Advertisement

ವಿಶ್ವಾಸಕ್ಕೂ ಮೊದಲೇ ವಿಸ್ತರಣೆ! ; 24ಕ್ಕೆ ನಿತೀಶ್‌ ಸರ್ಕಾರಕ್ಕೆ ವಿಶ್ವಾಸಮತ ಅಗ್ನಿಪರೀಕ್ಷೆ

08:26 PM Aug 11, 2022 | Team Udayavani |

ಪಾಟ್ನಾ/ನವದೆಹಲಿ: ಬಿಹಾರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆರ್‌ಜೆಡಿ- ಜೆಡಿಯು ಮೈತ್ರಿ ಸರ್ಕಾರಕ್ಕೆ ಆ. 24ರಂದು ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಸೂಚಿಸಿದ್ದಾರೆ. ಅದಕ್ಕೂ ಮೊದಲೇ ತಮ್ಮ ಮಂತ್ರಿಮಂಡಲ ವಿಸ್ತರಿಸಲು ಸಿಎಂ ನಿತೀಶ್‌ ಕುಮಾರ್‌ ನಿರ್ಧರಿಸಿದ್ದಾರೆ.

Advertisement

ಹೆಚ್ಚು ಶಾಸಕರನ್ನು ಹೊಂದಿರುವ ಆರ್‌ಜೆಡಿಗೆ 16, ಜೆಡಿಯುಗೆ 13 ಸಚಿವ ಸ್ಥಾನ, ಕಾಂಗ್ರೆಸ್‌ಗೆ 4 ಸ್ಥಾನ, ಎಚ್‌ಎಎಂ ಪಕ್ಷಕ್ಕೆ ಒಂದು ಸ್ಥಾನ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಅಧಿವೇಶನ:

ಬಹುಮತ ಸಾಬೀತು ಪಡಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಆ. 24-25ರಂದು ಬಿಹಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಆ. 24ರಂದು ವಿಶ್ವಾಸ ಮತಯಾಚನೆ ಹಾಗೂ ಹೊಸ ಸ್ಪೀಕರ್‌ ಆಯ್ಕೆ ನಡೆಯಲಿದೆ.

ಅಪ್ಪಟ ಸುಳ್ಳು:

Advertisement

ಈ ನಡುವೆ ಉಪರಾಷ್ಟ್ರಪತಿ ಹುದ್ದೆ ನೀಡದ್ದಕ್ಕೆ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಳ್ಳಲಾಯಿತು ಎಂದು ರಾಜ್ಯಸಭಾ ಸದಸ್ಯ ಸುಶೀಲ್‌ ಮೋದಿ ಹೇಳಿಕೆಯನ್ನು ಸಿಎಂ ನಿತೀಶ್‌ ತಿರಸ್ಕರಿಸಿದ್ದಾರೆ. ಇದೊಂದು ಅಪ್ಪಟ ಸುಳ್ಳು ಮತ್ತು ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.

ತೇಜಸ್ವಿ ಯಾದವ್‌ ಗುಡುಗು :

2024ರ ಚುನಾವಣೆಯಲ್ಲಿ ನಿತೀಶ್‌ ಅವರು ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌, ಮೋದಿಯವರು ಪ್ರಧಾನಿ ಅಭ್ಯರ್ಥಿಯಾಗುತ್ತಾರಾದರೆ, ನಿತೀಶ್‌ ಯಾಕಾಗಬಾರದು ಎಂದಿದ್ದಾರೆ. ಮತ್ತೂಂದೆಡೆ, ನನ್ನ ವಿರುದ್ಧ ಕೇಂದ್ರ ಸರ್ಕಾರ ಜಾರಿ ನಿರ್ದೇಶನ (ಇ.ಡಿ) ಅಧಿಕಾರಿಗಳನ್ನು ಕಳಿಸಿದರೂ ನಾನು ಹೆದರುವುದಿಲ್ಲ. ಅವರು ಕಳಿಸುವ ಮೊದಲೇ ನಾನೇ ಅವರನ್ನು ನಮ್ಮ ಮನೆಗೆ ಬರುವಂತೆ ಆಹ್ವಾನಿಸುತ್ತೇನೆ ಎಂದಿದ್ದಾರೆ. ಈ ನಡುವೆ, ತೇಜಸ್ವಿ ಯಾದವ್‌ ಅವರಿಗೆ ಕೇಂದ್ರ ಸರ್ಕಾರ ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next