುಮಾರ್ ಮೋದಿಯಿಂದಾಗಿ ತಾನು ತನ್ನ ಅಧಿಕೃತ ನಿವಾಸವನು ಬಿಟ್ಟುಕೊಡುತ್ತಿರುವುದಾಗಿ ಅವರು ಕಟಕಿಯಾಡಿದ್ದಾರೆ.
ಈಚೆಗೆ ಬಿಹಾರದ ಮೋತಿಹಾರಿಯಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ತೇಜ್ ಪ್ರಸಾದ್ ಯಾದವ್ ಅವರು, “ನನಗೆ ನಿತೀಶ್ ಅವರಂತಹ ಧೋಕೇಬಾಜ್ ದುಲ್ಹನಿಯಾ ಬೇಕಾಗಿಲ್ಲ’ ಎಂದು ಹೇಳಿದ್ದರು.